ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡಿ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಹೊಸಕೋಟೆಯ ಲಾಡ್ಜ್‌ನಲ್ಲಿ ನಡೆದಿದೆ. 

ಹೊಸಕೋಟೆ [ಆ.30]: ಯುವಕನೋರ್ವ ಟಿಕ್‌ಟಾಕ್‌ನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಹೊಸಕೋಟೆಯ ಲಾಡ್ಜ್‌ನಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಮೂಲತಃ ಕೆಂಗೇರಿ ಉಪನಗರದ, ಹಾಲಿ ತಾಲೂಕಿನ ಕಂಬಳೀಪುರದ ನಿವಾಸಿ ಕಿರಣ್‌ (22) ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೂಲಿಬೆಲೆಯ ಪ್ರಥಮ ದರ್ಜೆ ಕಾಲೇಜಿನಲ್ಲಿ 5ನೇ ಸೆಮಿಸ್ಟರ್‌ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ಬುಧವಾರ ಸಂಜೆ ಲಾಡ್ಜ್‌ನಲ್ಲಿ ಬಾಡಿಗೆಗೆ ರೂಂ ಪಡೆದಿದ್ದ. 

ಗುರುವಾರ ಬೆಳಗ್ಗೆ 9ರ ಸುಮಾರಿಗೆ ರೂಂ ಸರ್ವೀಸ್ ನವರು ಬಾಗಿಲು ತಟ್ಟಿದರೂ, ತೆರೆಯದಿದ್ದಾಗ ಸಂಶಯಗೊಂಡು ಪೊಲೀಸರಿಗೆ ವಿಷಯ ತಿಳಿಸಿದ್ದರು. ಬಾಗಿಲು ಒಡೆದು ಒಳಗಡೆ ಪ್ರವೇಶಿಸಿದಾಗ ಚಾವಣಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಈ ದೃಶ್ಯವನ್ನು ಆತನ ಮೊಬೈಲ್‌ನಲ್ಲಿಯೇ ಚಿತ್ರೀಕರಣ ಸಹ ಮಾಡಿದ್ದಾನೆ.

ಆತ್ಮಹತ್ಯೆಗೆ ಮುನ್ನ ಟಿಕ್‌ಟಾಕ್‌ನಲ್ಲಿ ‘ನಾನು ಒಬ್ಬನೇ ಮಗ. ಇದು ನನ್ನ ಕೊನೆಯ ಸಂದೇಶ. ನನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ’ ಎಂದು ಸ್ನೇಹಿತರಿಗೆ ತಿಳಿಸಿದ್ದಾನೆ. ಕಿರಣ್‌ ತಂದೆಯ ನಿಧನದ ನಂತರ ತಾಯಿಯೊಂದಿಗೆ ಕಂಬಳೀಪುರದ ತವರು ಮನೆಯಲ್ಲಿ ವಾಸಿಸುತ್ತಿದ್ದ. ಬಹುಶಃ ಆರ್ಥಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿಬಹುದು ಎಂದು ಶಂಕಿಸಲಾಗಿದೆ. ಮೃತನ ತಾತ ಮುನಿಯಪ್ಪ ನೀಡಿರುವ ದೂರಿನನ್ವಯ ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.