ಬಡ ಕುಟುಂಬದವರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಆಸರೆಯಾಗಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಂಬಳ ನೀಡಿಲ್ಲವೆಂದು ಕ್ಯಾಂಟೀನ್‌ಗೆ ಬೀಗ ಜಡಿದು, ಏಜೆನ್ಸಿ ಮಾಲೀಕನ ವಿರುದ್ಧ ಕೊರಟಗೆರೆ ಪೋಲಿಸ್‌ ಠಾಣೆಯಲ್ಲಿ ದೂರು ನೀಡಿ ಪ್ರತಿಭಟನೆ ನಡೆಸಿದ ಘಟನೆ ಕೊರಟಗೆರೆಯಲ್ಲಿ ನಡೆದಿದೆ.

 ಕೊರಟಗೆರೆ : ಬಡ ಕುಟುಂಬದವರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಆಸರೆಯಾಗಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಂಬಳ ನೀಡಿಲ್ಲವೆಂದು ಕ್ಯಾಂಟೀನ್‌ಗೆ ಬೀಗ ಜಡಿದು, ಏಜೆನ್ಸಿ ಮಾಲೀಕನ ವಿರುದ್ಧ ಕೊರಟಗೆರೆ ಪೋಲಿಸ್‌ ಠಾಣೆಯಲ್ಲಿ ದೂರು ನೀಡಿ ಪ್ರತಿಭಟನೆ ನಡೆಸಿದ ಘಟನೆ ಕೊರಟಗೆರೆಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರಿಗೆ, ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗಲೆಂದು ಇಂದಿರಾ ಕ್ಯಾಂಟೀನ್‌ ನಿರ್ಮಿಸಿ ಕಡಿಮೆ ದರದಲ್ಲಿ ತಿಂಡಿ ಮತ್ತು ಊಟವನ್ನು ವಿತರಣೆ ಮಾಡುತ್ತಿದ್ದರು. ಆದರೆ ಕೊರಟಗೆರೆಯಲ್ಲಿ ಇಂದಿರಾ ಕ್ಯಾಂಟಿನ್‌ ಏಜೆನ್ಸಿ ಮಾಲೀಕ ಸಿಬ್ಬಂದಿಗೆ ಸುಮಾರು 7 ತಿಂಗಳಿನಿಂದ ಸಂಬಳ ನೀಡದಿರುವ ಕಾರಣ ಸಿಬ್ಬಂದಿಯು ಕ್ಯಾಂಟೀನ್‌ಗೆ ಬೀಗ ಜಡಿದು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಈ ವಿಚಾರವಾಗಿ ಸಾಕಷ್ಟುಬಾರಿ ಸಂಬಂಧಿತ ಅಧಿಕಾರಿಗಳಿಗೆ ತಿಳಿಸಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಈ ವಿಷಯದ ಬಗ್ಗೆ ಮಾಧ್ಯಮದವರಿಗೆ ತಿಳಿಸಿದರೆ ಕೆಲಸದಿಂದ ತೆಗೆದು ಬೇರೆಯ ಸಿಬ್ಬಂದಿಯನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗುತ್ತದೆ, ನೀವು ಕೆಲಸಕ್ಕೆ ಬಂದರೆ ಬನ್ನಿ. ಇಲ್ಲವೆಂದರೆ ಬಿಡಿ ಎಂದು ಬೆದರಿಕೆ ಹಾಕಿದ್ದರು. ಆದ್ದರಿಂದ ಪೊಲೀಸ್‌ ಠಾಣೆಯಲ್ಲಿ ಅವರ ವಿರುದ್ಧ ದೂರು ನೀಡಲಾಗಿದೆ ಎನ್ನುತ್ತಾರೆ ಕ್ಯಾಂಟೀನ್‌ ಸಿಬ್ಬಂದಿ.

ಗೃಹ ಸಚಿವರ ಕ್ಷೇತ್ರದಲ್ಲಿಯೇ ಇಂದಿರಾ ಕ್ಯಾಂಟೀನ್‌ ಸಿಬ್ಬಂದಿಗೆ ಸಂಬಳ ನೀಡಿಲ್ಲವೆಂದು ಕ್ಯಾಂಟೀನ್‌ಗೆ ಬೀಗ ಹಾಕಿದ ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ ಮುನಿಶಾಮಿ ರೆಡ್ಡಿ ಸಿಬ್ಬಂದಿಯಿಂದ ಈ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದು ಕೂಡಲೇ ಪರಿಹರಿಸಿ ಕೊಡುವುದಾಗಿ ಭರವಸೆ ನೀಡಿದ್ದಾರೆ.

ಸುಮಾರು 7 ತಿಂಗಳಿನಿಂದ ಇಂದಿರಾ ಕ್ಯಾಂಟೀನ್‌ ಏಜೆನ್ಸಿ ಮಾಲೀಕ ಸಿಬ್ಬಂದಿಗೆ ಸಂಬಳ ನೀಡದಿರುವುದರಿಂದ ಬೇಸತ್ತ ಸಿಬ್ಬಂದಿ ಇಂದಿರಾ ಕ್ಯಾಂಟೀನ್‌ಗೆ ಬೀಗ ಹಾಕಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಮತ್ತು ಏಜೆನ್ಸಿಯವರನ್ನು ಕರೆದು ಈ ಸಮಸ್ಯೆಯನ್ನು ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡುತ್ತೇನೆ.

ಮುನಿಶಾಮಿ ರೆಡ್ಡಿ ತಹಸೀಲ್ದಾರ್‌, ಕೊರಟಗೆರೆ.