ಭದ್ರಾ ಮೇಲ್ದಂಡೆ ಯೋಜನೆಯಿಂದ ಶಿರಾ ತಾಲೂಕಿನ ಗೌಡಗೆರೆ ಹಾಗೂ ಹುಲಿಕುಂಟೆ ಹೋಬಳಿಗಳ ಕೆರೆಗಳಿಗೆ ಹರಿಸಬೇಕೆಂದು ಒತ್ತಾಯಿಸಿ ನಗರದ ತಾ.ಪಂ. ಕಚೇರಿ ಆವರಣದಲ್ಲಿ ಹಲವು ಸಂಘಟನೆಗಳಿಂದ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಯಿತು.

ಶಿರಾ : ಭದ್ರಾ ಮೇಲ್ದಂಡೆ ಯೋಜನೆಯಿಂದ ಶಿರಾ ತಾಲೂಕಿನ ಗೌಡಗೆರೆ ಹಾಗೂ ಹುಲಿಕುಂಟೆ ಹೋಬಳಿಗಳ ಕೆರೆಗಳಿಗೆ ಹರಿಸಬೇಕೆಂದು ಒತ್ತಾಯಿಸಿ ನಗರದ ತಾ.ಪಂ. ಕಚೇರಿ ಆವರಣದಲ್ಲಿ ಹಲವು ಸಂಘಟನೆಗಳಿಂದ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ನಿವೃತ್ತ ಇಂಜಿನಿಯರ್ ಜಯರಾಮಯ್ಯ, ಈಗಾಗಲೇ ಮದಲೂರು, ಕಳ್ಳಂಬೆಳ್ಳ ಸೇರಿದಂತೆ ಹಲವು ಕೆರೆಗಳಿಗೆ ಹೇಮಾವತಿ ನೀರು ಹರಿಯತ್ತಿದೆ. ಮತ್ತೆ ಅದೇ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ನೀರನ್ನು ಹರಿಸಲು ಕಾಮಗಾರಿ ನಡೆಯುತ್ತಿದೆ. ಹಾಲಿ ಹೇಮಾವತಿ ನಾಲೆಯ ನೀರು ಮಂಜೂರಾಗಿರುವ ಪ್ರದೇಶದೊಳಗೆ ಭದ್ರಾ ಯೋಜನೆಯಡಿ ಹರಿಸದಂತೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಪ್ರತ್ಯೇಕಗೊಳಿಸಬೇಕೆಂದು, 2020ನೇ ಇಸವಿಯಿಂದಲೂ ಹಲವು ರೀತಿಯಲ್ಲಿ ಅವಿರತ ಪ್ರಯತ್ನ ಮಾಡುತ್ತಾ ಬಂದಿದ್ದೇವೆ ಎಂದರು.

ಈ ಬಗ್ಗೆ ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ, ಶಾಸಕ ಟಿ.ಬಿ.ಜಯಚಂದ್ರರವರಿಗೆ, ಮಾಜಿ ಶಾಸಕ ಡಾ.ಸಿ.ಎಂ.ರಾಜೇಶಗೌಡ ಅವರಿಗೆ ಲಿಖಿತವಾಗಿ ತಿಳಿಸಲಾಗಿದೆ. ಆದರೂ ಜನಸಾಮಾನ್ಯರಿಗೆ ಶಾಶ್ವತ ಅನಾನುಕೂಲವಾಗುತ್ತಿರುವ ಮಾರ್ಗವನ್ನೇ ಮುಂದುವರಿಸುತಿದ್ದಾರೆ. ಗೌಡಗೆರೆ ಹಾಗೂ ಹುಲಿಕುಂಟೆ ಹೋಬಳಿಗಳ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯನ್ನು ಹೊರತುಪಡಿಸಿ ಬೇರೆ ಯಾವ ಯೋಜನೆಯಿಂದಲೂ ಭವಿಷ್ಯದಲ್ಲಿ ನೀರು ಪೂರೈಕೆ ಮಾಡಲು ಸಾಧ್ಯವಿಲ್ಲ. ಸಂವಿದಾನದನ್ವಯ ಸಾಮಾಜಿಕ ನ್ಯಾಯವನ್ನು ಪಾಲಿಸುವ ನಿಟ್ಟಿನಲ್ಲಿ, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಹುಲಿಕುಂಟೆ ಮತ್ತು ಗೌಡಗೆರೆ ಹೋಬಳಿಯ 35 ಕೆರೆಗಳಿಗೆ ನೀರನ್ನು ಹರಿಸಬೇಕು ಎಂದರು.

ಸರ್ವೋದಯ ಮಂಡಳದ ಅಧ್ಯಕ್ಷ ಆರ್.ವಿ.ಪುಟ್ಟಕಾಮಣ್ಣ ಮಾತನಾಡಿ, ಶಿರಾ ತಾಲೂಕಿನಲ್ಲಿ ಗೌಡಗೆರೆ ಹಾಗೂ ಹುಲಿಕುಂಟೆ ಹೋಬಳಿಗಳು ಮಳೆಯನ್ನೇ ಅವಲಂಬಿಸಿರುವ ಹೆಚ್ಚು ಬರಪೀಡಿತವಾಗಿರುವ ಪ್ರದೇಶಗಳಾಗಿವೆ. ಭವಿಷ್ಯದಲ್ಲಿ ಈ ಹೋಬಳಿಗಳ ಜನರಿಗೆ ನೀರಿನ ಸಂಕಷ್ಟ ಎದುರಾಗಲಿದೆ. ಆದ್ದರಿಂದ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಭದ್ರ ಯೋಜನೆಯ ನೀರನ್ನು ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿಗಳ ಕೆರೆಗಳಿಗೆ ಹರಿಸಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ಪ್ರಾಥಮಿಕವಾಗಿ ಸಾಂಕೇತಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುತ್ತೇವೆ. ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಎಂದರು.

ಧರಣಿ ಸತ್ಯಾಗ್ರಹದಲ್ಲಿ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕಂಬಣ್ಣ, ದಲಿತ ಸಂಘಷ್ ಸಮಿತಿಯ ಸಂಚಾಲಕ ಟೈರ್ ರಂಗನಾಥ್, ರೈತ ಸಂಘದ ಕದಿರೆಹಳ್ಳಿ ಮುಕುಂದಪ್ಪ, ಗೋಣಿಹಳ್ಳಿ ಜಯಣ್ಣ, ದ್ವಾರನಕುಂಟೆ ಡಿ.ಎಲ್.ರೇವಣ್ಣ, ಗೌಡಗೆರೆ ವೆಂಕಟೇಶ್, ನಿವೃತ್ತ ಶಿಕ್ಷಕ ಮಹಮದ್ ಜಿಯಾವುಲ್ಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.