ಭಟ್ಕಳದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡದ ಹಣ ಸರ್ಕಾರದ ಬದಲು ಚಿನ್ನದಂಗಡಿಯ ಮಾಲೀಕರ ಖಾತೆಗೆ ಹೋಗುತ್ತಿದೆ ಎಂದು ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದೆ. ಪೊಲೀಸರು ದಂಡದ ಹಣವನ್ನು ವೈಯಕ್ತಿಕ ಮೊಬೈಲ್ ನಂಬರ್‌ಗೆ ವರ್ಗಾಯಿಸುತ್ತಿದ್ದು, ಈ ನಂಬರ್ ಚಿನ್ನದಂಗಡಿಯ ಮಾಲೀಕರದ್ದು ಎಂದು ತಿಳಿದುಬಂದಿದೆ.

ಭಟ್ಕಳ (ಆ.25): ಕೆಲವೊಂದು ಸ್ಕ್ಯಾಮ್‌ಗಳು ಹೇಗೆ ಆಗುತ್ತವೆ ಅಂತಾ ಅಂದಾಜು ಮಾಡೋದೇ ಕಷ್ಟ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದಲ್ಲಿ ನ್ಯಾಯ ಕಾಯುವ ಪೊಲೀಸರೇ ಸರ್ಕಾರದ ಖಜಾನೆಗೆ ಕನ್ನ ಹಾಕುವ ಕೆಲಸ ಮಾಡಿದ್ದಾರೆ. ನಗರಸಭೆ, ಪುರಸಭೆ ಹಾಗ ಪಟ್ಟಣ ಪಂಚಾಯತ್‌ ಪ್ರದೇಶಗಳಲ್ಲಿ ಸ್ಥಳೀಯ ಪೊಲೀಸರೇ ಟ್ರಾಫಿಕ್‌ ನಿಯಮ ಉಲ್ಲಂಘನೆಯ ದಂಡವನ್ನು ವಿಧಿಸುತ್ತಾರೆ. ಈ ಹಣ ಸರ್ಕಾರದ ಖಜಾನೆಗೆ ಸೇರುತ್ತದೆ ಎನ್ನುವುದು ಈವರೆಗೂ ನಾವಂದುಕೊಂಡಿದ್ದೆವು. ಆದರೆ, ಭಟ್ಕಳ ನಗರ ಪ್ರದೇಶದಲ್ಲಿ ಪೊಲೀಸರು ಟ್ರಾಫಿಕ್‌ ನಿಯಮ ಉಲ್ಲಂಘನೆಯ ದಂಡ ವಿಧಿಸಿದರೆ, ಅದು ಸೀದಾ ಚಿನ್ನದಂಗಡಿಯ ಮಾಲೀಕರೊಬ್ಬರ ಅಕೌಂಟ್‌ಗೆ ಹೋಗುತ್ತದೆ ಅನ್ನೋದನ್ನ ಸ್ಥಳೀಯ ವರದಿಗಾರರ ರಿಯಾಲಿಟಿ ಚೆಕ್‌ನಲ್ಲಿ ಪತ್ತೆಯಾಗಿದೆ. ಹೆಲ್ಮೆಟ್‌ ಇಲ್ಲದೆ ಬೈಕ್‌ ರೈಡ್‌ ಮಾಡಿದರೆ, ಸಂಚಾರ ಪೊಲೀಸರು ಅದಕಕೆ ದಂಡ ವಿಧಿಸುತ್ತಾರೆ. ಇದಕ್ಕೆ ಚಲನ್‌ ನೀಡಿ, ಹಣ ಪಡೆದುಕೊಳ್ಳುವುದು ವಾಡಿಕೆ. ಇತ್ತೀಚೆಗೆ ಕ್ಯೂಆರ್‌ ಕೋಡ್‌, ಡೆಬಿಟ್‌ ಕಾರ್ಡ್‌ ಮೂಲಕವೂ ಹಣ ಪಾವತಿಗೆ ಅವಕಾಶ ನೀಡಲಾಗಿದೆ. ಆದರೆ, ಭಟ್ಕಳದ ವರದಿಗಾರರು ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಈ ಹಣ ಚಿನ್ನದಂಗಡಿಯ ಮಾಲೀಕನ ಅಕೌಂಟ್‌ ಹೋಗುತ್ತಿದೆ. ರಿಯಾಲಿಟಿ ಚೆಕ್‌ನಲ್ಲಿ ಈ ಭ್ರಷ್ಟಾಚಾರ ಬಯಲಾಗಿದೆ.

ಮೂವರು ವರದಿಗಾರರು ಹೆಲ್ಮೆಟ್‌ ಇಲ್ಲದೆ, ನಗರ ಠಾಣೆಯ ರಸ್ತೆಯ ಎದುರುಗಡೆ ತೆರಳುತ್ತಿದ್ದ ವೇಳೆ ಇಬ್ಬರು ಪೊಲೀಸ್‌ ಸಿಬ್ಬಂದಿ ಬೈಕ್‌ ನಿಲ್ಲಿಸುವಂತೆ ಹೇಳಿದ್ದಾರೆ. ಈ ವೇಳೆ ಒಬ್ಬ ವರದಿಗಾರನಿಗೆ ಪಿಎಸ್‌ಐ ಯಲ್ಲಪ್ಪ ಅವರ ಬಳಿ ತೆರಳುವಂತೆ ಹೇಳಿದ್ದಾರೆ. ನಗರಠಾಣೆ ಆವರಣದ ಬಳಿ ನಿಂತಿದ್ದ ಪಿಎಸ್‌ಐ ಯಲ್ಲಪ್ಪ ಅವರ ಬಳಿ ಹೋದಾಗ, 500 ರೂಪಾಯಿ ದಂಡ ಕಟ್ಟುವಂತೆ ಸೂಚನೆ ನೀಡಿದ್ದಾರೆ. ಈ ಹಂತದಲ್ಲಿ ವರದಿಗಾರರು ನಮ್ಮ ಬಳಿ ನಗದು ಹಣವಿಲ್ಲ, ಆನ್‌ಲೈನ್‌ ಸ್ಕ್ಯಾನರ್‌ ಮೂಲಕ ಹಣ ಪಾವತಿ ಮಾಡುವುದಾಗಿ ತಿಳಿಸಿದ್ದಾರೆ.

ಮೊಬೈಲ್‌ ನಂಬರ್‌ಗೆ ಹಣ ಟ್ರಾನ್ಸ್‌ಫರ್‌: ಈ ಹಂತದಲ್ಲಿ ಪಿಎಸ್‌ಐ ಯಲ್ಲಪ್ಪ ಮೊಬೈಲ್‌ ನಂಬರ್‌ ನೀಡಿ ಈ ನಂಬರ್‌ಗೆ ಹಣ ಕಳಿಸಿ ಎಂದು ಹೇಳಿದ್ದಾರೆ. ವರದಿಗಾರರ ಎದುರುಗಡೆ ಅಡ್ಡ ಹಾಕಿದ ಇನ್ನೂ 4-5 ಬೈಕ್‌ ಸವಾರರಿಗೂ ಅದೇ ನಂಬರ್‌ ನೀಡಿ ಹಣ ಪಾವತಿ ಮಾಡುವಂತೆ ಸೂಚನೆ ನೀಡಿದ್ದಾರೆ. ಅಲ್ಲಿದ್ದವರು ಕೂಡ ಅದೇ ನಂಬರ್‌ಗೆ ಹಣ ಕಳಿಸಿದ್ದಾರೆ.

ಚಿನ್ನದಂಗಡಿಯ ಮಾಲೀಕನ ಖಾತೆಗೆ ಹಣ: ಒಂದೋ ಈ ಮೊಬೈಲ್‌ ನಂಬರ್‌ ಪೊಲೀಸ್‌ ಠಾಣೆಯದ್ದಾಗಿರಬೇಕು. ಇಲ್ಲವೇ ಸರ್ಕಾರದ್ದಾಗಿರಬೇಕು. ಇಲ್ಲವೇ ಸರ್ಕಾರಕ್ಕೆ ಸಂಬಂಧಪಟ್ಟ ಯಾರದ್ದಾದರೂ ಆಗಿರಬೇಕು. ಆದರೆ, ಪಿಎಸ್‌ಐ ಯಲ್ಲಪ್ಪ ನೀಡಿದ ಮೊಬೈಲ್‌ ನಂಬರ್‌ ಭಟ್ಕಳದ ಚಿರಪರಿಚಿತ ಚಿನ್ನದ ವ್ಯಾಪಾರಿಯ ಅಕೌಂಟ್‌ನದ್ದಾಗಿತ್ತು. ಹಣ ವರ್ಗಾವಣೆ ಮಾಡುವಾಗ ಭಟ್ಕಳದ ಪ್ರಸಿದ್ಧ ಚಿನ್ನದ ವ್ಯಾಪಾರಿಯ ಹೆಸರು ತೋರಿಸಿದೆ. ಇದರ ಬೆನ್ನಲ್ಲಿಯೇ ಸರ್ಕಾರಕ್ಕೆ ಸೇರಬೇಕಾಗಿದ್ದ ಹಣ, ಚಿನ್ನದಂಗಡಿಯ ಮಾಲೀಕನ ಅಕೌಂಟ್‌ಗೆ ಹೋಗುತ್ತಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ.

ಉತ್ತರ ಕನ್ನಡ: ಭಟ್ಕಳದಲ್ಲಿ ಶಿಲಾಯುಗದ ಅತೀ ದೊಡ್ಡ ಬಂಡೆಚಿತ್ರ ನೆಲಶೋಧ!

ಮೊಬೈಲ್‌ ನಂಬರ್‌ನಲ್ಲಿ ಚಿನ್ನದ ಅಂಗಡಿಯ ಮಾಲೀಕನ ಹೆಸರಿದೆಯಲ್ಲ ಎಂದು ಪಿಎಸ್‌ಐ ಯಲ್ಲಪ್ಪ ಅವರ ಗಮನಕ್ಕೂ ವರದಿಗಾರರು ತಂದಾಗ, ಅವರು ಹಾರಿಕೆ ಉತ್ತರ ನೀಡಿದ್ದಾರೆ. ತಾವು ಮಾಡಿದ್ದ ತಪ್ಪು ಗೊತ್ತಾದ ಬಳಿಕ ಸಮಜಾಯಿಷಿ ನೀಡಲು ಪ್ರಯತ್ನ ಮಾಡಿದ ಪಿಎಸ್‌ಐ ಯಲ್ಲಪ್ಪ, ಮಾಧ್ಯಮವದವರು ಎಂದು ಹೇಳಿದ್ದರೆ ಬಿಡುತ್ತಿದ್ದೆವಲ್ಲ ಎಂದು ಹೇಳಿದ್ದಾರೆ.
ಇನ್ನು ಪೊಲೀಸರು ನೀಡಿದ ರಶೀದಿಯಲ್ಲಿ ಹೆಲ್ಮೆಟ್‌ ರಹಿತ ದಂಡಕ್ಕಾಗಿ ನಗದು ರೂಪದಲ್ಲಿ ಹಣ ಸ್ವೀಕರಿಸಿದ್ದಾಗಿ ರಶೀದಿ ನೀಡಿದ್ದಾರೆ. ಆದರೆ,ವರದಿಗಾರರ ಮೂಲಕ ಅವರು ಆನ್‌ಲೈನ್‌ನಲ್ಲಿ ಹಣ ಸ್ವೀಕರಿಸಿದ್ದರು. ಈ ವಿಚಾರವಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು, ಸರ್ಕಾರ ಗಮನ ನೀಡುವಂತೆಯೂ ಮನವಿ ಮಾಡಿದ್ದಾರೆ.

ಭಟ್ಕಳ, ಶಿರಸಿ, ಶ್ರೀರಂಗಪಟ್ಟಣದ ಮಸೀದಿಗಳೆಲ್ಲವೂ ಹಿಂದೂ ದೇವಾಲಯಗಳು: ಅನಂತ್‌ ಕುಮಾರ್‌ ಹೆಗಡೆ