Asianet Suvarna News Asianet Suvarna News

ಬೆಳಗಾವಿ: ಕಲ್ಲು ಗಣಿಗಾರಿಕೆ, ಅಪಾಯದಲ್ಲಿ ಡ್ಯಾಮ್‌..!

ಕಲ್ಲು ಗಣಿಗಾರಿಯಿಂದ ನಾವಲಗಟ್ಟಿ ಹಾಗೂ ತಿಗಡಿ ಗ್ರಾಮದ ಮಧ್ಯೆ ನಿರ್ಮಿಸಲಾಗಿರುವ ತಿಗಡಿ ಹರಿನಾಲಾ ಡ್ಯಾಮ್‌ಗೂ ಆತಂಕ

Tigadi Harinala Dam in Danger Due to Stone Mining in Belagavi grg
Author
Bengaluru, First Published Jul 29, 2022, 8:28 AM IST

ಬೆಳಗಾವಿ(ಜು.29):  ಬೈಲಹೊಂಗಲ ತಾಲೂಕಿನ ಮರಿಕಟ್ಟಿ ಹಾಗೂ ಗಣಿಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ಅವ್ಯಾಹತ ಹಾಗೂ ನಿಯಮ ಉಲ್ಲಂಘನೆ ಜತೆಗೆ ಭಾರೀ ಪ್ರಮಾಣದ ಜೆಲೆಟಿನ್‌ ಸ್ಫೋಟದಿಂದಾಗಿ ಸುತ್ತಲ ಗ್ರಾಮಗಳಲ್ಲಿ ಕಂಪನ, ಶಾಲೆ, ಮನೆಗಳಲ್ಲಿ ಬಿರುಕು ಹಾಗೂ ರಸ್ತೆಗಳು ಸಹಿತ ಹಾಳಾಗಿ ಹೋಗುತ್ತಿವೆ. ಇದರೊಟ್ಟಿಗೆ ಕಲ್ಲು ಗಣಿಗಾರಿಕೆ ವ್ಯಾಪ್ತಿಯಲ್ಲಿ ಬರುವ ನಾವಲಗಟ್ಟಿ ಹಾಗೂ ತಿಗಡಿ ಗ್ರಾಮದ ಮಧ್ಯೆ ನಿರ್ಮಿಸಲಾಗಿರುವ ತಿಗಡಿ ಹರಿನಾಲಾ ಡ್ಯಾಮ್‌ಗೂ ಆತಂಕ ಮನೆಮಾಡಿದೆ. ಈ ಹಿಂದೆ ಕೆಆರ್‌ಎಸ್‌ ಅಣೆಕಟ್ಟು ಸಮೀಪದಲ್ಲಿ ಕಲ್ಲು ಗಣಿಗಾರಿಕೆ ಮಾಡುತ್ತಿರುವ ಸುದ್ದಿ ರಾಜ್ಯದಲ್ಲಿ ಸದ್ದು ಮಾಡಿತ್ತು. ಅಣೆಕಟ್ಟೆ ಸುತ್ತಲ ಪ್ರದೇಶದಲ್ಲಿ ಕಲ್ಲು ಗಣಿಗಾರಿಕೆ ಮಾಡುತ್ತಿರುವುದರಿಂದ ಅಣೆಕಟ್ಟೆಗೆ ಹಾನಿಯಾಗಿದೆ ಎಂಬ ಮಾತು ಕೇಳಿ ಬಂದಿತು. ಇದು ರಾಜ್ಯ ರಾಜಕಾರಣದಲ್ಲೂ ಕೆಸರೇರಚಾಟಕ್ಕೂ ಕಾರಣವಾಗಿತ್ತು. ಹೀಗಾಗಿ ತಿಗಡಿ ಹರಿನಾಲಾ ಡ್ಯಾಮ್‌ ಸುತ್ತಲ ಜನರಲ್ಲೂ ಆತಂಕ ಮೂಡಿಸಿದೆ.

ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಿಕಟ್ಟಿಹಾಗೂ ಗಣಿಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ಅವ್ಯಾಹತ ಹಾಗೂ ನಿಯಮ ಉಲ್ಲಂಘನೆ ಜತೆಗೆ ಭಾರೀ ಪ್ರಮಾಣದ ಜೆಲಟಿನ್‌ ಸ್ಪೋಟದಿಂದಾಗಿ ಸುಮಾರು ಐದು ಕಿಮೀ ಹೆಚ್ಚು ದೂರದವರೆಗೆ ಭೂಮಿ ಕಂಪಿಸುತ್ತಿದೆ. ಇದರಿಂದಾಗಿ ಮನೆ, ಶಾಲೆಗಳು ಬಿರುಕು ಬಿಟ್ಟಿದ್ದರಿಂದ ಮರಿಕಟ್ಟಿಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಹಳ್ಳಿಯ ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ಮರಿಕಟ್ಟಿಗ್ರಾಪಂ ವ್ಯಾಪ್ತಿಯ ಹಾಗೂ ಕಲ್ಲು ಗಣಿಗಾರಿಕೆ ನಡೆಯುವ ಸ್ಥಳದಿಂದ ಕೇವಲ 5ರಿಂದ 6 ಕಿಮೀ ದೂರದಲ್ಲಿರುವ ನಾವಲಗಟ್ಟಿಹಾಗೂ ತಿಗಡಿ ಗ್ರಾಮದ ಮಧ್ಯೆ ನಿರ್ಮಿಸಲಾಗಿರುವ ತಿಗಡಿ ಹರಿನಾಲಾ ಡ್ಯಾಮ್‌ ಇದೆ. 

ಗಣಿ ಸ್ಫೋಟಕ್ಕೆ ಪ್ರಾಣಿ-ಪಕ್ಷಿ ಸಂಕುಲವೇ ನಾಶ: ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ

ಸದಾಕಾಲವೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿರುವ ಈ ಡ್ಯಾಮ್‌ನ ಮೂಲಕ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಮತ್ತೊಂದೆಡೆ ಗಣಿಕೊಪ್ಪ ಹಾಗೂ ಮರಿಕಟ್ಟಿಗ್ರಾಮಗಳ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಘಿಸಿ ಹಗಲು ರಾತ್ರಿ ಎನ್ನದೆ ನಡೆಸಲಾಗುತ್ತಿರುವ ಅವ್ಯಾಹತ ಗಣಿಗಾರಿಕೆ ಹಾಗೂ ಕಲ್ಲು ಒಡೆಯಲು ಉಪಯೋಗಿಸುವ ಭಾರೀ ಪ್ರಮಾಣದ ಜೆಲೆಟಿನ್‌ ಸ್ಫೋಟದಿಂದ ಭೂಮಿ ಕಂಪನ ಹರಿನಾಲಾ ಡ್ಯಾಮ್‌ ಮೇಲೆಯೂ ಬೀರುವ ಲಕ್ಷಣ ಕಾಣುತ್ತಿದೆ. 

ಜಿಲ್ಲಾಡಳಿತ ಹಾಗೂ ಪರಿಸರ ಇಲಾಖೆ, ನೀರಾವರಿ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ಮುಂದಾಗುವ ಹಾನಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ನೇರವಾಗಿ ಕಾರಣಿಕರ್ತರಾಗುತ್ತಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Belagavi: ವಡಗಾವಿ ಮಂಗಾಯಿದೇವಿ ಜಾತ್ರೆಯಲ್ಲಿ ಕೋಳಿಮರಿ ಹಾರಿಸಿ ಹರಕೆ ತೀರಿಸಿದ ಭಕ್ತರು!

ಡ್ಯಾಮ್‌ ಕೆಳಭಾಗದ ಹಳ್ಳಿಗಳ ಜನರಲ್ಲಿ ಆತಂಕ

ತಿಗಡಿ ಹರಿನಾಲಾ ಡ್ಯಾಮ್‌ನ ಕೆಳಭಾಗದ ಹಳ್ಳಿಗಳಾದ ತಿಗಡಿ, ಕಲ್ಲೂರ, ಸಂಪಗಾಂವಿ ಸೇರಿದಂತೆ ಇನ್ನಿತರ ಗ್ರಾಮಗಳ ಜನರು ಪ್ರತಿಕ್ಷಣವೂ ಆತಂಕದಲ್ಲಿ ಜೀವನ ಸಾಗುತ್ತಿದ್ದಾರೆ. ಜೆಲೆಟಿನ್‌ ಸ್ಪೋಟದಿಂದ ಭೂಮಿ ಕಂಪಿಸುತ್ತಿರುವುದರಿಂದ ಭರ್ತಿಯಾಗಿರುವ ಡ್ಯಾಮ್‌ ದು ವೇಳೆ ಬಿರುಕು ಬಿಟ್ಟು ಡ್ಯಾಮ್‌ ಹಾನಿಯಾಗಿದರೆ ಮುಂದಾಗುವ ಅನಾಹುತಕ್ಕೆ ಯಾರು? ಕಾರಣ ಎಂಬ ಪ್ರಶ್ನೆಯ ಜೊತೆಗೆ ಡ್ಯಾಮ್‌ ಕೆಳಭಾಗದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಡ್ಯಾಮ್‌ಗೆ ಹಾನಿಯಾದರೆ ಕುಡಿಯುವ ನೀರಿಗೆ ಸಮಸ್ಯೆ

ತಿಗಡಿ ಹರಿನಾಲಾ ಡ್ಯಾಮ್‌ ಸುತ್ತಲ ಗ್ರಾಮಗಳ ಜಲಮೂಲ. ಒಂದು ವೇಳೆ ಕಲ್ಲು ಗಣಿಗಾರಿಕೆಯಿಂದ ಈ ಡ್ಯಾಮಗೆ ಅಪಾಯವಾದರೆ, ಸುವರ್ಣ ವಿಧಾನ ಸೌಧದ ಹಿಂಬದಿಯ ಬೆಳಗಾವಿ ತಾಲೂಕಿನ ಶಗಣಮಟ್ಟಿ, ತಾರಿಹಾಳ, ಚಂದನಹೊಸುರ, ಮಾಸ್ತಮರಡಿ, ಬೈಲಹೊಂಗಲ ತಾಲೂಕಿನ ಮರಿಕಟ್ಟಿ, ತಿಗಡಿ, ನಾವಲಗಟ್ಟಿ, ಹೀರೆಮೇಳೆ, ಭಾಂವಿಹಾಳ, ಯರಗುದ್ದಿ, ಜಕನಾಯಕನಕೊಪ್ಪ, ಚಿಕ್ಕ ಬಾಗೇವಾಡಿ ಸೇರಿದಂತೆ ಇನ್ನಿತರ ಸುಮಾರು ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳಿಗಳ ಲಕ್ಷಾಂತರ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೂರಲಿದೆ.
 

Follow Us:
Download App:
  • android
  • ios