ಪ್ರಶ್ನೆಪತ್ರಿಕೆ ನಕಲಿಗೆ ಸಹಕರ: ನಾಲ್ವರು ಶಿಕ್ಷಕರ ಬಂಧನ| ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ನಡೆದ ಘಟನೆ| ಹಾರೂಗೇರಿ ಎಚ್‌ವಿಎಚ್‌ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಯಲಯದ ಉಪಪ್ರಾಚಾರ್ಯ ಎಂ.ಆರ್‌.ಮಗದುಮ್‌,  ಉಪನ್ಯಾಸಕರಾದ ಡಿ.ಪಿ. ಕಾಪಸಿ, ಎ.ಬಿ.ಪಾಟೀಲ ಹಾಗೂ ಅಲಕನೂರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಪಿ.ಬಿ.ಪಳಯ್ಯಾ ಬಂಧಿತರು| 

ಬೆಳಗಾವಿ(ಜೂ.26): ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಂದರ್ಭದಲ್ಲಿ ಸಾಮೂಹಿಕ ನಕಲಿಗೆ ಸಹಕಾರ ನೀಡಿದ ಆರೋಪದ ಮೇಲೆ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿ ಪಟ್ಟಣದಲ್ಲಿ ಮಂಗಳವಾರ ನಾಲ್ವರು ಶಿಕ್ಷಕರನ್ನು ಬಂಧಿಸಲಾಗಿದೆ. 

Add Asianetnews Kannada as a Preferred SourcegooglePreferred

ಹಾರೂಗೇರಿ ಎಚ್‌ವಿಎಚ್‌ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಯಲಯದ ಉಪಪ್ರಾಚಾರ್ಯ ಎಂ.ಆರ್‌.ಮಗದುಮ್‌, ಉಪನ್ಯಾಸಕರಾದ ಡಿ.ಪಿ. ಕಾಪಸಿ, ಎ.ಬಿ.ಪಾಟೀಲ ಹಾಗೂ ಅಲಕನೂರ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಪಿ.ಬಿ.ಪಳಯ್ಯಾ ಬಂಧಿತರು.

SSLC ಎಕ್ಸಾಂ: 10 ಕಿ.ಮೀ ನಡೆದು ಬಂದು ಪರೀಕ್ಷೆ ಬರೆದ ವಿದ್ಯಾರ್ಥಿಗಳು..!

ಸೋಮವಾರ ಎಚ್‌ವಿಎಚ್‌ ಸಂಯುಕ್ತ ಪದವಿ ಪೂರ್ವ ಕಾಲೇಜು ಕಟ್ಟಡದಲ್ಲಿ ಎಸ್‌ಎಸ್‌ಎಲ್‌ಸಿ ಸಾಮಾನ್ಯ ಗಣಿತ ವಿಷಯದ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಬಂಧಿತ ಶಿಕ್ಷಕರು ಪ್ರಶ್ನೆಗಳಿಗೆ ಉತ್ತರ ಸಂಗ್ರಹಿಸಿ, ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿರುವ ವಿಡಿಯೋ ವೈರಲ್‌ ಆಗಿತ್ತು. ವಿಡಿಯೊ ವೈರಲ್‌ ವಿಷಯ ಗಮನಕ್ಕೆ ಬರುತ್ತಿದ್ದಂತೆ ಡಿಡಿಪಿಐ ಎಂ.ಜಿ.ದಾಸರ್‌ ದೂರು ದಾಖಲಿಸಲು ರಾಯಬಾಗ ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚನೆ ನೀಡಿದ್ದರು. ತಕ್ಷಣ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಬಿಇಒ ಎಚ್‌.ಎ.ಭಜಂತ್ರಿ ವಿಡಿಯೋ ದಾಖಲೆ ಆಧಾರದ ಮೇಲೆ ನಾಲ್ವರು ಶಿಕ್ಷಕರ ವಿರುದ್ಧ ಹಾರೂಗೇರೆ ಪೊಲೀಸ್‌ ಠಾಣೆಯಲ್ಲಿ ಸೋಮವಾರವೇ ದೂರು ದಾಖಲಿಸಿದ್ದರು. ಬಿಇಒ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ನಾಲ್ವರು ಶಿಕ್ಷಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠ ಸುಧೀರಕುಮಾರ ರೆಡ್ಡಿ ತಿಳಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣ ಇಲಾಖೆ ಶಿಕ್ಷಕರ ಅಮಾನತ್ತಿಗೆ ಸೂಚನೆ ನೀಡಿದ್ದು, ಆಡಳಿತ ಮಂಡಳಿಗೂ ಆದೇಶ ರವಾನಿಸಲಾಗಿದೆ ಎಂದು ಡಿಡಿಪಿಐ ಎಂ.ಜಿ.ದಾಸರ ತಿಳಿಸಿದ್ದಾರೆ.