ವಾರದೊಳಗಾಗಿ ಹುಲಿಹೈದರ್‌ ಗ್ರಾಮ ಸಹಜ ಸ್ಥಿತಿಗೆ ತರಲು ವಿವಿಧ ಇಲಾಖೆಯಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಕಟ್ಟುನಿಟ್ಟಾಗಿ ಆದೇಶಿಸಿದರು

ಕನಕಗಿರಿ (ಆ.24): ವಾರದೊಳಗಾಗಿ ಹುಲಿಹೈದರ್‌ ಗ್ರಾಮ ಸಹಜ ಸ್ಥಿತಿಗೆ ತರಲು ವಿವಿಧ ಇಲಾಖೆಯಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮವಹಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಸುಂದರೇಶಬಾಬು ಕಟ್ಟುನಿಟ್ಟಾಗಿ ಆದೇಶಿಸಿದರು. ಹುಲಿಹೈದರ್‌ ಗ್ರಾಮಕ್ಕೆ ದಿಢೀರ್‌ ಭೇಟಿ ನೀಡಿ ತಾಲೂಕು ಮಟ್ಟದ ಅಧಿಕಾರಿಗಳ ಹಾಗೂ ಸಿಬ್ಬಂದಿ ಜತೆ ಸಭೆ ನಡೆಸಿದರು. ಆ. 11ರಂದು ನಡೆದ ಘರ್ಷಣೆ ಹಿನ್ನೆಲೆ ಜನ ಭಯಭೀತರಾಗಿದ್ದು, ಬಹುತೇಕ ಪುರುಷರು ಊರು ತೊರೆದಿದ್ದಾರೆ. ಮಹಿಳೆಯರು ಗ್ರಾಮದಲ್ಲಿದ್ದು, ಅವರಿಗೆ ಧೈರ್ಯ ತುಂಬ ಬೇಕಾಗಿದೆ. ಈ ದಿಸೆಯಲ್ಲಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಗ್ರಾಮದ ಮನೆ- ಮನೆಗಳಿಗೆ ತೆರಳಿ ಮಕ್ಕಳನ್ನು ಕರೆ ತರುವ ಕೆಲಸ ಮಾಡಬೇಕು. ಉದ್ಯೋಗ ಚೀಟಿ ಹೊಂದಿದ ಫಲಾನುಭವಿಗಳಿಗೆ ನರೇಗಾದಡಿ ಕೆಲಸ ನೀಡುವುದು, ಗ್ರಾಮದ ಮುಖ್ಯ ಸ್ಥಳಗಳಲ್ಲಿ ಜಾಗೃತಿ ಕಾರ್ಯಕ್ರಮಗಳ ಆಯೋಜನೆ, ಗ್ರಾಮಸ್ಥರಿಗೆ ಒಂದು ದಿನದ ಆರೋಗ್ಯ ತಪಾಷಣೆ ಶಿಬಿರ ಹಮ್ಮಿಕೊಳ್ಳುವಂತೆ ಗ್ರಾಪಂ ಪಿಡಿಒಗೆ ಸೂಚಿಸಿದರು.

Add Asianetnews Kannada as a Preferred SourcegooglePreferred

ಕೊಪ್ಪಳದಲ್ಲಿ ವಿದ್ಯುತ್ ಅವಘಡಕ್ಕೆ 6 ವರ್ಷದ ಬಾಲಕ ಸಾವು

ಒಟ್ಟಾರೆ ಇದೇ ತಿಂಗಳೊಳಗಾಗಿ ಹುಲಿಹೈದರ್‌ ಗ್ರಾಮ ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯವರಿಂದ ಎಲ್ಲ ರೀತಿಯ ಪ್ರಯತ್ನ ನಡೆಯಬೇಕು ಎಂದು ಸೂಚಿಸಿದರು. ಅಂಗನವಾಡಿ ಹಾಗೂ ಶಾಲೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಪರಿಶೀಲಿಸಿ ಕಾರ್ಯಕರ್ತೆಯರು ಮತ್ತು ಶಿಕ್ಷಕರಿಂದ ಮಾಹಿತಿ ಪಡೆದುಕೊಂಡರು. ಈ ಮೊದಲು ಇದ್ದಂತೆ ಮಕ್ಕಳ ಸಂಖ್ಯೆಯನ್ನು ದಿನದಿಂದ ದಿನಕ್ಕೆ ಹೆಚ್ಚಿಸಲು ಪ್ರಯತ್ನಿಸಬೇಕು. ಬಿಸಿಯೂಟ, ಕುಡಿಯುವ ನೀರಿನ ಬಗ್ಗೆ ಜಾಗೃತಿ ವಹಿಸಬೇಕು. ಗ್ರಾಮ ತೊರೆದ ಪಾಲಕರಿಗೆ ಸಂಪರ್ಕಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೊಲಿಸುವಂತೆ ತಿಳಿಸಿದರು.

ಮೃತ ಕುಟುಂಬಗಳಿಗೆ ನೌಕರಿ: ಘಟನೆಯಲ್ಲಿ ಮೃತಪಟ್ಟಯಂಕಪ್ಪನ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲು ಅವಕಾಶವಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕುಟುಂಬಸ್ಥರನ್ನು ಭೇಟಿ ಮಾಡಿ ದಾಖಲೆ ಸಂಗ್ರಹಿಸುತ್ತಿದ್ದಾರೆ. ಇತ್ತ ಮತ್ತೊಬ್ಬ ಮೃತ ವ್ಯಕ್ತಿ ಪಾಷಾವಲಿ ಪತ್ನಿಗೆ ಹೊರಗುತ್ತಿಗೆ ಅಡಿಯಲ್ಲಿ ನೌಕರಿ ಹಾಗೂ ಸಹೋದರಿಯ ವ್ಯಾಸಂಗಕ್ಕಾಗಿ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ದಾಖಲಿಸಲಾಗಿದೆ. ನೇರ ಸಾಲ, ಅರಿವು ಸೇರಿದಂತೆ ಮುಂತಾದ ಯೋಜನೆಗಳ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ಸುರೇಶ ತಿಳಿಸಿದರು.

Koppal: Huli Haider Case: ಹಲವರ ಮೇಲೆ ಸುಳ್ಳು ಕೇಸ್‌: ಆರೋಪ

ಈ ವೇಳೆ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಚಿದಾನಂದ, ತಹಸೀಲ್ದಾರ್‌ ಧನಂಜಯ ಮಾಲಗಿತ್ತಿ, ಗ್ರೇಡ್‌-2 ತಹಸೀಲ್ದಾರ್‌ ಮಹಾಂತಗೌಡ, ತಾಪಂ ಇಒ ಚಂದ್ರಶೇಖರ ಕಂದಕೂರು, ಸಿಡಿಪಿಒ ಶ್ವೇತಾ ಸಂಜೀವಪ್ಪ, ಪಿಡಿಒ ರವೀಂದ್ರ ಕುಲಕರ್ಣಿ, ಲೆಕ್ಕಾಧಿಕಾರಿಗಳಾದ ಹಾಲೇಶ, ಪ್ರವೀಣ್‌ ಜೋನ್ಸ್‌, ಸಿಆರ್‌ಪಿ ಶಿವಪ್ಪ ಹೆಳವರ ಇದ್ದರು.