ಕೊರೋನಾ ಬಗ್ಗೆ ಪಾಠ ಮಾಡುತ್ತಿದ್ದಂತೆ ವಾಂತಿ, ಕೆಮ್ಮಿನಿಂದ ಬಳಲಿದ ವಿದ್ಯಾರ್ಥಿಗಳು
ಕೊರೋನ ವೈರಸ್ ಬಗ್ಗೆ ಶಾಲೆಯ ಸಹ ಶಿಕ್ಷಕ ಪ್ರೇಮ್ಕುಮಾರ್ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದ ನಂತರ ವಾಂತಿ ಮತ್ತು ಕೆಮ್ಮಿನಿಂದ ವಿದ್ಯಾರ್ಥಿಗಳು ಬಳಲಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಹನೂರು [ಮಾ.06]: ಮಾರಣಾಂತಿಕ ಕಾಯಿಲೆ ಕೊರೋನ ವೈರಸ್ ಬಗ್ಗೆ ಶಾಲೆಯ ಸಹ ಶಿಕ್ಷಕ ಪ್ರೇಮ್ಕುಮಾರ್ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದ ನಂತರ ವಾಂತಿ ಮತ್ತು ಕೆಮ್ಮಿನಿಂದ ವಿದ್ಯಾರ್ಥಿಗಳು ಬಳಲಿರುವ ಘಟನೆ ಮಲೆಮಾದೇಶ್ವರ ಬೆಟ್ಟಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಸಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದೆ.
ಜಿಲ್ಲೆಯ ಹನೂರು ಶೈಕ್ಷಣಿಕ ವಲಯದ ಗೊರಸಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಶಾಲೆಯ ಇಪ್ಪತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ತದನಂತರ ಎಲ್ಲ ವಿದ್ಯಾರ್ಥಿಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಪ್ರಥಮ ಚಿಕಿತ್ಸೆ ನೀಡಿ ಮತ್ತೆ ಶಾಲೆಗೆ ಕಳುಹಿಸಿಕೊಟ್ಟಿದ್ದಾರೆ.
ಅಮೃತಬಳ್ಳಿ, ತುಳಸಿ ಕಷಾಯ ಮಾರಕ ಕೊರೋನಾ ಗುಣಪಡಿಸುವ ಔಷಧ'...
ಗೊರಸಾಣಿ ಶಾಲೆಯಲ್ಲಿ ಕೊರೋನ ವೈರಸ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ರಜೆ ಸಿಗುತ್ತದೆ ಎಂಬ ಉದ್ದೇಶದಿಂದ ಕೆಮ್ಮು ವಾಂತಿ ಮಾಡಿಕೊಂಡಿದ್ದಾರೆ. ಮ.ಬೆಟ್ಟಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಎಲ್ಲ ರೀತಿಯ ಪರೀಕ್ಷೆಯನ್ನು ಮಾಡಿದ ನಂತರ ಯಾವುದೇ ರೋಗ ಲಕ್ಷಣಗಳು ಇಲ್ಲ ಎಂಬುದು ತಿಳಿದುಬಂದಿದೆ.
-ಟಿ.ಆರ್ ಸ್ವಾಮಿ, ಬಿಇಒ, ಹನೂರು ಶೈಕ್ಷಣಿಕ ವಲಯ