ಕಸ ಸುರಿಯಲು ಯತ್ನಿಸಿದ ವಾಹನಗಳಿಗೆ ದಂಡ
ವಾಹನದಲ್ಲಿ ತಂದು ಹೋಟೆಲ್, ಅಂಗಡಿಗಳ ಕಸ ಸುರಿಯೋದು ಸಮಾನ್ಯವಾಗಿ ನಡೆಯುತ್ತಿರುತ್ತದೆ. ಆದರೆ ಇವರು ಅಧಿಕಾರಿಗಳ ಕಣ್ಣಿಗೆ ಸಿಕ್ಕಿಬೀಳೋದು ಅಪರೂಪ. ತುಮಕೂರಿನಲ್ಲಿ ಕಸ ಸುರಿಯಲು ಬಂದ 2 ಲಗೇಜ್ ಆಟೋವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತುಮಕೂರು(ಜು.31): ನಗರದ ಹೊರವಲಯದ ಗಾರೆನರಸಯ್ಯನಕಟ್ಟೆಹಾಗೂ ಅಕ್ಕತಂಗಿಯರ ಕೆರೆಯಂಗಳದಲ್ಲಿ ಕಸ ಸುರಿಯಲು ಯತ್ನಿಸುತ್ತಿದ್ದ 2 ಲಗೇಜ್ ಆಟೋಗಳನ್ನು ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದು ದಂಡ ವಿಧಿಸಿರುವ ಘಟನೆ ನಡೆದಿದೆ.
ನಗರದ ಅಕ್ಕತಂಗಿಯರ ಕೆರೆಯಂಗಳದಲ್ಲಿ ತರಕಾರಿ ಕಸ ಹಾಕಲು ತೆರಳಿದ್ದ ಲಗೇಜ್ ಆಟೋವನ್ನು ವಶಕ್ಕೆ ಪಡೆದು ಪಾಲಿಕೆ ಅಧಿಕಾರಿಗಳು 2 ಸಾವಿರ ರು. ದಂಡ ವಿಧಿಸಿದ್ದಾರೆ. ಇದೇ ರೀತಿ ಗಾರೆನರಸಯ್ಯನಕಟ್ಟೆಬಳಿ ಖಾಸಗಿ ಬ್ಯಾಂಕ್ವೊಂದರ ಸಿಬ್ಬಂದಿ ಲಗೇಜ್ ಆಟೋದಲ್ಲಿ ಪೇಪರ್ ಸೇರಿದಂತೆ ಇತರೆ ಕಸವನ್ನು ತುಂಬಿಕೊಂಡು ಬಂದು ಕಸ ಹಾಕಲು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ಅರಿತ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಸದರಿ ಆಟೋವನ್ನು ವಶಪಡಿಸಿಕೊಂಡು ಎರಡೂ ಆಟೋಗಳನ್ನು ಪಾಲಿಕೆ ಕಚೇರಿಗೆ ಕರೆ ತಂದು ಆಯುಕ್ತರ ಮುಂದೆ ಹಾಜರುಪಡಿಸಿದ್ದಾರೆ.
ಎಲ್ಲೆಂದರಲ್ಲಿ ಕಸ ಸುರಿದರೆ ವಾಹನ ಪರವಾನಗಿ ರದ್ದು:
ಎರಡೂ ಕಡೆ ಆಟೋಗಳಲ್ಲಿ ಕಸ ಸುರಿಯಲು ಬಂದಿದ್ದವರಿಗೆ ನಗರದಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಅರಿವು ಮೂಡಿಸಿದ ಆಯುಕ್ತ ಟಿ.ಭೂಬಾಲನ್, ಇನ್ನು ಮುಂದೆ ಇದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯಲು ಯತ್ನಿಸಿದರೆ ಅಂತಹ ವಾಹನಗಳ ಪರವಾನಗಿಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತುಮಕೂರು ನಗರವನ್ನು ಪಾಲಿಕೆ ವತಿಯಿಂದ ಸ್ವಚ್ಛ ತುಮಕೂರನ್ನಾಗಿ ಮಾಡಲು ಶ್ರಮಿಸಲಾಗುತ್ತಿದೆ. ಕಸವನ್ನು ಎಲ್ಲೆಂದರಲ್ಲಿ, ರಸ್ತೆಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡದೆ ಅನೈರ್ಮಲ್ಯ ಸೃಷ್ಟಿಸುವ ರೀತಿ ರಸವನ್ನು ಎಸೆದರೆ ಅಂಥವರಿಗೆ ದಂಡ ಹಾಕಲಾಗುವುದು ಎಂದರು.
ರಸ್ತೆ, ಕೆರೆಯಂಗಳ, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಬಾರದು. ಒಂದು ವೇಳೆ ಪಾಲಿಕೆಯ ಆದೇಶವನ್ನು ಉಲ್ಲಂಘಿಸಿ ಕಸ ಹಾಕಿದರೆ ಅಂಥ ವಾಹನಗಳಿಗೆ ಹೆಚ್ಚಿನ ಮೊತ್ತದಲ್ಲಿ ದಂಡ ವಿಧಿಸಿ, ವಾಹನಗಳ ಲೈಸೆನ್ಸ್ ರದ್ದುಪಡಿಸಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.
ಸಿಕ್ಕ ಸಿಕ್ಕಲ್ಲೆಲ್ಲ ಕಸ ಎಸೆದ್ರೆ ದಂಡ ಕಟ್ಬೇಕಾಗುತ್ತೆ ಹುಷಾರ್..!
ಕಸ ಸುರಿಯಲು ತಂದಿದ್ದ ವಾಹನಗಳಿಗೆ ದಂಡ:
ಗಾರೆನರಸಯ್ಯನಕಟ್ಟೆಗೆ ಖಾಸಗಿ ಬ್ಯಾಂಕ್ನವರು ಪೇಪರ್ ತುಂಬಿಕೊಂಡು ಕಸ ಹಾಕಲು ಬಂದಿದ್ದರು. ಅದೇ ರೀತಿ ಅಕ್ಕತಂಗಿಯವರ ಕೆರೆ ಬಳಿಗೆ ತರಕಾರಿ ತುಂಬಿಕೊಂಡು ಮತ್ತೊಂದು ವಾಹನ ಬಂದಿತ್ತು. ಈ ಎರಡೂ ವಾಹನವನ್ನು ಪಾಲಿಕೆಯ ಸಿಬ್ಬಂದಿ ಹಿಡಿದು ಪಾಲಿಕೆ ಆವರಣಕ್ಕೆ ಕರೆ ತಂದಿದ್ದು, ಈ ಎರಡೂ ವಾಹನಗಳಿಗೆ ತಲಾ 2 ಸಾವಿರ ರೂ. ದಂಡ ವಿಧಿಸಿ, ಸ್ವಚ್ಚತೆ ಕಾಪಾಡುವಂತೆ ಅರಿವು ಮೂಡಿಸಲಾಗಿದೆ ಎಂದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ