ತೋಟ ನೆಲಸಮ ಪ್ರಕರಣ: ಗ್ರಾಮ ಲೆಕ್ಕಿಗನ ಅಮಾನತು
ತೋಟ ನೆಲಸಮ ಪ್ರಕರಣ: ಗ್ರಾಮ ಲೆಕ್ಕಿಗನ ಅಮಾನತು| ಡಿಸಿ ಕಚೇರಿ ಎದುರು ರೈತರ ಪ್ರತಿಭಟನೆ| ಪ್ರಾಥಮಿಕ ವರದಿ ಸರ್ಕಾರಕ್ಕೆ ಕಳಿಸಿದ್ದೇನೆ: ಡಿಸಿ
ತುಮಕೂರು[ಮಾ.11]: ದೇವಸ್ಥಾನದ ಜಾಗ ಒತ್ತುವರಿ ತೆರವು ನೆಪದಲ್ಲಿ ಸಿದ್ದಮ್ಮ, ಸಣ್ಣಕೆಂಪಯ್ಯ ಎಂಬವರಿಗೆ ಸೇರಿದ ನೂರಾರು ಅಡಕೆ, ತೆಂಗಿನ ಮರಗಳನ್ನು ನೆಲಸಮಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮ ಲೆಕ್ಕಿಗನನ್ನು ಮಂಗಳವಾರ ಅಮಾನತು ಮಾಡಲಾಗಿದೆ. ಜತೆಗೆ, ಈ ಪ್ರಕರಣದ ಕುರಿತ ಪ್ರಾಥಮಿಕ ವರದಿಯನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಕಳುಹಿಸಿರುವುದಾಗಿ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಮಕ್ಕಳಂತೆ ಸಾಕಿದ್ದ ಮರಗಳ ಮಾರಣ ಹೋಮ..! ಮುಗಿಲು ಮುಟ್ಟಿತು ರೈತ ಮಹಿಳೆಯ ಆಕ್ರಂದನ
ಅಧಿಕಾರಿಗಳು ಕಡಿದು ಹಾಕಿದ ಮರಗಳ ಜತೆಗೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ರೈತರಿಗೆ ಜಿಲ್ಲಾಧಿಕಾರಿ ಈ ವಿಚಾರ ತಿಳಿಸಿದ್ದಾರೆ. ಬುಧವಾರವೇ ಸರ್ವೆ ಮಾಡಿ ಉಪವಿಭಾಗಾಧಿಕಾರಿಗಳು ವರದಿ ನೀಡಲಿದ್ದಾರೆ. ಆ ಬಳಿಕ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಭರವಸೆಯನ್ನೂ ನೀಡಿದ್ದಾರೆ. ಮೇಲ್ನೋಟಕ್ಕೆ ಪ್ರಕರಣದಲ್ಲಿ ಗ್ರಾಮಲೆಕ್ಕಿಗನ ಪಾತ್ರ ಇದೆ ಎಂದು ಗೊತ್ತಾಗಿದ್ದು, ಹಾಗಾಗಿ ಅವರನ್ನು ಅಮಾನತು ಮಾಡಲಾಗಿದೆ. ಕೆಲ ವಿಷಯಗಳಲ್ಲಿ ಗೊಂದಲ ಇದೆ. ಈ ಸಂಬಂಧ ಇನ್ನೂ ಹೆಚ್ಚಿನ ವರದಿ ಕೇಳಿರುವುದಾಗಿ ತಿಳಿಸಿದರು.
ತೆರವು ಮಾಡುವ ವಿಚಾರದಲ್ಲಿ ಒಂದಷ್ಟುಗೊಂದಲ ಇದೆ. ಇಷ್ಟೊಂದು ತುರ್ತಾಗಿ ಅದನ್ನು ತೆರವು ಮಾಡುವ ಅವಶ್ಯಕತೆ ಏನಿತ್ತು, ಸಂಬಂಧಪಟ್ಟವರಿಗೆ ಯಾಕೆ ಮುಂಚಿತವಾಗಿ ನೋಟಿಸ್ ಜಾರಿ ಮಾಡಿಲ್ಲ ಎಂಬ ಬಗ್ಗೆ ಬಹಳಷ್ಟುಪ್ರಶ್ನೆಗಳು ಉದ್ಭವವಾಗಿದೆ. ಆ ಜಮೀನಿನಲ್ಲಿ 6 ಅರ್ಚಕರು ಅನುಭವದಲ್ಲಿದ್ದಾರೆ. ಈ ಕುರಿತು ಸಂಪೂರ್ಣ ವರದಿ ನೀಡಲು ಹೇಳಿದ್ದೇನೆ. ಸದ್ಯಕ್ಕೆ ಗ್ರಾಮ ಲೆಕ್ಕಿಗನನನ್ನು ಅಮಾನತು ಮಾಡಿದ್ದೇವೆ ಎಂದರು. ಉಳಿದವರ ಪಾತ್ರದ ವಿಚಾರವಾಗಿ ಹೆಚ್ಚಿನ ವರದಿ ಕೇಳಿದ್ದೇವೆ. ಬೇರೆ ಅಧಿಕಾರಿಗಳ ಪಾತ್ರ ಇದೆಯಾ ಅನ್ನೋ ವಿಚಾರವಾಗಿ ಹೆಚ್ಚಿನ ವರದಿ ಕೇಳಲಾಗಿದೆ. ನನ್ನ ಗಮನಕ್ಕೆ ತಹಸೀಲ್ದಾರ್ ಈ ಪ್ರಕರಣವನ್ನು ತಂದಿಲ್ಲ. ಆ ಕುರಿತೂ ವಿಚಾರಣೆ ನಡೆಸುತ್ತಿರುವುದಾಗಿ ತಿಳಿಸಿದರು.