ಸ್ಟೆನ್ಸಿಲ್ ಆರ್ಟ್ನಲ್ಲಿ 45 ನಿಮಿಷದಲ್ಲಿ ರೆಡಿಯಾಯ್ತು ಪಟೇಲ್ ಭಾವಚಿತ್ರ
ಪೇಪರ್ ಕಟ್ಟಿಂಗ್ (ಸ್ಟೆನ್ಸಿಲ್ ಆರ್ಟ್)ನಲ್ಲಿ ಈಗಾಗಲೇ ವಿಶ್ವ ದಾಖಲೆಯನ್ನು ಮಾಡಿರುವ ನೆಲ್ಯಾಡಿಯ ವಿದ್ಯಾರ್ಥಿ ಪರೀಕ್ಷಿತ್, ಇದೀಗ ತಾನು ಕಲಿತ ವಿದ್ಯಾಸಂಸ್ಥೆಯ ಮಕ್ಕಳು ಮತ್ತು ತನ್ನ ಸಾಧನೆಗೆ ಪ್ರೇರಣೆಯಾದ ಸಹಪಾಠಿ ಚಂದನ್ ಸುರೇಶ್ ಅವರೊಂದಿಗೆ ಸೇರಿ ದೊಡ್ಡ ಅಳತೆಯ ಪೇಪರ್ನಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಭಾವಚಿತ್ರವನ್ನು ಕೇವಲ 45 ನಿಮಿಷದಲ್ಲಿ ಬಿಡಿಸಿದ್ದಾರೆ.
ಮಂಗಳೂರು(ಫೆ.01): ಪೇಪರ್ ಕಟ್ಟಿಂಗ್ (ಸ್ಟೆನ್ಸಿಲ್ ಆರ್ಟ್)ನಲ್ಲಿ ಈಗಾಗಲೇ ವಿಶ್ವ ದಾಖಲೆಯನ್ನು ಮಾಡಿರುವ ನೆಲ್ಯಾಡಿಯ ವಿದ್ಯಾರ್ಥಿ ಪರೀಕ್ಷಿತ್, ಇದೀಗ ತಾನು ಕಲಿತ ವಿದ್ಯಾಸಂಸ್ಥೆಯ ಮಕ್ಕಳು ಮತ್ತು ತನ್ನ ಸಾಧನೆಗೆ ಪ್ರೇರಣೆಯಾದ ಸಹಪಾಠಿ ಚಂದನ್ ಸುರೇಶ್ ಅವರೊಂದಿಗೆ ಸೇರಿ ದೊಡ್ಡ ಅಳತೆಯ ಪೇಪರ್ನಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಭಾವಚಿತ್ರವನ್ನು ಕೇವಲ 45 ನಿಮಿಷದಲ್ಲಿ ಬಿಡಿಸಿದ್ದಾರೆ.
ಈ ಮೂಲಕ ಲಿಮ್ಕಾ, ಗಿನ್ನೆಸ್, ಇಂಡಿಯಾ ಬುಕ್ ಆಫ್ ದ ರೆಕಾರ್ಡ್, ವಲ್ಡ್ರ್ ರೆಕಾರ್ಡ್, ಏಷಿಯಾ ಬುಕ್ ಆಫ್ ದ ರೆಕಾರ್ಡ್ ಮುಂತಾದ ಐದು ಅಂತಾರಾಷ್ಟ್ರೀಯ ದಾಖಲೆಗೆ ಸ್ಪರ್ಧಿಸುವ ವಿಶಿಷ್ಟಕಾರ್ಯಕ್ರಮವು ಉಪ್ಪಿನಂಗಡಿ ನೆಲ್ಯಾಡಿಯ ಜ್ಞಾನೋದಯ ಬೆಥನಿ ವಿದ್ಯಾ ಸಂಸ್ಥೆಯಲ್ಲಿ ಗುರುವಾರದಂದು ನಡೆಯಿತು. ಈ ಐತಿಹಾಸಿಕ ದಾಖಲಾರ್ಹ ಕಾರ್ಯಕ್ರವನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಿದ್ದಾರೆ.
ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ. ವರ್ಗೀಸ್ ಕೈಪುನಡ್ಕ ಓವೈಸಿ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಿತ್ ಮಾತನಾಡಿ, ತನ್ನ ಸಹಪಾಠಿಯಾದ ತುಮಕೂರು ಮೂಲದ ಚಂದನ್ ಸುರೇಶ್ ಅವರಿಂದ ಕಲಿತ ಈ ವಿದ್ಯೆಯಲ್ಲಿ ಈಗಾಗಲೇ ಪ್ರಧಾನಿ ಮೋದಿಯವರ ಭಾವಚಿತ್ರವನ್ನು 3 ನಿಮಿಷ 12 ಸೆಕೆಂಡುಗಳಲ್ಲಿ ಬಿಡಿಸಿ ಎಕ್ಸ್ಕ್ಲ್ಯೂಸಿವ್ ವಲ್ಡ್ರ್ ರೆಕಾರ್ಡ್ ದಾಖಲಾಗಿದೆ. ಇದೀಗ ತನ್ನ ಸಹಪಾಠಿಯ ಜೊತೆಗೆ ತಾನು ಬಾಲ್ಯದಲ್ಲಿ ಕಲಿತ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳನ್ನೂ ಈ ವಿಶ್ವದಾಖಲೆಯ ಸಾಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲಾಗಿದೆ ಎಂದಿದ್ದಾರೆ.
ಮುಖ್ಯ ಅತಿಥಿಗಳಾಗಿ ನೆಲ್ಯಾಡಿ ಕ್ಷೇತ್ರದ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಸದಸ್ಯೆ ಉಷಾ ಅಂಚನ್, ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಗಂಗಾಧರ ಶೆಟ್ಟಿಹೊಸಮನೆ, ನೆಲ್ಯಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಆನಂದ ಅಜಿಲ, ಮಂಗಳೂರು ಕಂಟ್ರೋಲ್ ರೂಂನ ಸಹಾಯಕ ಉಪ ನಿರೀಕ್ಷಕ ರುಕ್ಮಯ ಜೆ., ಚಂದನ್ ಸುರೇಶ್ ತುಮಕೂರು ಉಪಸ್ಥಿತರಿದ್ದರು. ಫಾ. ಮಾಥ್ಯೂ ಪ್ರಫುಲ್ ಸ್ವಾಗತಿಸಿದರು. ಪರೀಕ್ಷಿತ್ ವಂದಿಸಿದರು. ಜೋಸ್ ಪ್ರಕಾಶ್ ನಿರೂಪಿಸಿದರು.