ಆನ್‌ಲೈನ್ ತರಗತಿಗಾಗಿ ಗುಡ್ಡ ಏರಿದ್ದ ಮಕ್ಕಳ ಕಲಿಕೆಗೆ ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ನೆರವಾಗಿದ್ದಾರೆ.

ಕುಂದಾಪುರ (ಸೆ.24): ಇಂಟರ್‌ನೆಟ್‌ ಸಮಸ್ಯೆಯಿಂದಾಗಿ ಗುಡ್ಡದ ಮೇಲೊಂದು ಜೋಪಡಿ ನಿರ್ಮಿಸಿಕೊಂಡು ಸ್ಮಾರ್ಟ್‌ಫೋನ್‌ನಲ್ಲಿ ಅತ್ಯಂತ ಕಷ್ಟಕರವಾಗಿ ಆನ್‌ಲೈನ್‌ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದ ಗೋಳಿಕೆರೆಯ ಪ್ರತಿಭಾವಂತ ವಿದ್ಯಾರ್ಥಿನಿಗೆ ಇಸ್ಫೋಸಿಸ್‌ ಫೌಂಡೇಶನ್‌ ಸಹಾಯಹಸ್ತ ಚಾಚಿದೆ.

Add Asianetnews Kannada as a Preferred SourcegooglePreferred

ಆನ್‌ಲೈನ್‌ ತರಗತಿಗಾಗಿ ವಿದ್ಯಾರ್ಥಿನಿ ಭೂಮಿಕಾ ಪೋಷಕರು ಪಡುತ್ತಿರುವ ಕಷ್ಟಗಳನ್ನು ಮನಗಂಡ ಇಸ್ಫೋಸಿಸ್‌ ಫೌಂಡೇಶ್‌ನ ಸುಧಾಮೂರ್ತಿ ಅವರು ವಿದ್ಯಾರ್ಥಿನಿ ಭೂಮಿಕಾಳ ಆನ್‌ಲೈನ್‌ ಕಲಿಕೆಗೆ ಸಹಾಯವಾಗುವ ನಿಟ್ಟಿನಲ್ಲಿ ಲ್ಯಾಪ್‌ಟಾಪ್‌, ಯುಪಿಎಸ್‌ ಹಾಗೂ ಒಂದು ವರ್ಷಗಳ ಇಂಟರ್‌ನೆಟ್‌ ರೀಚಾರ್ಜ್ ಉಳ್ಳ ಡಾಂಗಲ್‌ ಅನ್ನು ನೀಡಿದ್ದಾರೆ. ಇಸ್ಫೋಸಿಸ್‌ನ ಉಡುಪಿ ಪ್ರತಿನಿಧಿ ಯಶವಂತ್‌ ಅವರ ಮೂಲಕ ಮಂಗಳವಾರ ಗೋಳಿಕೆರೆಯ ಮನೆಯಲ್ಲಿ ಲ್ಯಾಪ್‌ಟಾಪ್‌ ಹಸ್ತಾಂತರಿಸಿದರು.

ಕೊರೋನಾ ಆಸ್ಪತ್ರೆಗೆ ಸುಧಾಮೂರ್ತಿ ನೆರವು : ಶಿವಾಜಿನಗರ ಬಳಿ ನಿರ್ಮಾಣ

ಬೈಂದೂರು ತಾಲೂಕು ಇಡೂರು ಕುಂಜ್ಞಾಡಿ ಗ್ರಾಮದ ಗೋಳಿಕೆರೆ ಗೋಪಾಲ ಗೌಡ ಮತ್ತು ಗೀತಾ ದಂಪತಿ ಮಕ್ಕಳಾದ ನವೋದಯ ಶಾಲೆ 10ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಹಾಗೂ 9ನೇ ತರಗತಿ ವಿದ್ಯಾರ್ಥಿ ಭರತ್‌ ಪ್ರತಿಭಾವಂತರು. ಮನೆ ಪರಿಸರದಲ್ಲಿ ಸೂಕ್ತ ನೆಟ್‌ವರ್ಕ್ ಸಿಗದೆ ಬೆಟ್ಟದ ಮೇಲೆ ಸಣ್ಣದೊಂದು ಚಪ್ಪರ ಮಾಡಿ ಅದರೊಳಗೆ ಆನ್‌ಲೈನ್‌ ತರಗತಿಗಳನ್ನು ಕೇಳುತ್ತಿದ್ದರು. ತಮ್ಮ ಇಬ್ಬರು ಮಕ್ಕಳಿಗೆ ಸ್ಮಾರ್ಟ್‌ಫೋನ್‌ ಕೊಡಿಸಲು ತಂದೆ ಗೋಪಾಲ ಗೌಡ ಸಾಲ ಕೂಡ ಮಾಡಿದ್ದರು.

ಕನ್ನಡಪ್ರಭ ಗಮನ ಸೆಳೆದಿತ್ತು

ಈ ಇಬ್ಬರು ವಿದ್ಯಾರ್ಥಿಗಳು ಆನ್‌ಲೈನ್‌ ಪಾಠಕ್ಕಾಗಿ ಪಡುತ್ತಿರುವ ಪಾಡು, ತೀವ್ರ ಬಡತನದಲ್ಲೂ ಹೆತ್ತವರು ತಮ್ಮಿಬ್ಬರು ಮಕ್ಕಳ ಆನ್‌ಲೈನ್‌ ತರಗತಿಗೆ ಪ್ರೋತ್ಸಾಹ ನೀಡುತ್ತಿರುವ ಬಗ್ಗೆ ಕನ್ನಡಪ್ರಭ ಸೆ.1ರಂದು ‘ಆನ್‌ಲೈನ್‌ ತರಗತಿಗೆ ಬ್ಯಾಟರಿ ಹಿಡಿದು ಗುಡ್ಡವೇರುವ ಅಕ್ಕ-ತಮ್ಮ!’ ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು ಗಮನ ಸೆಳೆದಿತ್ತು. ಇದೀಗ ಈ ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ಇಸ್ಫೋಸಿಸ್‌ ಸಂಸ್ಥೆ ಲ್ಯಾಪ್‌ಟಾಪ್‌ ನೀಡಿದೆ.

ಆನ್‌ಲೈನ್‌ ತರಗತಿಗಾಗಿ ನನ್ನ ತಂದೆ ಪಡುತ್ತಿರುವ ಸಂಕಷ್ಟಗಳನ್ನು ಕನ್ನಡಪ್ರಭ ಪತ್ರಿಕೆ ವರದಿ ಮಾಡಿದೆ. ಇದಕ್ಕಾಗಿ ಕನ್ನಡಪ್ರಭಕ್ಕೆ ಕೋಟಿ ನಮನಗಳು. ಈಗ ನನ್ನ ಶಿಕ್ಷಣಕ್ಕೆ ಸಮಸ್ಯೆಯಾಗದಂತೆ ಇಸ್ಫೋಸಿಸ್‌ನ ಸುಧಾಮೂರ್ತಿ ಮೇಡಂ ನಮಗೆ ಲ್ಯಾಪ್‌ಟಾಪ್‌ ಹಾಗೂ ಇನ್ನಿತರ ಪರಿಕರಗಳನ್ನು ನೀಡಿದ್ದಾರೆ. ಅವರಿಗೂ ಹಾಗೂ ನನಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

- ಭೂಮಿಕಾ, ವಿದ್ಯಾರ್ಥಿನಿ

ನವೋದಯ ವಿದ್ಯಾಲಯದಲ್ಲಿ ಓದುತ್ತಿರುವ ಭೂಮಿಕಾ ಹಾಗೂ ಭರತ್‌ ಪ್ರತಿಭಾವಂತ ವಿದ್ಯಾರ್ಥಿಗಳು. ಆನ್‌ಲೈನ್‌ ಕಲಿಕೆಗಾಗಿ ಇವರು ಪಡುತ್ತಿರುವ ಪಾಡಿನ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದ ಬಳಿಕ ಇಸ್ಫೋಸಿಸ್‌ನವರು ನೆರವಾಗಿದ್ದಾರೆ. ಇದು ಈ ವಿದ್ಯಾರ್ಥಿಗಳ ಕಲಿಕೆಗೆ ತುಂಬಾ ಸಹಾಯವಾಗಲಿದೆ.

- ಗಣೇಶ್‌, ಸಹಶಿಕ್ಷಕರು ಸ.ಹಿ.ಪ್ರಾ ಶಾಲೆ ಹೊಸೂರು