ಜಿಲ್ಲೆಯ ಬರ ಪರಿಸ್ಥಿತಿಯ ವಸ್ತು ಸ್ಥಿತಿ ಪರಿಶೀಲಿಸಲು ಕೇಂದ್ರ ಜಲ ಆಯೋಗದ ನಿರ್ದೇಶಕರಾದ ಅಶೋಕ್ ಕುಮಾರ್ ವಿ. ಅವರ ನೇತೃತ್ವದ ಅಧಿಕಾರಿಗಳ ಬರ ಪರಿಶೀಲನಾ ತಂಡವು ಶುಕ್ರವಾರ ತುಮಕೂರು ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

 ತುಮಕೂರು : ಜಿಲ್ಲೆಯ ಬರ ಪರಿಸ್ಥಿತಿಯ ವಸ್ತು ಸ್ಥಿತಿ ಪರಿಶೀಲಿಸಲು ಕೇಂದ್ರ ಜಲ ಆಯೋಗದ ನಿರ್ದೇಶಕರಾದ ಅಶೋಕ್ ಕುಮಾರ್ ವಿ. ಅವರ ನೇತೃತ್ವದ ಅಧಿಕಾರಿಗಳ ಬರ ಪರಿಶೀಲನಾ ತಂಡವು ಶುಕ್ರವಾರ ತುಮಕೂರು ಜಿಲ್ಲೆಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತದಿಂದ ಜಿಲ್ಲೆಯ ಬರಪರಿಸ್ಥಿತಿ ಕುರಿತು ಸವಿವರವಾಗಿ ತಂಡಕ್ಕೆ ವಿವರಣೆ ನೀಡಿ, ಮಧುಗಿರಿಯಿಂದ ಶಿರಾ ತಾಲೂಕಿಗೆ ಬೆಳೆಹಾನಿಯಾದ ಪ್ರದೇಶಗಳಿಗೆ ತಂಡ ಕರೆದೊಯ್ಯಲು ಕ್ರಮ ಕೈಗೊಳ್ಳಲಾಗಿದೆ, ತಂಡದಲ್ಲಿ ಎಂ.ಎನ್.ಸಿ.ಎಫ್.ಸಿ. ಹಾಗೂ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕರಣ್ ಚೌದರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧೀನ ಕಾರ್ಯದರ್ಶಿ ಸಂಗೀತ್ ಕುಮಾರ್ ಹಾಗೂ ರಾಜ್ಯದ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆಯ ಹಿರಿಯ ಸಮಾಲೋಚಕರಾದ ಡಾ. ಜಿ.ಎಸ್. ಶ್ರೀನಿವಾಸ್ ರೆಡ್ಡಿ ಉಪಸ್ಥಿತರಿರುವರು ಎಂದರು.

ಶುಕ್ರವಾರ ಮಧ್ಯಾಹ್ನ 1ಗಂಟೆಗೆ ಕೊರಟಗೆರೆ ತಾಲೂಕು ಅರಸಾಪುರದ ಬಳಿ ಬರಮಾಡಿಕೊಳ್ಳಲಾಗುವುದು. ಬೈರೇನಹಳ್ಳಿಯಲ್ಲಿ ಕಡ್ಲೆಕಾಯಿ, ಜೋಳ ಬೆಳೆ ನಾಶವಾಗಿರುವ ಪ್ರದೇಶಗಳಿಗೆ ಕರೆತರಲಾಗುವುದು. ಪೂಜಾರಹಳ್ಳಿ ಕಡ್ಲೆಕಾಯಿ ಬೆಳೆ ನಾಶವಾಗಿರುವ ಪ್ರದೇಶಕ್ಕೆ ಭೇಟಿ ಬಳಿಕ ಜಿಲ್ಲೆಯ ಬರಪರಿಸ್ಥಿತಿಯ ಸಮಗ್ರ ಮಾಹಿತಿ ನೀಡುವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗುವುದು ಎಂದರು.

ಡಿ.ವಿ.ಹಳ್ಳಿ ರಾಗಿ ಮತ್ತು ಜೋಳ ವೀಕ್ಷಣೆ, ಕೈಮರ ಗೋಕಟ್ಟೆ ವೀಕ್ಷಣೆ, ಕೂನಹಳ್ಳಿ ರಾಗಿ ಮತ್ತು ಜೋಳ ವೀಕ್ಷಣೆ, ಶಿರಾ ತಾಲೂಕಿನ ಗುಳಿಗೇನಹಳ್ಳಿಯಲ್ಲಿ ಕಡಲೆಕಾಯಿ ಪ್ರದೇಶ, ನ್ಯಾಯಗೆರೆ ನರೇಗಾ ಕಾಮಗಾರಿ, ಯರಗುಂಟೆ ಜೀನಿ ಮತ್ತು ಮೆಲೆಟ್ ಸಂಸ್ಕರಣಾ ಘಟಕ, ಕೊಟ್ಟಗೇಟ್ ರಾಗಿ ಬೆಳೆ ಪ್ರದೇಶ, ಓಜಗುಂಟೆ ನರೇಗಾ ಕಾಮಗಾರಿ ವೀಕ್ಷಣೆ, ಕಲ್ಲುಕೋಟೆ ಕಡಲೆಕಾಯಿ, ರಾಗಿ ವೀಕ್ಷಿಸಿ ತಂಡವನ್ನು ಚಿತ್ರದುರ್ಗ ಗಡಿ ಬಳಿ ಜವಗೊಂಡನಹಳ್ಳಿ ಬಳಿ ಬೀಳ್ಕೊಡಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 148 ಕೋಟಿ ಬೆಳೆ ಹಾನಿಯಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಉಪಕರಣಗಳು ಲಭ್ಯವಿದ್ದು, ರೈತರು ಅರೆ ನೀರಾವರಿ ಬೆಳೆಗಳನ್ನು ಬೆಳೆಯುವುದು ಉತ್ತಮ ಎಂದರು.

ಪ್ರಸ್ತುತ ಜಿಲ್ಲೆಯಲ್ಲಿ 7009070 ಕ್ವಿಂಟಲ್ ಒಣಮೇವು ಹಾಗೂ 580625 ಕ್ವಿಂಟಲ್ ಹಸಿ ಮೇವು ಲಭ್ಯವಿದ್ದು, ಈ ಹಂಗಾಮಿಗೆ ಒಟ್ಟು 4,17,678 ಮೇವು ಮಿನಿಕಿಟ್ ಬೇಡಿಕೆ ಇದ್ದು, ಕೊಳವೆ ಬಾವಿ ಹೊಂದಿರುವ ರೈತರನ್ನು ಗುರುತಿಸಿ, ಮಿನಿಕಿಟ್‌ ಬೆಳೆಯಲು ಯೋಜನೆ ರೂಪಿಸಿಕೊಳ್ಳಲಾಗುತ್ತಿದೆ ಎಂದರು.

ಜಿಪಂ ಸಿಇಒ ಜಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ತಲೆದೋರಿರುವ ಬರ ಪರಿಸ್ಥಿತಿಯಿಂದ ಬೆಳೆ ನಾಶವಾಗಿರುವ ರೈತರ ಅನುಕೂಲಕ್ಕೆ ನರೇಗಾ ಯೋಜನೆಯಡಿ 500 ಕೋಟಿ ರು. ವೆಚ್ಚದಲ್ಲಿ ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅನುಮತಿ ಕೊಟ್ಟು ಆದೇಶ ನೀಡಲಾಗಿದೆ ಎಂದರು.

ಸ್ವಚ್ಛತಾ ಹೀ ಸೇವಾ ಕಾರ್ಯವನ್ನು ನಿರಂತರ ಕೈಗೊಳ್ಳಲು ಎಸ್.ಬಿ.ಎಂ. ಯೋಜನೆಯಡಿ ಪ್ರತಿ ಗ್ರಾ.ಪಂ. ಗೆ ಉಪಕರಣ, ವಾಹನ ನೀಡಲಾಗಿದೆ. 330೦ ಗ್ರಾ.ಪಂ.ಗಳಲ್ಲಿ ನಿರಂತರ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು, ಗ್ರಾ.ಪಂ. ಸಂಪನ್ಮೂಲದಿಂದಲೇ ನಿರ್ವಹಣೆ ಮಾಡಲಾಗುತ್ತಿದೆ ಎಂದರು.