ಟಿಪ್ಪುಸುಲ್ತಾನ ಜಾಲಿಹಾರ ಹಾಗೂ ಸಂಗಯ್ಯ ಬಸಯ್ಯ ಬಳಿಗೇರಮಠ ಹೃದಯಾಘಾತದಿಂದ ಸಾವು| ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಅಧಿಕಾರಿಗಳು| ಸರ್ಕಾರದ ನರೇಗಾ ಯೋಜನೆಯಡಿ ಕೆಲಸಕ್ಕೆ ಹೋಗಿದ್ದರು ಮೃತ ಕೂಲಿ ಕಾರ್ಮಿಕರು| 

ಹೊಳೆಆಲೂರ(ಏ.29): ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗಿದ್ದ ಅಸೂಟಿ ಗ್ರಾಮದ ಟಿಪ್ಪುಸುಲ್ತಾನ ಜಾಲಿಹಾರ (50) ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ.

Add Asianetnews Kannada as a Preferred SourcegooglePreferred

ವರ್ಷವಿಡಿ ಗ್ರಾಮದಲ್ಲಿ ಸಣ್ಣ ಚಹಾದಂಗಡಿ ನಡೆಸಿ, 50ರಿಂದ 100 ಲಾಭ ಪಡೆದು ಇಡಿ ಕುಟುಂಬ ಸಲಹುತ್ತಿದ್ದ ಟಿಪ್ಪು ಸುಲ್ತಾನ್‌ ಜಾಲಿಹಾಳ ಸರ್ಕಾರದ ನರೇಗಾ ಯೋಜನೆಯಡಿ ಕೆಲಸಕ್ಕೆ ಹೋಗಿದ್ದರು. 15 ದಿವಸಗಳಿಂದ ತನ್ನ ಹೆಂಡತಿ, ಇಬ್ಬರು ಮಕ್ಕಳನ್ನು ಕರೆದುಕೊಂಡು ಚಹಾದಂಗಡಿ ಮುಚ್ಚಿ ಕೆಲಸಕ್ಕೆ ಸೇರಿದ್ದರು. ಖಾತ್ರಿ ಯೋಜನೆಯ ಬದು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಟಿಪ್ಪು ಸುಲ್ತಾನ್‌ ಕಟ್ಟೆ ಕಡಿದು ಪಕ್ಕದಲ್ಲಿ ಕುಳಿತಿದ್ದರು. ಹಠಾತ್‌ ಕುಸಿದು ಪ್ರಾಣ ಬಿಟ್ಟಿದ್ದಾರೆ. ಹೆಂಡತಿ, ಮಕ್ಕಳು ಶೋಕದ ಮಡುವಿನಲ್ಲಿ ಮುಳುಗಿದರು.

ಗ್ರಾಪಂ ಅಧ್ಯಕ್ಷೆ ಪಾರಮ್ಮ ಕಮಲಕಟ್ಟಿ, ಉಪಾಧ್ಯಕ್ಷ ಮಂಜು ಕೆಂದೂರ, ಪಿಡಿಒ ಮಂಜುನಾಥ ಗಣಿ, ಗ್ರಾಪಂ ಸದಸ್ಯರು, ಗ್ರಾಪಂ ಸಿಬ್ಬಂದಿ ಸೇರಿ ಗ್ರಾಪಂ ವತಿಯಿಂದ . 75 ಸಾವಿರ ಚೆಕ್‌ ವಿತರಣೆ ಮಾಡಿದ್ದಾರೆ.
ಮೃತ ಟಿಪ್ಪು ಸುಲ್ತಾನ ಇಡಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದರು. ಅವರ ನಿಧನರಾಗಿದ್ದರಿಂದ ಕುಟುಂಬಕ್ಕೆ ಆಘಾತವಾಗಿದೆ. ಸರ್ಕಾರದಿಂದ ಹೆಚ್ಚಿನ ಪರಿಹಾರ ನೀಡಬೇಕು ಎಂದು ಸಮಾಜದ ಮುಖಂಡ ಮಲಕಸಾಬ್‌ ಆಲೂರ, ಲಾಲ್‌ಸಾಬ್‌ ಅತ್ತಾರ, ಗ್ರಾಪಂ ಸದಸ್ಯ ಬಸವರಾಜ ರೊಟ್ಟಿ, ಕಮಲಸಾಬ್‌ ಜಾಲಿಹಾಳ, ಶರಣಪ್ಪ ಹಳ್ಳಕೇರಿ, ಪ್ರವೀಣ ಬಾರಕೇರ, ರಂಜಾನ್‌ ಮುಲ್ಲಾ, ವಿರೂಪಾಕ್ಷಿ ಕಸವಣ್ಣವರ ಹಾಗೂ ಗ್ರಾಮಸ್ಥರು ವಿನಂತಿಸಿದ್ದಾರೆ.

ವಲಸೆ ತಡೆಗೆ ದುಡಿಯೋಣ ಬಾ ಅಭಿಯಾನ : ಪ್ರತಿ ಕುಟುಂಬಕ್ಕೆ 60 ದಿನ ಉದ್ಯೋಗ

ಉದ್ಯೋಗ ಖಾತ್ರಿ ಕಾರ್ಮಿಕ ಸಾವು

ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ರೈತರ ಜಮೀನಿನಲ್ಲಿ ಬದುವು ನಿರ್ಮಾಣ ಕಾಮಗಾರಿ ಕೆಲಸ ಮಾಡುತ್ತಿದ್ದ ಕೂಲಿಕಾರ ಸಂಗಯ್ಯ ಬಸಯ್ಯ ಬಳಿಗೇರಮಠ (52) ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಾಮಗಾರಿ ನಡೆಯುತ್ತಿದ್ದ ವೇಳೆಯಲ್ಲಿ ಎದೆ ನೋವು ಕಾಣಿಸಿಕೊಂಡಿದ್ದು ಗ್ರಾಮದ ಆಸ್ಪತ್ರೆಗೆ ತರುವಾಗ ಕೊನೆಯುಸಿರೆಳೆದರು. ಮೃತರು ಪತ್ನಿಯೊಂದಿಗೆ ನಿತ್ಯ ಉದ್ಯೋಗ ಖಾತ್ರಿ ಕೆಲಸಕ್ಕೆ ತೆರಳುತ್ತಿದ್ದರು. ಒಬ್ಬ ಪುತ್ರಿ ಇದ್ದಾಳೆ.
ಸ್ಥಳಕ್ಕೆ ಗದಗ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ವಿದ್ಯಾಧರ ದೊಡ್ಡಮನಿ, ಕಾರ್ಯನಿರ್ವಾಹಕ ಅಧಿಕಾರಿ ಎಚ್‌.ಎಸ್‌. ಜನಗಿ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಕಾರ್ಯದರ್ಶಿ ಎ.ಬಿ. ಮೂಲಿಮನಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬಿ.ಆರ್‌. ತಿಮ್ಮನಗೌಡ್ರ, ಎಪಿಎಂಸಿ ಸದಸ್ಯ ಶಿವಪುತ್ರಪ್ಪ ಇಟಗಿ, ಗ್ರಾಪಂ ಅಧ್ಯಕ್ಷೆ ಯಲ್ಲವ್ವ ನೀರಲಗಿ, ಉಪಾಧ್ಯಕ್ಷ ಅಕ್ಬರಸಾಬ ನಾಗರಾಳ ಸರ್ವ ಸದಸ್ಯರು ಹಾಜರಿದ್ದರು.