ಜೂ. 1ರಿಂದ ಕುದ್ರೋಳಿ ಸೇರಿದಂತೆ ದೇವಸ್ಥಾನ ಬಾಗಿಲು ತೆರೆಯಲು ಸಿದ್ಧತೆ
ಲಾಕ್ಡೌನ್ ಬಳಿಕ ದೇವಸ್ಥಾನಗಳು ಜೂ.1ರಿಂದ ಭಕ್ತರಿಗೆ ದೇವರ ದರ್ಶನಕ್ಕೆ ತೆರೆದುಕೊಳ್ಳುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ಗುರುವಾರ ಆರಂಭಗೊಂಡಿದೆ.
ಮಂಗಳೂರು(ಮೇ 29): ಲಾಕ್ಡೌನ್ ಬಳಿಕ ದೇವಸ್ಥಾನಗಳು ಜೂ.1ರಿಂದ ಭಕ್ತರಿಗೆ ದೇವರ ದರ್ಶನಕ್ಕೆ ತೆರೆದುಕೊಳ್ಳುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ಗುರುವಾರ ಆರಂಭಗೊಂಡಿದೆ.
ಮಂಗಳೂರಿನ ಕುದ್ರೋಳಿ ದೇವಸ್ಥಾನದಲ್ಲಿ ಸ್ಯಾನಿಟೈಸರ್ ಸಿಂಪಡಿಸಿ ಇಡೀ ದೇವಸ್ಥಾನವನ್ನು ಕ್ಲೀನಿಂಗ್ ಮಾಡುವ ಕೆಲಸ ನಡೆದಿದೆ. ಸೋಮವಾರದಿಂದ ಆಗಮಿಸುವ ಭಕ್ತರಿಗೆ ದೇವರ ದರ್ಶನಕ್ಕೆ ಸಾಮಾಜಿಕ ಅಂತರದಲ್ಲಿ ಅಂಕಣಗಳನ್ನು ಸಿದ್ಧಪಡಿಸುವ ಕೆಲಸವೂ ನಡೆಯುತ್ತಿದೆ. ಇದೇ ರೀತಿಯ ಸಿದ್ಧತೆ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ನಡೆಯುತ್ತಿದೆ. ಬಹುತೇಕ ದೇವಸ್ಥಾನಗಳು ಭಕ್ತರಿಗೆ ತೆರೆಯದಿದ್ದರೂ ಸ್ವಚ್ಛತಾ ಕಾರ್ಯವನ್ನು ನಿತ್ಯವೂ ನಿರ್ವಹಿಸುತ್ತಿವೆ.
ಉಡುಪಿಗೆ ಮತ್ತೆ 'ಮಹಾ' ಸೋಂಕು: ಒಂದೇ ದಿನ 27 ಪ್ರಕರಣಗಳು
ಸರ್ಕಾರ ನೀಡಿರುವ ಕೆಲವು ಮಾರ್ಗಸೂಚಿಯಂತೆ ದೇವರ ದರ್ಶನಕ್ಕೆ ಬರುವ ಭಕ್ತರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅಗತ್ಯವಿದ್ದು ಸಾರ್ವಜನಿಕರು ಆಡಳಿತದೊಂದಿಗೆ ಸಹಕರಿಸುವಂತೆ ಕುದ್ರೋಳಿ ದೇವಸ್ಥಾನದ ಆಡಳಿತ ಕೋರಿದೆ.
ಜೂ.1ರಂದು ಕ್ಷೇತ್ರದಲ್ಲಿ ಲೋಕಕಲ್ಯಾರ್ಥವಾಗಿ ವಿಶೇಷ ಹವನ ಹಾಗೂ ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಸಾಯಿರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.