*ಅಂಧತ್ವ ತುಂಬಿಕೊಂಡವರಿಂದ ಅನ್ಯಾಯ: ಸಿದ್ದರಾಮಯ್ಯ*ಸಮಾನತೆ ಹಕ್ಕು ಮರೆತಿರುವ ಧರ್ಮಾಂಧರು*ಅಂಧ ಸಮಾವೇಶದಲ್ಲಿ ಕಅಪ್ರಾ ಮಾಜಿ ಅಧ್ಯಕ್ಷ ವಾಗ್ದಾಳಿ
ಬೆಂಗಳೂರು (ಫೆ. 21): ಸಮಾಜದಲ್ಲಿ ಧರ್ಮಾಂಧರು ಕೋಮು ಭಾವನೆಯಿಂದ ವಿದ್ಯಾರ್ಥಿಗಳನ್ನು ಶಾಲೆಯೊಳಗೆ ಬರದಂತೆ ತಡೆಯುತ್ತಿದ್ದಾರೆ, ಶಿಕ್ಷಣ ವಂಚಿತರನ್ನಾಗಿ ಮಾಡುತ್ತಿದ್ದಾರೆ. ಬಹುತ್ವದ ದೇಶದಲ್ಲಿ ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕಿದೆ ಎಂಬುದನ್ನು ಅವರು ಮರೆತಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಹೇಳಿದ್ದಾರೆ.ಆಶ್ರಯ ಅಂಗವಿಕಲರ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಕರ್ನಾಟಕ ಅಂಧರ ವಿಮೋಚನಾ ವೇದಿಕೆಯು ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ‘ರಾಜ್ಯ ಮಟ್ಟದ ಅಂಧರ ಸಮಾವೇಶ’ದಲ್ಲಿ ಅವರು ಮಾತನಾಡಿದರು.
"ಜಾತಿ, ಧರ್ಮ, ವರ್ಣಗಳ ಅಂಧತ್ವ ತುಂಬಿಕೊಂಡ ಮನುಷ್ಯ ಇತರರಿಗೆ ಅನ್ಯಾಯವೆಸಗುತ್ತಿದ್ದಾನೆ. ಬಡವರು, ದೀನ ದುರ್ಬಲರ ಭಾವನೆ ಅರ್ಥ ಮಾಡಿಕೊಳ್ಳದೇ, ಎಲ್ಲರನ್ನೂ ಸಮಾನರಾಗಿ ಕಾಣದೇ ಸ್ವಾರ್ಥದಿಂದ ಬದುಕುತ್ತಿದ್ದೇವೆ. ಇದರಿಂದ ಮುಕ್ತಿ ಹೊಂದಿ ಶುದ್ಧಾತ್ಮ ಕೂಡಿರುವ ವಿಶೇಷ ಚೇತನರಂತೆ ಬದುಕಬೇಕು" ಎಂದು ಹೇಳಿದರು.
ಹಿರಿಯ ಹಿನ್ನೆಲೆ ಗಾಯಕಿ ಬಿ.ಕೆ.ಸುಮಿತ್ರಾ ಮಾತನಾಡಿ, ಹೆಣ್ಣುಮಕ್ಕಳಿಗೆ ಶಿಕ್ಷಣ ಬೇಡ ಎಂಬ ಕಾಲದಲ್ಲಿ ಶಿಕ್ಷಣ, ನಂತರ ಸಂಗೀತ ಕಲಿತೆವು. ಇಂದು ಅದೇ ಸಂಗೀತ ನಿರೀಕ್ಷೆಗೂ ಮೀರಿ ಜನರ ಪ್ರೀತಿ ಕರುಣಿಸಿದೆ. ರಾಜ್ಯಾದ್ಯಂತ ಸುಮಾರು 500ಕ್ಕೂ ಹೆಚ್ಚು ಸಂಗೀತ ಶಿಬಿರ ನಡೆಸಿ ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದೇನೆ ಎಂದು ಸ್ಮರಿಸಿದರು.
ಇದನ್ನೂ ಓದಿ: ಅಂಬೇಡ್ಕರ್ ಮಾತಿನಿಂದ ಪ್ರಭಾವಿತನಾಗಿ ಮೌಖಿಕ ಪರಂಪರೆ ಶೋಧ: ಮಹಾದೇವ ಶಂಕನಪುರ
ವೇದಿಕೆ ರಾಜ್ಯ ಸಂಚಾಲಕ ಮುದಿಗೆರೆ ರಮೇಶ್ ಕುಮಾರ್, ಗಾಯಕ ಎಚ್.ಜನಾರ್ಧನ್ (ಜನ್ನಿ), ಬರಹಗಾರ್ತಿ ಗಿರಿಜಾ ರೈಕ್ವಾ, ಚಿತ್ರ ನಿರ್ದೇಶಕ ಸಿಂಪಲ್ ಸುನಿ, ಸಂಸ್ಥೆ ರಾಜ್ಯಾಧ್ಯಕ್ಷ ಕದಂಬ ಶ್ರೀನಿವಾಸ್, ದೀಪಾ ಅಕಾಡೆಮಿ ಮುಖ್ಯಸ್ಥ ಶಾಂತಾರಾಂ ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರದಾನ: ಬಿ.ಕೆ.ಸುಮಿತ್ರಾ ಅವರಿಗೆ ಗಾನಯೋಗಿ ಡಾ. ಪುಟ್ಟರಾಜ ಗವಾಯಿ ಸ್ಮರಣಾರ್ಥ ‘ಸಂಗೀತ ರತ್ನ’ ಮತ್ತು ಸಮಾಜ ಸೇವಕ ಲಕ್ಷ್ಮೇನಾರಾಯಣ ನಾಗವಾರರಿಗೆ ವಿಶ್ವಚೇತನ ಡಾ. ಹೆಲನ್ ಕೆಲ್ಲರ್ ಹೆಸರಿನಲ್ಲಿ ‘ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಮತ್ತು ವಿವಿಧ ಸ್ಪರ್ಧೆಗಳ ವಿಜೇತ ಅಂಗವಿಕಲರಿಗೆ ಬಹುಮಾನ ವಿತರಿಸಲಾಯಿತು.
ಇದನ್ನೂ ಓದಿ: Constitution: ಅಂಬೇಡ್ಕರ್ಗೆ ಪ್ರಧಾನಿ ಮೋದಿ ನೈಜ ಗೌರವ: ಸಚಿವ ಕಾರಜೋಳ
ಹಿಜಾಬ್ ಆಯ್ಕೆಯಲ್ಲ, ಕಟ್ಟುಪಾಡು: ಶಿಕ್ಷಣ (Education) ಮತ್ತು ಹಿಜಾಬ್ (Hijab) ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರೆ ಅದು ಅನ್ಯಾಯ ಮಾಡಿದಂತಾಗುತ್ತದೆ. ಇಸ್ಲಾಂನಲ್ಲಿ (Islam) ಹಿಜಾಬ್ ಧರಿಸುವುದು ಆಯ್ಕೆಯಲ್ಲ. ಧಾರ್ಮಿಕ ಕಟ್ಟುಪಾಡು ಎಂದು ರಾಷ್ಟ್ರಪ್ರಶಸ್ತಿ ವಿಜೇತ ಮಾಜಿ ನಟಿ ಝೈರಾ ವಾಸಿಮ್ (Zaira Wasim) ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ (Social Media) ವಿವರವಾದ ಪತ್ರ ಬರೆದಿರುವ ಅವರು, ಕರ್ನಾಟಕ (Karnataka) ಕಾಲೇಜಿನಲ್ಲಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರ ಪ್ರವೇಶವನ್ನು ನಿರ್ಬಂಧಿಸಿದ್ದನ್ನು ಖಂಡಿಸಿದ್ದಾರೆ. ‘ದೇಶದಲ್ಲಿ ಹಿಜಾಬ್ ಆಯ್ಕೆಯಾಗಿದೆ ಎನ್ನಲಾಗುತ್ತಿರುವ ಹೇಳಿಕೆಯು ದೋಷಪೂರಿತವಾಗಿದೆ.
ಇಸ್ಲಾಂನಲ್ಲಿ ಹಿಜಾಬ್ ಎನ್ನುವುದು ಆಯ್ಕೆಯಲ್ಲ. ಅದೊಂದು ಹೊಣೆಗಾರಿಕೆ. ಒಬ್ಬ ಮಹಿಳೆ ಹಿಜಾಬ್ ಧರಿಸುತ್ತಾಳೆ ಎಂದರೆ ದೇವರು ಆಕೆಗೆ ನೀಡಿರುವ ಹೊಣೆಯನ್ನು ಪೂರ್ಣಗೊಳಿಸಲು ಧರಿಸುತ್ತಾಳೆ. ಅದನ್ನು ಆಕೆ ಪ್ರೀತಿಯಿಂದಲೇ ಮಾಡುತ್ತಾಳೆ. ನಾನು ಒಬ್ಬ ಮಹಿಳೆಯಾಗಿ ಕೃತಜ್ಞತೆ ಮತ್ತು ವಿನಯದಿಂದ ಹಿಜಾಬ್ ಧರಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
