ಹಣ ಪಡೆದು ಓಟು ಪಡೆದ ಮೇಲೆ ನಮ್ಮಗಳ ಪರವಾಗಿ ಮಾತಾಡುವುದಿಲ್ಲ. ಜನ ಯಾವತ್ತೂ ದುಡ್ಡು ತೆಗೆದುಕೊಂಡು ಮತದಾನ ಮಾಡುವುದಿಲ್ಲವೆಂದು ಶಪಥ ಮಾಡುತ್ತಾರೋ ಆವತ್ತು ಮಾತ್ರವೇ ಸಮಸ್ಯೆಗಳಿಗೆ ಪರಿಹಾರ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಚ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.

 ಕೋಲಾರ (ಡಿ. 31): ಹಣ ಪಡೆದು ಓಟು ಪಡೆದ ಮೇಲೆ ನಮ್ಮಗಳ ಪರವಾಗಿ ಮಾತಾಡುವುದಿಲ್ಲ. ಜನ ಯಾವತ್ತೂ ದುಡ್ಡು ತೆಗೆದುಕೊಂಡು ಮತದಾನ ಮಾಡುವುದಿಲ್ಲವೆಂದು ಶಪಥ ಮಾಡುತ್ತಾರೋ ಆವತ್ತು ಮಾತ್ರವೇ ಸಮಸ್ಯೆಗಳಿಗೆ ಪರಿಹಾರ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಚ್‌ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ತಿಳಿಸಿದರು.

ಶುಕ್ರವಾರ ನಗರದ ಪತ್ರಕರ್ತರ ಭವನದಲ್ಲಿ ಜನಪರ ವೇದಿಕೆಯಿಂದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಮತ್ತು ಸಾಮರಸ್ಯಕ್ಕಾಗಿ ಅನಾಗ್ರಹ ಅಂದೋಲನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಹಣ (money) ನೀಡಿ ಓಟು (Vote) ಹಾಕಿಸಿಕೊಂಡು ಗೆದ್ದವರು ಯಾವತ್ತೂ ನಮ್ಮ ಪರವಾಗಿ ಮಾತನಾಡುವುದಿಲ್ಲ. ಈ ಪರಿಸ್ಥಿತಿಯಲ್ಲಿ ಜನಪರವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಸಾಧ್ಯವಾಗುವುದಿಲ್ಲ. ಸಮಸ್ಯೆಗಳಿಗೆ ಮೂಲ ಕಾರಣವನ್ನು ಜನರು ಅರ್ಥ ಮಾಡಿಕೊಂಡು ಮತ ಚಲಾಯಿಸಬೇಕು ಎಂದರು.

ಎಲ್ಲ ಪಕ್ಷಗಳೂ ಹಣ ಹಂಚುತ್ತವೆ

ಮೂರೂ ಪಕ್ಷದವರು ಚುನಾವಣಾ ಹಿಂದಿನ ದಿನ ಹಣ ಹಂಚುತ್ತಾರೆ. ಇದು ಕೇವಲ ರಾಜಕೀಯ ವ್ಯವಸ್ಥೆಯಲ್ಲಿ ಮಾತ್ರವಲ್ಲ, ಸಂಘ ಸಂಸ್ಥೆಗಳ ಚುನಾವಣೆಯಲ್ಲೂ ಹಣ ಹಂಚಿ ಮತ ಹಾಕಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಕೈಗಾರಿಕೆಗಳ ಪರ ನಿಂತಿದ್ದಾರೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿ ರೈತ ವಿರೋಧಿ ನೀತಿ ರೂಪಿಸಿದ್ದಾರೆ. ಅಧಿಕಾರಿಗಳು ಕಚೇರಿಗಳಲ್ಲಿ ಪಡೆದ ಲಂಚದ ಹಣ ಸಂಗ್ರಹಿಸಿ ಮೇಲಧಿಕಾರಿ ಹಾಗೂ ರಾಜಕಾರಣಿಗಳಿಗೆ ಹಂಚುತ್ತಿದ್ದಾರೆ. ಲಂಚ ಅಧಿಕಾರಿಗಳ ಪಾಲಿನ ಅಜನ್ಮ ಹಕ್ಕಾಗಿದೆ ಎಂದು ಆರೋಪಿಸಿದರು.

ಜನರ ಬಡತನ ಅತಿರೇಕಕ್ಕೆ ಹೋಗಿದೆ. ಸಂವಿಧಾನ ಬದ್ಧವಾಗಿ ಜನರಪರ ಅಭಿವೃದ್ಧಿ ಕೆಲಸ ಮಾಡುವಲ್ಲಿ ಆಡಳಿತಗಾರರು ವಿಫಲರಾಗಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸರ್ಕಾರದ ವೈಫಲ್ಯದಿಂದಾಗಿ ಕೋಲಾರ ಅಭಿವೃದ್ಧಿಯಾಗಿಲ್ಲ. ಮೂರನೇ ಹಂತದ ಶುದ್ಧೀಕರಣ ಮಾಡದೆ ಸುಳ್ಳು ಹೇಳುತ್ತಿದ್ದಾರೆ. ಕೆ.ಸಿ.ವ್ಯಾಲಿ ನೀರು ತಂದಿದ್ದನ್ನು ಮಹಾನ್‌ ಸಾಧನೆ ಎಂಬುದಾಗಿ ಜನಪ್ರತಿನಿಧಿಗಳು ಸಂಭ್ರಮಿಸುತ್ತಿದ್ದಾರೆ. ಜನಪರ, ರೈತಪರ ಇರುವ ಸರ್ಕಾರಗಳೇ ಇಲ್ಲ. ಜನಪರ, ರೈತಪರ ನಿಲ್ಲದವರ ಹಾಗೂ ಕೈಗಾರಿಕೆ ಪರ ನೀತಿ ರೂಪಿಸುವವರಿಗೆ ಕೈಗೆ ಅಧಿಕಾರ ಕೊಡಬಾರದು ಎಂದರು.

ಜಿಲ್ಲೆಯ ಅಭಿವೃದ್ಧಿ ಮರೀಚಿಕೆ

ಜನಪರ ವೇದಿಕೆ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಕೋಲಾರ ಪರಿಸ್ಥಿತಿ ಹೀನಾಯವಾಗಿದ್ದು, ಅಭಿವೃದ್ಧಿ ಮರೀಚಿಕೆಯಾಗಿದೆ. ಶಾಶ್ವತ ನೀರಾವರಿಗೆ ಹೋರಾಟ ಪರಿಣಾಮ ಕೆ.ಸಿ.ವ್ಯಾಲಿ ನೀರು ಸಿಕ್ಕಿತು. ಆದರೆ, ಮೂರನೇ ಹಂತದಲ್ಲಿ ಶುದ್ಧೀಕರಿಸಿ ಹರಿಸಬೇಕು. ವೈದ್ಯಕೀಯ ಕಾಲೇಜು, ಹೈಟೆಕ್‌ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆ ಬೇಕು, ಕೈಗಾರಿಕೆಗಳು ಬರಬೇಕು. ನಾವು ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳು ಜನಪರವಾಗಿ ರಾಜಕಾರಣ ಮಾಡದೆ ಹಣದ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಹರಿಹಾಯ್ದರು.

ಜೆಡಿಎಸ್‌ ಮುಖಂಡ ಸಿಎಂಆರ್‌ ಶ್ರೀನಾಥ್‌, ಪ್ರಶ್ನೆ ಮಾಡುವ ಪ್ರವೃತ್ತಿ ಇಲ್ಲದಿದ್ದರೆ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ. ಜನಪರ ವೇದಿಕೆಯಿಂದ ಜನರ ಮನಸ್ಸು ಮುಟ್ಟುವ ಕಾರ್ಯ ಮಾಡುತ್ತಿದ್ದೀರಿ. ಸಮಾಜ ಪರಿವರ್ತನೆ ಆಗಬೇಕು. ಸಮಾಜಕ್ಕೆ ಧ್ವನಿಯಾಗಬೇಕು ಎಂದು ಹೇಳಿದರು.

ಜನಪರ ವೇದಿಕೆ ಗೌರವಾಧ್ಯಕ್ಷ ಸಲಾವುದ್ದೀನ್‌ ಬಾಬು, ಖಜಾಂಚಿ ವಿ.ಗೀತಾ, ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ್‌, ತಾಲೂಕು ಕಾರ್ಯದರ್ಶಿ ಟಿ.ಎಂ.ವೆಂಕಟೇಶ್‌, ರೈತ ಮುಖಂಡ ಪಿ.ಆರ್‌.ಸೂರ್ಯನಾರಾಯಣ, ಶ್ರೀನಿವಾಸ್‌ ಇದ್ದರು.

ಕಾಂಗ್ರೆಸ್ ಟಿಕೆಟ್ ಫೈಟ್

ಚಿತ್ರದುರ್ಗ (ಡಿ.30): ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕೈ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂದು ಚಿತ್ರದುರ್ಗದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳ ಭೇಟಿ ಮತ್ತು ಪರಿಶೀಲನೆ ವೇಳೆ ಆಯಾ ಕ್ಷೇತ್ರದ ಆಕಾಂಕ್ಷಿಗಳು ತಮ್ಮ ಅಭಿಮಾನಿಗಳೊಂದಿಗೆ ಕಚೇರಿಗೆ ಆಗಮಿಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ತೋರಿದರು. ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬೆಳಗ್ಗೆ 10ಗಂಟೆ ಸುಮಾರಿಗೆ ಅಗಮಿಸಿದ ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್ ಹಾಗೂ ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಆಗಿರುವ ಮಯೂರ್ ಜಯಕುಮಾರ್ ಕಚೇರಿಯಲ್ಲಿ ಕುಳಿತು ಮಾರ್ನಿಂಗ್ ಸೆಷನ್ ನಲ್ಲಿ ಹಿರಿಯೂರು, ಚಿತ್ರದುರ್ಗ ಹಾಗೂ ಹೊಸದುರ್ಗ ಭಾಗದ ಕಾಂಗ್ರೆಸ್ ಆಕಾಂಕ್ಷಿಗಳನ್ನು ಮಾತ್ರ ಒಳಗಡೆ ಬಿಡಲು ಹೇಳು ಒಳಗೆ ತೆರಳಿದರು.

ಇನ್ನೂ ಆಯಾ ಕ್ಷೇತ್ರದ ಸಮಯದ ಆಗಮಿಸುತ್ತಿದ್ದಂತೆ ಮೊದಲಿಗೆ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದ ಕೈ ಆಕಾಂಕ್ಷಿಗಳ ಸಭೆಯಲ್ಲಿ ಮಾಜಿ MLC ಬಿ.ಸೋಮಶೇಖರ್ ಹಾಗೂ ಮಾಜಿ ಸಚಿವ ಡಿ.ಸುಧಾಕರ್ ಸೇರಿದಂತೆ 5 ಕ್ಕೂ ಅಧಿಕ ಆಕಾಂಕ್ಷಿಗಳು ಕಾರ್ಯದರ್ಶಿಗಳ ಮುಂದೆ ಹಾಜರಾದರು. ಸುಮಾರು ಒಂದು ಗಂಟೆಗಳ ಕಾಲ ಪ್ರತೀ ಕ್ಷೇತ್ರದ ಆಕಾಂಕ್ಷಿಗಳ‌ ಜೊತೆ ಚರ್ಚೆ ನಡೆಸಿ ಅಭ್ಯರ್ಥಿಗಳ ಬಗೆಗೆ ಪರಿಶೀಲನೆ ನಡೆಸಿದ ನಾಯಕರು ಪಕ್ಷದ ತೀರ್ಮಾನಕ್ಕೆ ಬದ್ದರಾಗಿರಬೇಕು ಎಂದು ಖಡಕ್ ಸಂದೇಶ ರವಾನಿಸಿದರು.