ತುಮಕೂರಿನ ಹಳ್ಳಿಯೊಂದರಲ್ಲಿ ದಂಪತಿಯೊಂದು 35 ಜನರ ಆಧಾರ್ ಕಾರ್ಡ್ ಬಳಸಿ ಮೈಕ್ರೋ ಫೈನಾನ್ಸ್ ಸಾಲ ಪಡೆದು ಪರಾರಿಯಾಗಿದ್ದಾರೆ. ಸಾಲ ತೀರಿಸದೆ ಊರು ಬಿಟ್ಟಿರುವ ಈ ದಂಪತಿಯಿಂದಾಗಿ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತುಮಕೂರು (ಜ.27): ತುಮಕೂರಿನ ಹಳ್ಳಿಯೊಂದರಲ್ಲಿ ಚಾಲಾಕಿ ದಂಪತಿ ನಂಬಿಕಸ್ಥ 35 ಜನರ ಆಧಾರ್ ಕಾರ್ಡ್ ಪಡೆದು ಅವರ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್ ಸಾಲವನ್ನು ಪಡೆದು, ಇದೀಗ ಊರನ್ನು ಬಿಟ್ಟು ಓಡಿ ಹೋಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಮ್ಮ ನಡುವೆ ತುಂಬಾ ಆತ್ಮೀಯರಂತೆ ಇದ್ದು, ಒಳಗೊಳಗೆ ಮೆಣಸು ಅರೆಯುವವರ ಸಂಖ್ಯೆಗೆ ಕಡಿಮೆಯೇನಿಲ್ಲ. ಅವರು ನಮ್ಮಂತೆಯೇ ಇದ್ದು, ನಮ್ಮನ್ನು ಉದ್ಧಾರ ಮಾಡಿಬಿಡುತ್ತೇವೆ ಎಂದೆಲ್ಲಾ ನಯವಾಗಿ ಮಾತನಾಡಿ ನಮಗೆ ಮೋಸ ಮಾಡುವವರು ಕೂಡ ಇದ್ದಾರೆ. ಇದೇ ರೀತಿ ಹಳ್ಳಿಯೊಂದರಲ್ಲಿ ನೆಲೆಸಿದ್ದ ಚಾಲಾಕಿ ದಂಪತಿ ಸ್ವಲ್ಪ ಶಿಕ್ಷಣವಂತರಾಗಿದ್ದು, ಅಮಾಯಕ ರೈತ ಕುಟುಂಬ 35 ಜನ ಮಹಿಳೆಯರಿಗೆ ಮೋಸ ಮಾಡಿದ್ದಾರೆ. ನಮಗೆ ಕಷ್ಟ ಬಂದಿದೆ, ನಿಮ್ಮ ಆಧಾರ್ ಕಾರ್ಡ್‌ಗಳನ್ನು ಕೊಟ್ಟರೆ ಅದರ ಮೇಲೆ ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದು ಅದನ್ನು ನಾವೇ ತೀರಿಸುತ್ತೇವೆ ಎಂದು ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ. ನಂತರ ಸಾಲನ್ನು ತೀರಿಸದೇ ಊರನ್ನು ಬಿಟ್ಟು ರಾತ್ರೋ ರಾತ್ರಿ ಪರಾರಿ ಆಗಿದ್ದಾರೆ.

ಈ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುರವರ ಹೋಬಳಿಯ ದೊಡ್ಡಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. ಮೊದಲೇ ಹಳ್ಳಿ ಜನ ಅಲ್ವಾ, ಮುಗ್ದರು. 'ಹಳ್ಳಿ ಜನ, ಒಳ್ಳೆ ಜನ' ಎಂಬ ಮಾತು ಕೂಡ ಇವರ ವಿಚಾರದಲ್ಲಿ ಸತ್ಯವೇ ಆಗಿದೆ. ಏಕೆಂದರೆ ಗಂಡ, ಹೆಂಡತಿ ಮನೆ ಬಾಗಿಲಿಗೆ ಬಂದು ಕಷ್ಟ ಎಂದು ಹೇಳಿಕೊಂಡಾಗ ಅವರಿಗೆ ಮನಸ್ಸು ಕರಗಿ ತಮ್ಮ ಕೈಲಾದ ಸಹಾಯವನ್ನು ಮಾಡಲು ಮುಂದಾಗಿದ್ದೇ ಈಗ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ದೊಡ್ಡ ಹೊಸಳ್ಳಿ ಗ್ರಾಮದಲ್ಲಿ ನೆಲೆಸಿದ್ದ ಪ್ರತಾಪ್ ಹಾಗೂ ರತ್ನಮ್ಮ ದಂಪತಿ ಜನರಿಗೆ ಟೋಪಿ ಹಾಕಿ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ; ಚಾಮರಾಜನಗರ ಜಿಲ್ಲಾಡಳಿತ ಸಹಾಯವಾಣಿಗೆ ದೂರುಗಳ ಸುರಿಮಳೆ!

ದೊಡ್ಡ ಹೊಸಹಳ್ಳಿ ಗ್ರಾಮದ ಸುಮಾರು 35 ಮಂದಿಯ ಆಧಾರ್ ಕಾರ್ಡ್ ಪಡೆದು ವಂಚನೆ ಮಾಡಿದ್ದಾರೆ. ಆರಂಭದಲ್ಲಿ 10 ಕ್ಕೂ ಹೆಚ್ಚು ಮೈಕ್ರೋಫೈನಾನ್ಸ್ ಕಂಪನಿಯಿಂದ 50 ಲಕ್ಷಕ್ಕೂ ಹೆಚ್ಚು ಸಾಲ ಪಡೆದು ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಜನರ ಹೆಸರಲ್ಲಿ ತಾವೇ ಸಾಲ ಮಂಜೂರು ಮಾಡಿಕೊಂಡು, ತಾವೇ ಸಾಲದ ಹಣ ಕಟ್ಟುತ್ತೇವೆ ಎಂದು ಪಂಗನಾಮ ಹಾಕಿದ್ದಾರೆ. ಹಲವು ಮೈಕ್ರೋಫೈನಾನ್ಸ್ ಸಂಸ್ಥೆಗಳ ಜೊತೆ ಒಡನಾಟ ಇಟ್ಟುಕೊಂಡಿದ್ದ ಖತರ್ನಾಕ್ ದಂಪತಿ, ತಾವು ಸಂಘ ಮಾಡಿಕೊಂಡಿದ್ದು, ಇವರೆಲ್ಲರ ಹೆಸರಿನಲ್ಲಿಯೂ ಸಾಲವನ್ನು ನೀಡುವಂತೆ ಎಷ್ಟು ಸಾಧ್ಯವೋ ಅಷ್ಟು ಸಾಲವನ್ನು ಪಡೆದಿದ್ದಾರೆ.

ಇದೀದ ಸಾಲವನ್ನು ಮರುಪಾವತಿ ಮಾಡುವಂತೆ ಆಧಾರ್ ಕಾರ್ಡ್ ದಾಖಲೆಗಳನ್ನು ಹಿಡಿದು ಸಾಲಗಾರರ ವಿಳಾಸಕ್ಕೆ ಮೈಕ್ರೋ ಫೈನಾನ್ಸ್ ಕಂಪನಿ ಸಿಬ್ಬಂದಿ ಬಂದಿದ್ದಾರೆ. ಇದೀಗ ಆಧಾರ್ ಕೊಟ್ಟವರಿಗೆ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ನೀಡುತ್ತಿದ್ದಾರೆ. ಕಳೆದ 2 ತಿಂಗಳ ಹಿಂದೆಯೇ ಪ್ರತಾಪ್ ಮತ್ತು ರತ್ನಮ್ಮ ಪರಾರಿ ಆಗಿದ್ದು, ಗ್ರಾಮಸ್ಥರಿಗೆ ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ನೊಟೀಸ್ ಕೊಟ್ಟ ನಂತರವೇ ತಾವು ವಂಚನೆಗೆ ಒಳಗಾಗಿದ್ದೇವೆ ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಗ್ರಾಮಸ್ಥರು ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಸಾಲಗಾರರಿಗೆ ಕಿರುಕುಳ ಕೊಟ್ಟರೆ ಕ್ರಿಮಿನಲ್‌ ಕೇಸ್‌: ಮೈಕ್ರೋಫೈನಾನ್ಸ್‌ಗಳ ವಿರುದ್ಧ ಸುಗ್ರೀವಾಜ್ಞೆ ಅಸ್ತ್ರ