ಚಿಕ್ಕಮಗಳೂರು ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿಗೆ ಪ್ರವಾಸಿಗರ ಲಗ್ಗೆ

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು.

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು(ಅ.05): ವಾರಾಂತ್ಯ, ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಸಲುವಾಗಿ ಸಾಲು ಸಾಲು ರಜೆ ಸಿಕ್ಕ ಹಿನ್ನೆಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಿಗರ ಜಾತ್ರೆ ಏರ್ಪಟ್ಟಿದೆ. ಅದರಲ್ಲೂ ಪ್ರಮುಖವಾಗಿ ನಾಡಿನ ಸುಪ್ರಸಿದ್ಧ ಪ್ರವಾಸಿ ತಾಣವಾದ ಚಿಕ್ಕಮಗಳೂರು ತಾಲೂಕಿನ ಮುಳ್ಳಿನಗಿರಿಯಲ್ಲಿ ಭಾರೀ ಪ್ರವಾಸಿಗರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಸಾಲು ಸಾಲು ರಜೆ ಪ್ರವಾಸಗರ ಲಗ್ಗೆ

ಒಂದೆಡೆ ಮಕ್ಕಳಿಗೆ ದಸರಾ ರಜ. ಮತ್ತೊಂದೆಡೆ ವೀಕೆಂಡ್ ಹಾಗೂ ಹಬ್ಬದ ಸಾಲು-ಸಾಲು ರಜೆ ಇದೆ. ಈ ಹಿನ್ನಲೆಯಲ್ಲಿ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಇಂದು ಲಗ್ಗೆ ಹಾಕಿದ್ದರು. ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಯಲ್ಲಿ 12 ವರ್ಷಗಳಿಗೊಮ್ಮೆ ಅರಳುವ ನೀಲಿ ಕುರಂಜಿ ಹೂವು ಮುಳ್ಳಯ್ಯನಗಿರಿಯ ಸುತ್ತಮುತ್ತಲಿನ ಬೆಟ್ಟ ಗುಡ್ಡಗಳಲ್ಲಿ ಹುಲಸಾಗಿ ಅರಳಿ ನಿಂತಿದೆ. ಹಸಿರ ಬೆಟ್ಟ ಗುಡ್ಡಗಳು ಸಂಪೂರ್ಣವಾಗಿ ನೀಲಿಯಾಗಿದ್ದು ಪ್ರಕೃತಿಯ ಮಡಿಲಲ್ಲಿ ಹೊಸದೊಂದು ಲೋಕವೇ ಸೃಷ್ಟಿಯಾಗಿದೆ.ಈ ಸುಮಧುರ ಕ್ಷಣವನ್ನು ಕಣ್ಣುಂಬಿಕೊಳ್ಳಲು ಎಗ್ಗಿಲ್ಲದೆ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದು ಕಾಫಿನಾಡು ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಇಂದು ಕೂಡ ಮುಳ್ಳಯ್ಯನಗಿರಿಯಲ್ಲಿ ಕಿಲೋ ಮೀಟರ್ ಕಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೈಮರ ಚೆಕ್ ಪೋಸ್ಟ್ ನಿಂದ ಸುಮಾರು ಐದು ಕಿಲೋ ಮೀಟರ್ ವರೆಗೂ ವಾಹನಗಳು ನಿಂತಲ್ಲಿ ನಿಂತು ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. 

ಚಿಕ್ಕಮಗಳೂರು: ವಿಜಯದಶಮಿ ಪ್ರಯುಕ್ತ ಆರದವಳ್ಳಿಯಲ್ಲಿ ಅಂಬು ಒಡೆಯುವ ಕಾರ್ಯ ಸಂಪನ್ನ

ಪೊಲೀಸರು ಹಾಗೂ ಚೆಕ್ ಪೋಸ್ಟ್ ಸಿಬ್ಬಂದಿಗಳು ಹರಸಾಹಸ

ಇಂದು ಒಂದೇ ದಿನ ಮುಳ್ಳಯ್ಯನಗಿರಿ ಭಾಗಕ್ಕೆ ಸುಮಾರು 3000ಕ್ಕೂ ಅಧಿಕ ವಾಹನಗಳು ಭೇಟಿ ನೀಡಿವೆ. ಅಂದಾಜು 10,000ಕ್ಕೂ ಅಧಿಕ ಪ್ರವಾಸಿಗರು ಮುಳ್ಳಯ್ಯನಗಿರಿಯಲ್ಲಿ ಜಮಾಯಿಸಿದ್ದಾರೆ. ಪ್ರವಾಸಿಗರನ್ನು ನಿಯಂತ್ರಿಸಲು ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಹಾಗೂ ಚೆಕ್ ಪೋಸ್ಟ್ ಸಿಬ್ಬಂದಿಗಳು ಹರಸಾಹಸ ಪಟ್ಟಿದ್ದಾರೆ. ಪ್ರವಾಸಿಗರನ್ನು ನಿಯಂತ್ರಿಸಲು ಸಾಧ್ಯವಾಗದೆ ಚೆಕ್ ಪೋಸ್ಟ್ ನಲ್ಲಿ ಪ್ರವಾಸಿಗರಿಂದ ಹಣವನ್ನ ಸಂಗ್ರಹ ಕೂಡ ಮಾಡದೆ ಬಂದಂತಹ ಪ್ರವಾಸಿಗರನ್ನ ಹಾಗೆ ಬಿಟ್ಟಿದ್ದಾರೆ. ಅಷ್ಟು ದೊಡ್ಡ ಮಟ್ಟದಲ್ಲಿ ಪ್ರವಾಸಿಗರು ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾರೆ.