*   ಆಷಾಢ ಶುಕ್ರವಾರ ನಿಮಿತ್ತ ದರ್ಶನಕ್ಕೆ ಸಹಸ್ರಾರು ಜನ*  ಹಾರ್ಲಿಕ್ಸ್‌ ಮೈಸೂರ್‌ ಪಾಕ್‌*  ಭಕ್ತರಿಗೆ ಲಲಿತ ಮಹಲ್‌ ಮೈದಾನದಿಂದ ಉಚಿತ ಬಸ್‌ ವ್ಯವಸ್ಥೆ  

ಮೈಸೂರು(ಜು.02): ಈ ವರ್ಷದ ಮೊದಲ ಆಷಾಢ ನಿನ್ನೆ(ಶುಕ್ರವಾರ) ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿ, ಚಾಮುಂಡೇಶ್ವರಿ ದೇವಿ ದರ್ಶನ ಪಡೆದಿದ್ದಾರೆ. 

ಕಳೆದ ಎರಡು ವರ್ಷಗಳಿಂದ ಕೋವಿಡ್‌ ಕಾರಣಕ್ಕೆ ಭಕ್ತರ ಪ್ರವೇಶವಿಲ್ಲದೆ ಮಂಕಾಗಿದ್ದ ಆಷಾಢ ಸಂಭ್ರಮವು ಈ ಬಾರಿ ಕಳೆಗಟ್ಟಿದೆ. ಶಕ್ತಿ ದೇವತೆಗಳನ್ನು ಆರಾಧಿಸುವ ಆಷಾಢ ಮಾಸದ ಮೊದಲ ಶುಕ್ರವಾರ ಅಧಿದೇವತೆ ಆರಾಧಿಸಿ, ಕಣ್ತುಂಬಿಕೊಂಡು ಪುನೀತರಾಗಲು ಜಿಲ್ಲೆ, ರಾಜ್ಯ, ಹೊರ ರಾಜ್ಯದಿಂದ ಮುಂಜಾನೆಯಿಂದಲೇ ಚಾಮುಂಡಿಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಸರತಿ ಸಾಲಿನಲ್ಲಿ ನಿಂತು ವಿಶೇಷವಾಗಿ ಅಲಂಕೃತಗೊಂಡಿದ್ದ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದರು.

Mysuru: ಚಾಮುಂಡಿಬೆಟ್ಟಕ್ಕೆ ರೋಪ್‌ ವೇ ಅಗತ್ಯವಿಲ್ಲ: ಪ್ರಮೋದಾದೇವಿ ಒಡೆಯರ್‌

ಹಾರ್ಲಿಕ್ಸ್‌ ಮೈಸೂರ್‌ ಪಾಕ್‌:

ಚಾಮುಂಡೇಶ್ವರಿ ಸೇವಾ ಸಮಿತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ ಉಪ್ಪಿಟ್ಟು ಕೇಸರಿ ಬಾತ್‌, ಮಧ್ಯಾಹ್ನದ ಊಟಕ್ಕೆ ಬಿಸಿಬೇಳೆ ಬಾತ್‌, ಅನ್ನ ಸಾಂಬರ್‌ ನೀಡಲಾಯಿತು. ಇದರೊಂದಿಗೆ ವಿಶೇಷವಾಗಿ ತಯಾರಿಸಿದ್ದ ಹಾರ್ಲಿಕ್ಸ್‌ ಮೈಸೂರ್‌ ಪಾಕ್‌ ವಿತರಿಸಲಾಯಿತು. ಬೆಳಗ್ಗೆ 6.30 ರಿಂದ ಆರಂಭವಾದ ಅನ್ನಸಂತರ್ಪಣೆ ರಾತ್ರಿ 7.30 ರವರೆಗೂ ನಡೆಯಿತು. ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಭಕ್ತರಿಗೆ ಲಲಿತ ಮಹಲ್‌ ಮೈದಾನದಿಂದ ಉಚಿತ ಬಸ್‌ ವ್ಯವಸ್ಥೆ ಮಾಡಲಾಗಿತ್ತು.