*  ಹಾನಿಗೆ ಒಳಗಾದ ಮನೆಗಳ ದುರಸ್ತಿಗೆ ಪ್ರತ್ಯೇಕ ತಂಡ*  5 ಸಾವಿರ ಜನರಿಗೆ ಜಿಲ್ಲಾಡಳಿತ ಆಶ್ರಯ*  ಎನ್‌ಜಿಆರ್‌ಐ ವಿಜ್ಞಾನಿಗಳ ತಂಡ ಭೇಟಿ   

ಕಲಬುರಗಿ(ಅ.17): ಭೂಕಂಪನದಿಂದ(Earthquake) ಕಂಗೆಟ್ಟಿರುವ ಚಿಂಚೋಳಿ(Chincholi) ಮತ್ತು ಕಾಳಗಿ(Kalagi) ತಾಲೂಕಿಗೆ ಭಾನುವಾರ ಹೈದರಾಬಾದ್‌ನಿಂದ(Hyderabad) ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ (NJRI) ವಿಜ್ಞಾನಿಗಳ ತಂಡ ಭೇಟಿ ನೀಡಲಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸಾನಾ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಶನಿವಾರ ಜಿಲ್ಲೆಯ ಕಾಳಗಿ ತಾಲೂಕಿನ ಹೊಸಳ್ಳಿ (ಎಚ್‌) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿಗಳ ನಡೆ- ಹಳ್ಳಿ ಕಡೆ’ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿ, ಭೂಕಂಪನ ಪೀಡಿತ ಪ್ರದೇಶಗಳಿಗೆ ತಂಡವು ಭೇಟಿ ನೀಡಿ ಭೌಗೋಳಿಕ ಸಮೀಕ್ಷೆ(Geographical Survey) ಮಾಡಲಿದೆ ಎಂದರು.

ಪದೇ ಪದೇ ಭೂಕಂಪ: ಅಧ್ಯಯನಕ್ಕೆ ನ.8 ಕ್ಕೆ ಗಡಿಕೇಶ್ವರಕ್ಕೆ ಕೇಂದ್ರ ತಂಡ

ರಿಕ್ಟರ್‌ ಮಾಪನದ(Richter Magnitude) ಪ್ರಕಾರ ಜಿಲ್ಲೆಯಲ್ಲಿ 1ರಿಂದ 3ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ. ಗಡಿಕೇಶ್ವರದಲ್ಲಿ 5 ಮನೆ ಭಾಗಶಃ ಜಖಂಗೊಂಡಿದ್ದನ್ನು ಬಿಟ್ಟರೆ ಹೆಚ್ಚಿನ ಹಾನಿಯಾಗಿಲ್ಲ. ಕಾಳಗಿ ತಾಲೂಕಿನ 5 ಕಡೆ ಕಾಳಜಿ ಕೇಂದ್ರ(Care center) ತೆರೆಯಲಾಗಿದ್ದು, ಸುಮಾರು 5 ಸಾವಿರ ಜನರಿಗೆ ಊಟ ನೀಡಲಾಗುತ್ತಿದೆ. ನಿರಾಶ್ರಿತ ಕೇಂದ್ರದಲ್ಲೇ(Refugee Center) ವಾಸಿಸುವವರಿಗೆ ಬೆಡ್‌ಶೀಟ್‌ ಸೇರಿ ಇನ್ನಿತರ ಅಗತ್ಯ ವಸ್ತುಗಳನ್ನು ನೀಡಲಾಗುತ್ತಿದೆ ಎಂದರು.

ಹೊಸಳ್ಳಿ (ಎಚ್‌) ಸೇರಿ ಭೂಕಂಪನ ವರದಿಯಾಗಿರುವ ಕಾಳಗಿ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಲೊಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳಿಂದ(Engineers)ಕೂಡಿರುವ 6 ತಂಡ ರಚಿಸಲಾಗಿದ್ದು, ಈ ತಂಡಗಳು ಗ್ರಾಮದ ಪ್ರತಿ ಮನೆಗಳ ಸರ್ವೆ(Survey) ಕೈಗೊಂಡು ಮನೆ ಮಾಲೀಕರಿಗೆ ಅಗತ್ಯವಿದ್ದರೆ ಸಣ್ಣ-ಪುಟ್ಟ ದುರಸ್ತಿ, ಮಾರ್ಪಾಡು ಮಾಡಲು ಸಲಹೆ ನೀಡುತ್ತಿವೆ ಎಂದು ಮಾಹಿತಿ ನೀಡಿದರು.