ಅಪಘಾತದಿಂದ ಗಾಯಗೊಂಡಿದ್ದರೂ, ಕೋಲಾರದ ವಿದ್ಯಾರ್ಥಿನಿ ಕುಸುಮಾ ಆ್ಯಂಬುಲೆನ್ಸ್ನಲ್ಲಿ ಬಂದು ಸ್ಟ್ರೆಚರ್ನಲ್ಲಿ ಮಲಗಿಯೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಳು. ಇದೀಗ ಆಕೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣಳಾಗಿದ್ದು, ಚಿಕಿತ್ಸೆ ಪಡೆಯುತ್ತಲೇ ಅನೇಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದ್ದಾಳೆ.
ಕೋಲಾರ (ಏ.24): ಆ್ಯಂಬುಲೆನ್ಸ್ ಮೂಲಕ ಬಂದು ಸ್ಟ್ರೆಚರ್ನಲ್ಲಿಯೇ ಮಲಗಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ಚಿನ್ನನಾಗಹಳ್ಳಿಯ ವಿದ್ಯಾರ್ಥಿನಿ ಕುಸುಮಾ ಫಸ್ಟ್ಕ್ಲಾಸ್ನಲ್ಲಿ ಪಾಸ್ ಆಗಿದ್ದಾಳೆ. ಕುಸುಮಾ ಅಪಘಾತವಾಗಿ ಗಾಯಗೊಂಡಿದ್ದರೂ ಛಲ ಬಿಡದೆ ಶಿಕ್ಷಣ ಇಲಾಖೆ ಹಾಗೂ ತಾಯಿಯ ನೆರವಿನೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಆ್ಯಂಬುಲೆನ್ಸ್ ಬಂದು ಸ್ಟ್ರೆಚರ್ನಲ್ಲಿ ಮಲಗಿ ಪರೀಕ್ಷೆ ಬರೆದಿದ್ದಳು. ಇದೀಗ ಕನ್ನಡದಲ್ಲಿ-೬೨, ಇಂಗ್ಲೀಷ್ನಲ್ಲಿ-೭೨, ಹಿಂದಿ-೬೩, ಗಣಿತ-೬೭, ವಿಜ್ಞಾನ-೫೪, ಸಮಾಜ-೫೬ ಅಂಕ ಪಡೆದು ಅನಾರೋಗ್ಯ ಕಾರಣದಿಂದ ಪರೀಕ್ಷೆ ತಪ್ಪಿಸುವ ಅದೇಷ್ಟೊ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾಳೆ. ಸದ್ಯ ಕುಸುಮಾ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಕಳೆದ 1 ವಾರದಿಂದ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾಳೆ.
ಕುಸುಮಾ ಪರೀಕ್ಷೆ ಬರೆಯಲು ಕೋಲಾರದ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸೇರಿ ಸಾಕಷ್ಟು ಜನರು ನೆರವಾಗಿದ್ದರು. ಅಲ್ಲದೆ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಹ ಮನೆಗೆ ಭೇಟಿ ನೀಡಿ ನೆರವಾಗಿ ಧೈರ್ಯ ತುಂಬಿದ್ದರು. ಸದ್ಯ ಆಸ್ಪತ್ರೆ ಚಿಕಿತ್ಸೆಗೆ ಸಹಕರಿಸಿರುವ ಸುರೇಶ್ ಕುಮಾರ್, ಸಿಎಂ ಪರಿಹಾರ ನಿಧಿಯಿಂದ ಹಣ ಕೊಡಿಸಿದ್ದಾರೆ.


