ಪೆಟ್ರೋಲ್‌ ಲೋಡಿಂಗ್‌ ನಿಲ್ಲಿಸಿ ಪ್ರತಿಭಟಿಸಿದ ಚಾಲಕರು: ಪರಿಹಾರಕ್ಕೆ ಒತ್ತಾಯ

ಹೊಸಕೋಟೆ(ಅ.08): ತಾಲೂಕಿನ ದೇವನಗೊಂದಿ ಬಳಿ ಇರುವ ಭಾರತ್‌ ಪೆಟ್ರೋಲಿಯಂ ಕಂಪನಿ ಲಿಮಿಟೆಡ್‌ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕನಿಗೆ ಶುಕ್ರವಾರ ಬೆಳಿಗ್ಗೆ ಎದೆನೋವು ಕಾಣಿಸಿಕೊಂಡು ಸಮಯಕ್ಕೆ ಆ್ಯಂಬುಲೆನ್ಸ್‌ ಸಿಗದೆ ಸಾವನ್ನಪ್ಪಿದ ಹಿನ್ನೆಲೆ ಉಳಿದ ಚಾಲಕರು ಲೋಡಿಂಗ್‌ ನಿಲ್ಲಿಸಿ ಪರಿಹಾರ ನೀಡುವಂತೆ ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಪಾವಗಡದ ಕಿರಣ್‌(38) ಮೃತ ಚಾಲಕ. ಶುಕ್ರವಾರ ಬೆಳಿಗ್ಗೆ ಟ್ಯಾಂಕರ್‌ಗೆ ಡೀಸೆಲ್‌ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಎದೆ ನೋವು ಕಾಣಿಸಿಕೊಂಡಿದೆ. ಅನುಗೊಂಡನಹಳ್ಳಿ ಹೋಬಳಿಯ ದೇವನಗೊಂದಿ ಬಳಿ ಬಿಪಿಸಿಎಲ್‌, ಎಚ್‌ಪಿಸಿಎಲ್‌, ಸೇರಿದಂತೆ ಐಒಸಿಯ ಪೆಟ್ರೋಲ್‌ ಡೀಸೆಲ್‌ ಫಿಲ್ಲಿಂಗ್‌ ಸೆಂಟರ್‌ ಇದೆ. ಇಲ್ಲಿ ಸಾವಿರಾರು ಟ್ಯಾಂಕರ್‌ ಲಾರಿಗಳು ಪ್ರತಿದಿನ ವಿವಿಧ ಜಿಲ್ಲೆಗಳಿಗೆ ಪೆಟ್ರೋಲ್‌, ಡೀಸೆಲ್‌ ಸರಬರಾಜು ಮಾಡುತ್ತವೆ. ಆದರೆ ಇಲ್ಲಿನ ವ್ಯವಸ್ಥಾಪಕರು ಚಾಲಕರ ತುರ್ತು ಪರಿಸ್ಥಿತಿಗೆ ಆ್ಯಂಬುಲೆನ್ಸ್‌ ವಾಹನ ವ್ಯವಸ್ಥೆ ಕಲ್ಪಿಸಿದ್ದರೂ ದಿನದ 24 ಗಂಟೆ ಕೆಲಸ ಮಾಡುವಂತೆ ಚಾಲಕರನ್ನು ನಿಯೋಜನೆ ಮಾಡಿಲ್ಲ. ಇದರ ಪರಿಣಾಮವಾಗಿ ಮೃತ ಕಿರಣ್‌ಗೆ ಎದೆನೋವು ಬಂದಾಗ ಆಸ್ಪತ್ರೆಗೆ ಸಾಗಿಸಲು ಚಾಲಕರಿರಲಿಲ್ಲ. ಇದರಿಂದ ಕಿರಣ್‌ ಸಾವಿಗೆ ಕಂಪನಿ ನೇರ ಹೊಣೆಗಾರಿಕೆ ಆಗಿದೆ. ಆದ್ದರಿಂದ 10 ಲಕ್ಷ ರು. ಪರಿಹಾರ ನೀಡಬೇಕು ಎಂದು ಬಿಪಿಸಿಎಲ್‌ ಟ್ಯಾಂಕರ್‌ ಚಾಲಕ ಹಾಗೂ ಕ್ಲೀನರ್‌ ಸಂಘದ ಕಾರ್ಯದರ್ಶಿ ರಾಮಯ್ಯ ತಿಳಿಸಿದರು.

ಬೆಂಗಳೂರು: ದೌರ್ಜನ್ಯ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿ, ಡಿಸಿ ಆರ್.ಲತಾ

ಕಂಪನಿ ಹೊಣೆಗಾರಿಕೆ ಹೊತ್ತು ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಮಧ್ಯಾಹ್ನ ಆದರೂ ಯಾವೊಬ್ಬ ಚಾಲಕರೂ ಲೋಡಿಂಗ್‌ ಮಾಡಿಸದೆ ಮೃತ ಕಿರಣ್‌ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಸಂಘಟನೆ ಕಾನೂನು ಸಲಹೆಗಾರ ಮುನಿರಾಜ್‌ ಆಗಮಿಸಿ ಬಿಪಿಸಿಎಲ್‌ ಸಂಸ್ಥೆ ಜೊತೆ ಚರ್ಚಿಸಿ ಪರಿಹಾರಕ್ಕೆ ಉನ್ನತ ಮಟ್ಟದ ಅ​ಕಾರಿಗಳ ಜೊತೆ ಚರ್ಚಿಸಿ ನೀಡುವ ಭರವಸೆ ನೀಡಿದ್ದು ಸೆಪ್ಟೆಂಬರ್‌ 22ರವರೆಗೆ ಗಡುವು ನೀಡುವಂತೆ ಮನವಿ ಮಾಡಿದರು. ಈ ವೇಳೆ ಎಲ್ಲಾ ಚಾಲಕ, ಕ್ಲೀನರ್‌ಗಳು 45 ಸಾವಿರ ಹಣ ಸಂಗ್ರಹಿಸಿ ಮೃತ ಕಿರಣ್‌ ಕುಟುಂಬಕ್ಕೆ ಹಸ್ತಾಂತರಿಸಿದರು. ಘಟನೆ ಕುರಿತು ಅನುಗೊಂನಡಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.