Asianet Suvarna News Asianet Suvarna News

ತಾಪಮಾನಕ್ಕೆ ತತ್ತರಿಸಿದ ಕೊಪ್ಪಳ ಮಂದಿ, ತಂಪಾಗಿಸಲು ಎಳನೀರೂ ಸಿಗ್ತಿಲ್ಲ!

ಇತ್ತೀಚಿನ ವರ್ಷಗಳಲ್ಲಿ ತಾಪಮಾನ ಮಿತಿಮೀರಿದೆ. ಜಿಲ್ಲಾದ್ಯಂತ ದಾಖಲೆಯ 42-43 ಡಿಗ್ರಿ ತಾಪಮಾನ ದಾಖಲಾಗುತ್ತಿದ್ದು, ಸಂಜೆಯಾದರೂ ತಾಪಮಾನ ತಗ್ಗುತ್ತಿಲ್ಲ, ಬದಲಾಗಿ ಬಿಸಿಗಾಳಿ ಉಕ್ಕುತ್ತದೆ. ಇದರಿಂದ ತಂಪಾಗಿಸಿಕೊಳ್ಳಲು ಎಳೆ ನೀರು ಮೊರೆ ಹೋಗೋಣ ಎಂದರೇ ಹುಡುಕಾಡಿದರೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ.

The people of Koppala who were shocked by high temperature rav
Author
First Published May 21, 2023, 6:11 AM IST

ಸೋಮರಡ್ಡಿ ಅಳವಂಡಿ

ಕೊಪ್ಪಳ (ಮೇ.21) ಇತ್ತೀಚಿನ ವರ್ಷಗಳಲ್ಲಿ ತಾಪಮಾನ ಮಿತಿಮೀರಿದೆ. ಜಿಲ್ಲಾದ್ಯಂತ ದಾಖಲೆಯ 42-43 ಡಿಗ್ರಿ ತಾಪಮಾನ ದಾಖಲಾಗುತ್ತಿದ್ದು, ಸಂಜೆಯಾದರೂ ತಾಪಮಾನ ತಗ್ಗುತ್ತಿಲ್ಲ, ಬದಲಾಗಿ ಬಿಸಿಗಾಳಿ ಉಕ್ಕುತ್ತದೆ. ಇದರಿಂದ ತಂಪಾಗಿಸಿಕೊಳ್ಳಲು ಎಳೆ ನೀರು ಮೊರೆ ಹೋಗೋಣ ಎಂದರೇ ಹುಡುಕಾಡಿದರೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ.

ಹೌದು, ಜಿಲ್ಲೆಯ ಜನರು ಬಿಸಿಲಿನ ಝಳಕ್ಕೆ ಬಸವಳಿದು ಹೋಗಿದ್ದಾರೆ. ಮಧ್ಯಾಹ್ನದ ವೇಳೆ ಮನೆಯಿಂದ ಆಚೆ ಯಾರೂ ಬರುತ್ತಿಲ್ಲ. ರಸ್ತೆಗಳು ಬೀಕೋ ಎನ್ನುತ್ತಿವೆ. ಮಾರುಕಟ್ಟೆಸ್ತಬ್ಧವಾಗುತ್ತವೆ. ಕುಡಿಯುವ ನೀರು ಇಟ್ಟಲ್ಲಿಯೇ ಬಿಸಿಯಾಗುತ್ತವೆ. ಸಿಂಟೆಕ್ಸ್‌ ಟ್ಯಾಂಕಿನ ನೀರೂ ಕಾದು ನಲ್ಲಿಯಲ್ಲಿಯೂ ಬಿಸಿ ನೀರು ಬರುತ್ತಿದೆ.

ಮಲೆನಾಡಿನಲ್ಲಿ ಅಂತರ್ಜಲ ತೀವ್ರ ಕುಸಿತ; ಬರಿದಾಗುತ್ತಿವೆ ಕೊಳವೆ ಬಾವಿಗಳು!

ಹಿಂದೆಂದೂ ಇಷ್ಟೊಂದು ಬಿಸಿಲು ಇರಲಿಲ್ಲ ಮತ್ತು ಇದ್ದರೂ ಈ ರೀತಿಯ ಬಿಸಿಗಾಳಿ ಉಕ್ಕುತ್ತಿರಲಿಲ್ಲ ಎನ್ನುತ್ತಾರೆ ಜನರು. ಬೆಂಕಿ ಕಾಯಿಸಿಕೊಂಡ ಅನುಭವ ಆಗುತ್ತದೆ.

ಸಿಗದ ಎಳನೀರು:

ಜಿಲ್ಲೆಯಲ್ಲಿ ಹುಡುಕಿದರೂ ಎಳನೀರು ಸಿಗುತ್ತಿಲ್ಲ. ಈ ಬಾರಿ ಅತಿಯಾದ ಬಿಸಿಲಿನಿಂದ ಎಳನೀರು ಇಳುವರಿಯಲ್ಲಿ ಭಾರಿ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ಎಳನೀರು ದೊರೆಯುತ್ತಿಲ್ಲ. ಸಾಮಾನ್ಯವಾಗಿ ಬೇಸಿಗೆಯ ವೇಳೆಯಲ್ಲಿ ಮಂಡ್ಯ, ಮೈಸೂರು ಭಾಗದ ಎಳನೀರು ಬರುತ್ತಿತ್ತು. ಆದರೆ, ಈ ಬಾರಿ ಬರುತ್ತಿಲ್ಲ, ಸ್ಥಳೀಯವಾಗಿಯೂ ಉತ್ಪಾದನೆ ಇಲ್ಲ. ತೆಂಗಿನ ಮರವೂ ಕಡಿಮೆ. ಹೀಗಾಗಿ, ಮಾರುಕಟ್ಟೆಬೇಡಿಕೆಗೆ ಅನುಗುಣವಾಗಿ ಎಳನೀರು ದೊರೆಯುತ್ತಿಲ್ಲ.

ಮುಚ್ಚಿದ ಎಳನೀರು ಅಂಗಡಿ:

ಎಳನೀರಿನ ಅಭಾವದಿಂದ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಶೇ.90 ರಷ್ಟುಎಳನೀರು ಅಂಗಡಿಗಳು ಮುಚ್ಚಿವೆ. ಎಳನೀರು ಮಾರಿಯೇ ಇವರು ಜೀವನ ಸಾಗಿಸುತ್ತಿದ್ದರು. ಅಲ್ಲದೇ ಗ್ರಾಹಕರಿಗೂ ಇದು ಆಧಾರವಾಗಿತ್ತು. ಈಗ ಮಾರುಕಟ್ಟೆಯಲ್ಲಿ ಎಳೆನೀರು ಇಲ್ಲದಿರುವುದರಿಂದ ಅನಿವಾರ್ಯವಾಗಿ ಮುಚ್ಚಿದ್ದಾರೆ.

ವೈದ್ಯರು ಬಿಸಿಲಿನ ತಾಪದಿಂದ ಬಳಲುವವರಿಗೆ ಎಳನೀರು ಕುಡಿಯುವಂತೆ ಸೂಚನೆ ಮಾಡುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಎಳನೀರೇ ಸಿಗದಿರುವುದರಿಂದ ಸಮಸ್ಯೆಯಾಗುತ್ತಿದೆ. ಬಿಸಿಲಿನ ಝಳದಿಂದ ಅನೇಕರು ಹೊಟ್ಟೆನೋವಿನಿಂದ ಬಳಲುತ್ತಾರೆ. ಇವರಿಗೆಲ್ಲ ವೈದ್ಯರು ಎಳೆನೀರು ಕುಡಿಯುವಂತೆ ಹೇಳುತ್ತಾರೆ. ಆದರೆ, ಎಲ್ಲಿಯೂ ಸಿಗುತ್ತಿಲ್ಲ ಎನ್ನುತ್ತಾರೆ ರೋಗಿಗಳು.

ಕಲಬುರಗಿಯಲ್ಲಿ ಬಿಸಿಲ ಬೆಂಕಿಗೆ ಜನರು ತತ್ತರ..!

ವಿಪರೀತ ದುಬಾರಿ:

ಮಾರುಕಟ್ಟೆಯಲ್ಲಿ ಎಳೆನೀರು ತೀರಾ ಕಡಿಮೆಯಾಗಿದ್ದರಿಂದ ವಿಪರೀತ ದರ ಹೆಚ್ಚಳ ಮಾಡಲಾಗಿದೆ. ಇದುವರೆಗೂ .25-30 ಒಂದರಂತೆ ಎಳೆನೀರು ಮಾರಾಟ ಮಾಡುತ್ತಿದ್ದರು. ಆದರೆ, ಈಗ .30-40 ಆಗಿದೆ. ಇಷ್ಟುಹಣ ನೀಡಿದರೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ.

ನಾಲ್ಕಾರು ವರ್ಷಗಳಿಂದ ಎಳನೀರು ಮಾರುತ್ತಿದ್ದೇನೆ. ಆದರೆ ಈಗ ಅದು ಸಿಗದಿರುವುದರಿಂದ ಅಂಗಡಿ ಬಂದ್‌ ಮಾಡಿದ್ದೇನೆ.

-ಮೈಲಾರಪ್ಪ ಕಿನ್ನಾಳ ರಸ್ತೆ

ಎಳನೀರು ಇದ್ದರೂ ಅವು ತೀರಾ ಚಿಕ್ಕದಾಗಿವೆ. ಅತಿಯಾದ ತಾಪಮಾನದಿಂದ ಇಳುವರಿಯಲ್ಲಿಯೂ ಕಡಿಮೆಯಾಗಿದೆ. ಹೀಗಾಗಿ ಭಾರಿ ಸಮಸ್ಯೆಯಾಗಿದೆ.

ಮುದ್ದಪ್ಪ ಗ್ರಾಹಕ

Follow Us:
Download App:
  • android
  • ios