ಚನ್ನಪಟ್ಟಣ ಉಪಚುನಾವಣೆ : ಕೈನಿಂದ ಅಚ್ಚರಿಯ ಅಭ್ಯರ್ಥಿ ಕಣಕ್ಕೆ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ. ಉಪಚುನಾವಣೆಯಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ.
![surprise candidate will contest in Channapatnam by-election snr surprise candidate will contest in Channapatnam by-election snr](https://static-ai.asianetnews.com/images/01hvrffyrp4nypmq7pfstvhzkm/1_363x203xt.jpg)
ರಾಮನಗರ : ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ. ಸಾಮಾನ್ಯ ಕಾರ್ಯಕರ್ತನಾಗಿ, ಪಕ್ಷಕ್ಕಾಗಿ ದುಡಿಯುತ್ತೇನೆ. ನಮ್ಮ ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳಿದ್ದಾರೆ. ಉಪಚುನಾವಣೆಯಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತೇವೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಮನಗರ ಜಿಲ್ಲೆ ಪ್ರತಿನಿಧಿಸುತ್ತಿದ್ದರು. ಈಗ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾಗಿದ್ದಾರೆ. ಅವರು ಸೇರಿ ಕರ್ನಾಟಕ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರು ಕರ್ನಾಟಕಕ್ಕೆ ಆಗುವ ಅನ್ಯಾಯವನ್ನು ತಪ್ಪಿಸುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.
ಕರ್ನಾಟಕಕ್ಕೆ ಕೇಂದ್ರದಿಂದ ತೆರಿಗೆ ಹಣ ಹಂಚಿಕೆ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತಿದೆ. ಇಡೀ ರಾಷ್ಟ್ರದಲ್ಲಿ ಟೀಕೆಯನ್ನು ಎದುರಿಸಿದೆ. ಆದರೆ, ನಮ್ಮ ಹಕ್ಕುಗಳನ್ನು ಪ್ರತಿಪಾದನೆ ಮಾಡಲು ಅವಕಾಶ ಇದೆ. ಕರ್ನಾಟಕದ ಪಾಲು ಏನು ಬರಬೇಕಿತ್ತು. ಅದು ಸಿಗಬೇಕಾದದ್ದು ಪ್ರಮುಖ ವಿಚಾರ. ಅದರಲ್ಲಿ ನಾನು ವೈಯಕ್ತಿಕವಾಗಿ ಧ್ವನಿ ಎತ್ತಲು ಈಗಲೂ ಸಿದ್ದನಿದ್ದೇನೆ ಎಂದರು.
ನನಗೆ ಯಾರು ಹಿತಶತ್ರುಗಳಿಲ್ಲ. ನನಗೆ ನಾನೇ ಶತ್ರು. ಅಷ್ಟಕ್ಕೂ ಇದು ಬಿಜೆಪಿ - ಜೆಡಿಎಸ್ ಗೆಲುವು ಅಲ್ಲ. ಜಾತಿ, ಧರ್ಮ, ಭಾವನಾತ್ಮಕ ವಿಚಾರ ಹಾಗೂ ಅಸೂಯೆಯ ಗೆಲುವು. ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಾಗ ನಾನು ಮಾಡಿದ ಕೆಲಸ ಕಾರ್ಯಗಳನ್ನು ಜನರ ಮುಂದಿಟ್ಟು ಕೂಲಿ ಕೇಳಿದೆ. ಬೇರೆಯವರ ಹೆಸರಿನಲ್ಲಿ ಮತ ಕೇಳಲಿಲ್ಲ. ಜನರು ಸಾರಾಸಗಟಾಗಿ ತಿರಸ್ಕಾರ ಮಾಡಿ, ವಿರಾಮ ನೀಡಿದ್ದಾರೆ. ನಾನು ಹೊಸದಾಗಿ ಬಂದಾಗ ಹೊಸಬ ಅಂತ ಅವಕಾಶ ನೀಡಿದರು. ಈಗ ನನಗಿಂತ ಚೆನ್ನಾಗಿ ಕೆಲಸ ಮಾಡುತ್ತಾರೆ, ಡಾಕ್ಟರ್, ವಿದ್ಯಾವಂತರು ಅಂತ ಭಾವಿಸಿ ಜನರು ಮತ ನೀಡಿದ್ದಾರೆ. ನೂತನ ಸಂಸದರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.