2-3 ದಿನಗಳಿಂದ ಸುರಿಯುತ್ತಿರೋ ಪುರ್ನವಸು ಅಬ್ಬರಕ್ಕೆ ಶೃಂಗೇರಿ ತಾಲೂಕು ಅಕ್ಷರಶಃ ಕಂಗಾಲಾಗಿ ಹೋಗಿದೆ. ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಕಿರಿಯ ಜಗದ್ಗುರುಗಳು ತುಂಗೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಚಿಕ್ಕಮಗಳೂರು(ಜು.17):  ಮಲೆನಾಡಲ್ಲಿ ಮಳೆ ಅಬ್ಬರಕ್ಕೆ ನಾನಾ ಅವಾಂತರಗಳು ಸೃಷ್ಟಿಯಾಗುತ್ತಿವೆ. ಹೀಗಾಗಿ ತುಂಗೆಯ ಅಬ್ಬರ ಶಾಂತವಾಗಲೆಂದು ತುಂಗಾ ನದಿಗೆ ಶೃಂಗೇರಿ ಮಠದ ಕಿರಿಯ ಶ್ರೀಗಳಾದ ವಿಧುಶೇಖರ ಶ್ರೀಗಳು ಪೂಜೆ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ತುಂಗೆಯ ಅಬ್ಬರಕ್ಕೆ ಇಡೀ ಶೃಂಗೇರಿ ತಾಲೂಕು ಕಂಗಾಲಾಗಿದೆ. ತುಂಗಾ ನದಿಯು ಮೈದುಂಬಿ ಹರಿಯುತ್ತಿದ್ದು, ಮಠದ ಗಾಂಧಿ ಮೈದಾನ, ಸಂಧ್ಯಾವಂದನೆ ಮಂಟಪ, ಗುರುಗಳ ಸ್ನಾನಘಟ್ಟ, ನರಸಿಂಹವನ ಎಲ್ಲವೂ ಜಾಲವೃತವಾಗಿವೆ. ಮಠದ ಯಾತ್ರಿನಿವಾಸ, ಶೌಚಾಲಯ, ಊಟದ ಹಾಲ್, ಕಪ್ಪೆಶಂಕರನಾರಾಯಣ ದೇಗುಲವೂ ಜಲಾವೃತವಾಗಿವೆ. 2-3 ದಿನಗಳಿಂದ ಸುರಿಯುತ್ತಿರೋ ಪುರ್ನವಸು ಅಬ್ಬರಕ್ಕೆ ಶೃಂಗೇರಿ ತಾಲೂಕು ಅಕ್ಷರಶಃ ಕಂಗಾಲಾಗಿ ಹೋಗಿದೆ. ತುಂಗಾ ನದಿಗೆ ಕಿರಿಯ ಜಗದ್ಗುರುಗಳಾದ ವಿಧುಶೇಖರ ಸ್ವಾಮಿಗಲು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಲೆನಾಡ ಮಳೆಗೆ ತುಂಗಾ-ಭದ್ರಾ-ಹೇಮಾವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. 

ಮಲೆನಾಡಿನಲ್ಲಿ ಮಳೆಯಿಂದ ಒಂದಡೆ ಅನಾಹುತ.. ಮತ್ತೊಂದೆಡೆ ಪ್ರಕೃತಿ ಸೊಬಗು ಅನಾವರಣ!

111.90 ಅಡಿಗೆ ತಲುಪಿದ ಕೆಆರ್ ಎಸ್ ಅಣೆಕಟ್ಟೆ
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕೆಆರ್ ಎಸ್ ಅಣೆಕಟ್ಟೆ ನೀರಿನ ಮಟ್ಟ ಬುಧವಾರ ರಾತ್ರಿ ವೇಳೆಗೆ 111.90 ಅಡಿಗೆ ತಲುಪಿದೆ.ಕಳೆದ ಮೂರು ದಿನಗಳಿಂದ ಕಾವೇರಿ ಉಗಮ ಸ್ಥಾನವಾದ ಕೊಡಗು, ಭಾಗಮಂಡಲ ಸೇರಿ ಸುತ್ತಮುತ್ತಲ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕಾವೇರಿ, ಹೇಮಾವತಿ, ಲೋಕಪಾವನಿ ನದಿಗಳೆಲ್ಲವೂ ಮೈದುಂಬಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಅಣೆಕಟ್ಟೆಗೆ 35 ಸಾವಿರ ಕ್ಯುಸೆಕ್ ಗೂ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಎರಡು ದಿನಗಳಲ್ಲೇ ಜಲಾಶಯದಲ್ಲಿ 5 ಅಡಿಗೂ ಹೆಚ್ಚಿನ ನೀರು ಸಂಗ್ರಹವಾಗಿದೆ.

ಗುರುವಾರ ಬೆಳಗ್ಗೆ ವೇಳೆಗೆ ಜಲಾಶಯ 113 ಅಡಿ ದಾಟುವ ಸಾಧ್ಯತೆ ಇದೆ. 124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ ಬುಧವಾರ ರಾತ್ರಿ ವೇಳೆಗೆ 111.90 ಅಡಿ ಸಂಗ್ರಹವಾಗಿದ್ದು, ಜಲಾಶಯಕ್ಕೆ 35,534 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರು ಹರಿದುಬರುತ್ತಿದೆ. 2443 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. 33.674 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಎರಡು ದಿನಗಳಲ್ಲಿ 5 ಟಿಎಂಸಿಗೂ ಹೆಚ್ಚಿನ ನೀರು ಸಂಗ್ರಹವಾಗಿದೆ. ಜಲಾಶಯ ತುಂಬಲು ಇನ್ನು 12 ಅಡಿಯಷ್ಟು ನೀರು ಬೇಕಿದ್ದು, ಇದೇ ರೀತಿ ಮಳೆ ಸುರಿದರೆ ಕೆಲವೇ ದಿನಗಳಲ್ಲಿ ಕನ್ನಂಬಾಡಿ ಅಣೆಕಟ್ಟೆ ತುಂಬುವ ವಿಶ್ವಾಸ ರೈತರಲ್ಲಿ ಮೂಡಿದೆ. ಈ ಬಾರಿ ನಿರೀಕ್ಷೆಯಂತೆ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಬೆಳೆಗಳಿಗೆ ನೀರು ಸಿಗುವ ನಿರೀಕ್ಷೆಗಳು ಹೆಚ್ಚಾಗುತ್ತಿವೆ.

ಬೃಹತ್‌ ಗುಡ್ಡ ಕುಸಿತ: ಬೇಗ ಮನೆಗೆ ಬಾ ಮಗ ಎಂದ ತಾಯಿ, ಮನೆಗೆ ಬಂದ ಮಗನಿಗೆ ಸಿಕ್ಕಿದ್ದು ತಾಯಿಯ ಸೀರೆ ಮಾತ್ರ!

ತುಂಬಿ ಹರಿಯುತ್ತಿರುವ ವರದಾ-ದಂಡಾವತಿ:
ಸೊರಬ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಪ್ರಮುಖ ನದಿಗಳಾದ ವರದಾ ಮತ್ತು ದಂಡಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಕೃಷಿ ಚಟುವಟಿಕೆ ಚುರುಕುಗೊಂಡ ಬೆನ್ನಲ್ಲೆ ನದಿ ಪಾತ್ರದ ಜಮೀನುಗಳ ರೈತರಿಗೆ ಪ್ರವಾಹದ ಭೀತಿ ಎದುರಾಗಿದೆ.

ಜೂನ್ ಎರಡನೇ ವಾರ ಆರಂಭವಾದ ಆರಿದ್ರಾ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಆತಂಕದ ಕ್ಷಣಗಳನ್ನು ಎದುರಿಸುವಂತಾಗಿತ್ತು. ಆದರೆ ಜು.5 ರಿಂದ ಪ್ರಾರಂಭವಾದ ಪುನರ್ವಸು ಮಳೆ ತಾಲೂಕಿನಾದ್ಯಂತ ಉತ್ತಮವಾಗಿ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ನೆರವಾಗಿದೆ. ಆದರೆ ದಂಡಾವತಿ, ವರದಾ ನದಿಪಾತ್ರಗಳ ಗ್ರಾಮಗಳು ಮತ್ತು ಜಮೀನು ಮುಳುಗಡೆಯಾಗುವ ಸಂಭವವಿದೆ.

ತಾಲೂಕಿನ ಚಂದ್ರಗುತ್ತಿ, ಗುಡವಿ, ಜಡೆ, ಉಳವಿ, ಕುಪ್ಪಗಡ್ಡೆ, ಆನವಟ್ಟಿ ಸೇರಿದಂತೆ ಅನೇಕ ಭಾಗಗಳಲ್ಲಿ ಹಳ್ಳ ಕೊಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಬಹುತೇಕ ಎಲ್ಲಾ ಗ್ರಾಮದ ಕೆರೆಗಳು ಕೋಡಿ ಬಿದ್ದಿವೆ. ಸಾಗರ, ಹೊಸನಗರ ಸೇರಿದಂತೆ ವಿವಿದೆಡೆ ಮಳೆಯಾಗುತ್ತಿರುವ ಪರಿಣಾಮ ವರದಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.