ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮುಕ್ಕುಂಪ ಗ್ರಾಮದ ರಾಜ್ಯ ಹೆದ್ದಾರಿ ಬಳಿ ನಡೆದ ದುರ್ಘಟನೆ| ಸರಕಾರಿ ಆಸ್ಪತ್ರೆಗೆ ತೆರಳಿ ಮೖತರ ಕುಟಂಬಕ್ಕೆ ಸಾಂತ್ವಾನ ಹೇಳಿದ ಶಾಸಕ ಪರಣ್ಣ ಮುನವಳ್ಳಿ ಮತ್ತು ತುಂಗಭದ್ರಾ ಕಾಡಾ ಅದ್ಯಕ್ಷ ತಿಪ್ಪೇರುದ್ರಸ್ವಾಮಿ| ಈ ಸಂಬಂಧ ಲಾರಿ ಚಾಲಕನ ಬಂಧನ| 

ಗಂಗಾವತಿ(ಮಾ.29): ಟಾಟಾ ಏಸ್‌ ಹಾಗೂ ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ರೈತರು ಮೃತಪಟ್ಟು, ಮತ್ತೋರ್ವನಿಗೆ ಗಾಯವಾದ ಘಟನೆ ತಾಲೂಕಿನ ಮುಕ್ಕುಂಪ ಗ್ರಾಮದ ರಾಜ್ಯ ಹೆದ್ದಾರಿ ಬಳಿ ನಿನ್ನೆ(ಭಾನುವಾರ) ರಾತ್ರಿ ನಡೆದಿದೆ. 

Add Asianetnews Kannada as a Preferred SourcegooglePreferred

ಮೖತರನ್ನ ಕೊಪ್ಪಳ ತಾಲೂಕಿನ ಬೂದಗುಂಪ ಗ್ರಾಮದ ರೈತರಾದ ಭೀಮಪ್ಪ ಚಿನ್ನಪ್ಪ ಡೊಳ್ಳಿನ(35), ರಾಮಣ್ಣ ಶಂಕ್ರಪ್ಪ ಡೊಳ್ಳಿನ್ (45) ಮತ್ತು ಫಕೀರಪ್ಪ ನಾಗಪ್ಪ(21) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಂಜುನಾಥ ಎಂಬ ರೈತ ಗಾಯಗೊಂಡಿದ್ದಾನೆ. ಗಾಯಾಳುವಿಗೆ ಕೊಪ್ಪಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಚಿಂಚೋಳಿ: ಶವಸಂಸ್ಕಾರಕ್ಕೆ ಹೊರಟಿದ್ದ ಟ್ರ್ಯಾಕ್ಟರ್ ಪಲ್ಟಿ, ಓರ್ವ ಮಹಿಳೆ ಸಾವು, 18 ಮಂದಿಗೆ ಗಾಯ

ಇವರು ಕೊಪ್ಪಳದಿಂದ ಗಂಗಾವತಿ ಬಂದು ಶೇಂಗಾ ಮಾರಾಟ ಮಾಡಿ ತಮ್ಮ ಗ್ರಾಮಕ್ಕೆ ತೆರುಳುತ್ತಿದ್ದ ಸಂದರ್ಭದಲ್ಲಿ ರಾಯಚೂರಿಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಟಾಟಾ ಏಸ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಶವಗಳನ್ನು ಜೆಸಿಬಿಯಿಂದ ಹೊರ ತೆಗೆದು ಗಂಗಾವತಿಯ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. 

ಸುದ್ದಿ ತಿಳಿಯುತ್ತಲೇ ಗಂಗಾವತಿ ನಗರದ ಸರಕಾರಿ ಆಸ್ಪತ್ರೆಗೆ ತೆರಳಿದ ಶಾಸಕ ಪರಣ್ಣ ಮುನವಳ್ಳಿ ಮತ್ತು ತುಂಗಭದ್ರಾ ಕಾಡಾ ಅದ್ಯಕ್ಷ ತಿಪ್ಪೇರುದ್ರಸ್ವಾಮಿ ಅವರು ಮೖತರ ಕುಟಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಅಲ್ಲದೆ ಸರ್ಕಾರದಿಂದ ಬರುವ ಪರಿಹಾರ ಕೊಡಿಸುವದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಪಿಐ ಉದಯ ರವಿ, ಪಿಎಸ್ಐ ದೊಡ್ಡಪ್ಪ ಇದ್ದರು. ಈ ಸಂಬಂಧ ಲಾರಿ ಚಾಲಕನನ್ನು ಬಂಧಿಸಿದ್ದು, ಲಾರಿಯನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.