Asianet Suvarna News Asianet Suvarna News

ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್‌ ಸಭೇಲಿ ಪುತ್ತಿಗೆ ಶ್ರೀಗಳು ಭಾಗಿ

ಕೋವಿಡ್‌ ದ್ವಿತೀಯ ಅಲೆಯು ವಾಸ್ತವಿಕವಾಗಿ ಕಳೆದ ಬಾರಿಗಿಂತಲೂ ತೀವ್ರ ಹಾಗೂ ಕ್ಷಿಪ್ರಕರವಾಗಿದೆ| ದ್ವಿತೀಯ ಅಲೆಯು ತೀವ್ರಗೊಳ್ಳಲು ಡಿಸೆಂಬರ್‌-ಜನವರಿಯಲ್ಲಿ ಜನರು ತೋರಿದ ನಿರ್ಲಕ್ಷ್ಯವೇ ಮುಖ್ಯ ಕಾರಣ| ಮೀರಿ ಲಸಿಕೆ ಉತ್ಪಾದನೆ ಮಾಡಿ ಇತರ ದೇಶಗಳಿಗೆ ಪೂರೈಸಿ: ಪುತ್ತಿಗೆ ಶ್ರೀ| 

Sugunendra Teertha Swamji Attended WHO Covid Conference grg
Author
Bengaluru, First Published Mar 20, 2021, 1:45 PM IST

ಉಡುಪಿ(ಮಾ.20): ಭಾರತವೂ ಗರಿಷ್ಠ ಪ್ರಮಾಣದಲ್ಲಿ ಕೋವಿಡ್‌ ಲಸಿಕೆಗಳನ್ನು ಉತ್ಪಾದಿಸಿ, ವಿಶ್ವದ ಇತರ ದೇಶಗಳಿಗೆ ನೆರವಾಗಬೇಕೆಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಶುಕ್ರವಾರ ಬೆಳಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ.ಟೆಡ್ರೋಸ್‌ ಆ್ಯಡನಮ್‌ ಗೇಬ್ರಿಯೇಸಸ್‌ ಅವರ ನೇತೃತ್ವದಲ್ಲಿ ಕೋವಿಡ್‌ ಬಗ್ಗೆ ನಡೆದ ಜಾಗತಿಕ ನಾಯಕರ ವರ್ಚುವಲ್‌ ತುರ್ತುಸಭೆಯಲ್ಲಿ ಭಾಗವಹಿಸಿದ್ದ ಶ್ರೀಗಳು, ಸಭೆಯ ಆಶಯದಂತೆ ಗರಿಷ್ಠ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಗೆ ಬಗ್ಗೆ ಕೇಂದ್ರ ಸರ್ಕಾರವನ್ನು ವಿನಂತಿಸಿದರು.

ಕೋವಿಡ್‌ ದ್ವಿತೀಯ ಅಲೆಯು ವಾಸ್ತವಿಕವಾಗಿ ಕಳೆದ ಬಾರಿಗಿಂತಲೂ ತೀವ್ರ ಹಾಗೂ ಕ್ಷಿಪ್ರಕರವಾಗಿದೆ. ದ್ವಿತೀಯ ಅಲೆಯು ತೀವ್ರಗೊಳ್ಳಲು ಡಿಸೆಂಬರ್‌-ಜನವರಿಯಲ್ಲಿ ಜನರು ತೋರಿದ ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಅಭಿಪ್ರಾಯ ವ್ಯಕ್ತವಾಯಿತು. ಆದರೆ ಜನರಲ್ಲಿ ಆತಂಕ ಕಡಿಮೆ ಮಾಡುವುದಕ್ಕಾಗಿ ಫ್ರಾಸ್ಸ್‌, ಇಟಲಿ ಮೊದಲಾದ ದೇಶಗಳು ಸಂತ್ರಸ್ತರ ವಾಸ್ತವ ಸಂಖ್ಯೆಗಳನ್ನು ಪ್ರಕಟಿಸುತ್ತಿಲ್ಲ.

ಮಣಿಪಾಲ್‌ನ MIT ಕ್ಯಾಂಪಸ್‌ನಲ್ಲಿ 6 ಗಂಟೆ ಅವಧಿಯಲ್ಲಿ 62 ಮಂದಿಗೆ ಕೊರೊನಾ ಸೋಂಕು

ಅಲ್ಲದೇ ದ್ವಿತೀಯ ಅಲೆಯನ್ನು ಎದುರಿಸಲು ಅನೇಕ ದೇಶಗಳಿಗೆ ಲಸಿಕೆಯು ಅಲಭ್ಯವಾಗಿರುವುದೂ ತೊಡಕಾಗಿದೆ. ಕಳೆದ ಬಾರಿ ಕೊರೋನಾವನ್ನು ಲಘುವಾಗಿ ತೆಗೆದುಕೊಂಡದ್ದು ಕೂಡ ಮುಖ್ಯ ಕಾರಣವಾಗಿದೆ. ಆದರೆ ಈ ಬಾರಿಯ ಕೊರೋನಾ ವಿಲಕ್ಷಣ ಸ್ವರೂಪ ಹೊಂದಿದ್ದು, ಕಳೆದ ಬಾರಿಯ ಕೊರೋನಾಕ್ಕಿಂತ ವಿಭಿನ್ನವಾಗಿದೆ ಎಂಬುದನ್ನು ಜನತೆ ತಿಳಿದುಕೊಳ್ಳಬೇಕು ಎಂದು ಸಭೆಯು ಅಭಿಪ್ರಾಯಪಟ್ಟಿತು ಎಂದು ಶ್ರೀಗಳು ಹೇಳಿದ್ದಾರೆ.

ಈಗ ಜಗತ್ತಿನ ಅನೇಕ ದೇಶಗಳು ಲಸಿಕೆಗಾಗಿ ಭಾರತದತ್ತ ಮುಖ ಮಾಡಿದ್ದು, ಈ ನಿಟ್ಟಿನಲ್ಲಿ ಭಾರತವು ಶಕ್ತಿ ಮೀರಿ ಲಸಿಕೆಯನ್ನು ಉತ್ಪಾದನೆ ಮಾಡಿ ಇತರ ದೇಶಗಳಿಗೆ ಪೂರೈಕೆ ಮಾಡುವಂತೆ ಸಭೆಯ ಪರವಾಗಿ ಪುತ್ತಿಗೆ ಶ್ರೀಗಳು ಭಾರತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Follow Us:
Download App:
  • android
  • ios