ಅರ್ಥವ್ಯವಸ್ಥೆ ಸರಿ ಹೋಗದಿದ್ದರೆ ಸುಟ್ಟುಬಿಡಿ ಎಂದು ಅಪನಗದೀಕರಣ ವೇಳೆ ಹೇಳಿದ್ದರು. ವಿತ್ತ ವ್ಯವಸ್ಥೆ ಇಂದಿಗೂ ಸರಿಯಾಗಿಲ್ಲ, ಪ್ರಧಾನಿಯನ್ನು ಜೀವಂತವಾಗಿ ಸುಡುವ ಕಾಲ ಬಂದಿದೆ ಎಂದು ಟಿ. ಬಿ. ಜಯಚಂದ್ರ ಹೇಳಿಕೆ ನೀಡಿದ್ದಾರೆ.

ತುಮಕೂರು[ನ.10]: 500 ಹಾಗೂ .1000 ಮುಖಬೆಲೆಯ ನೋಟುಗಳ ಅಮಾನ್ಯೀಕರಣಗೊಂಡ ವೇಳೆ ದೇಶದ ಅರ್ಥವ್ಯವಸ್ಥೆ ಸರಿಪಡಿಸಲು ಹಾಗೂ ನೋಟು ಅಮಾನ್ಯೀಕರಣದ ವಿರುದ್ಧ ಗೆದ್ದು ಬರಲು ಪ್ರಧಾನಿ ನರೇಂದ್ರ ಮೋದಿ 50 ದಿನಗಳ ಕಾಲಾವಕಾಶ ಕೇಳಿದ್ದರು. ಅರ್ಥವ್ಯವಸ್ಥೆ ಸರಿ ಹೋಗದಿದ್ದರೆ ನನ್ನನ್ನು ಜೀವಂತವಾಗಿ ಸುಟ್ಟು ಬಿಡಿ ಎಂದು 2 ವರ್ಷಗಳ ಹಿಂದೆ ಹೇಳಿದ್ದರು. ದೇಶದ ಅರ್ಥವ್ಯವಸ್ಥೆ ಇಂದಿಗೂ ಸರಿ ಹೋಗಿಲ್ಲ. ಬಹುಶಃ ನರೇಂದ್ರ ಮೋದಿ ಅವರನ್ನು ಜೀವಂತವಾಗಿ ಸುಡುವ ಕಾಲ ಈಗ ಬಂದಿದೆ ಎಂದು ಮಾಜಿ ಸಚಿವ ಟಿ.ಬಿ. ಜಯಚಂದ್ರ ಹೇಳಿಕೆ ನೀಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

Add Asianetnews Kannada as a Preferred SourcegooglePreferred

ಅಪನಗದೀಕರಣಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಕಾಂಗ್ರೆಸ್‌ ವತಿಯಿಂದ ನಗರದ ಟೌನ್‌ಹಾಲ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಕರಾಳ ದಿನದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.

50 ದಿನ ಸಮಯಾವಕಾಶ ಕೊಡಿ. ದೇಶ ಸರಿ ಹೋಗದಿದ್ದರೆ, ಜೀವಂತವಾಗಿ ಸುಟ್ಟುಬಿಡಿ ಎಂದು ಹೇಳಿದ್ದ ನರೇಂದ್ರ ಮೋದಿ ಅಂದು ತಾವಾಡಿದ ಮಾತುಗಳನ್ನು ಮರೆತಂತೆ ನಟಿಸುತ್ತಿದ್ದಾರೆ. ಪ್ರಧಾನಿ ಮೋದಿ ಆಡಿದ ಮಾತಿನಂತೆ ನಡೆದುಕೊಳ್ಳಲಿ ಎಂದು ಸವಾಲು ಹಾಕಿದ ಜಯಚಂದ್ರ, ನರೇಂದ್ರ ಮೋದಿಯವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿದ್ದರೆ ರಾಜೀನಾಮೆ ನೀಡಿ ಮನೆಗೆ ಹೋಗಲಿ ಎಂದಿದ್ದಾರೆ.