Asianet Suvarna News Asianet Suvarna News

ಹುಳಿಮಾವು ಕೆರೆ ದುರಂತ: 23 ಕುಟುಂಬಕ್ಕೆ ಶೀಘ್ರ ಪರಿಹಾರ

ಹುಳಿಮಾವು ದುರಂತದ ಬಾಕಿ ಉಳಿದ 23 ಕುಟುಂಬಗಳಿಗೆ ಶೀಘ್ರದಲ್ಲಿಯೇ ಪರಿಹಾರ ವಿತರಣೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದಾರೆ.
 

Soon 23 hulimavu Victims Family Get Compensation
Author
Bengaluru, First Published Dec 11, 2019, 7:49 AM IST

ಬೆಂಗಳೂರು [ಡಿ.11]:  ಹುಳಿಮಾವು ಕೆರೆ ಕೋಡಿ ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಾಗಿದ್ದು, 374 ಕುಟುಂಬಗಳ ಪೈಕಿ 351 ಕುಟುಂಬಗಳಿಗೆ ತಲಾ .50 ಸಾವಿರ ಪರಿಹಾರ ನೀಡಲಾಗಿದೆ. ಬಾಕಿ ಉಳಿದ 23 ಕುಟುಂಬಗಳಿಗೆ ಶೀಘ್ರದಲ್ಲಿಯೇ ಪರಿಹಾರ ವಿತರಣೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಲೋಕಾಯುಕ್ತರಿಗೆ ಮಾಹಿತಿ ನೀಡಿದ್ದಾರೆ.

ಕೆರೆ ಕೋಡಿ ಒಡೆದ ಪ್ರಕರಣ ಸಂಬಂಧ ಕೈಗೊಂಡಿರುವ ಪರಿಹಾರ ಕುರಿತು ಮಂಗಳವಾರ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ್‌ ಶೆಟ್ಟಿಅವರು ವಿಚಾರಣೆ ನಡೆಸಿದರು. ಈ ವೇಳೆ ಬಿಬಿಎಂಪಿ ಅಧಿಕಾರಿಗಳು ತೊಂದರೆಗೊಳಗಾದ ಸಂತ್ರಸ್ತರಿಗೆ ಈವರೆಗೆ ನೀಡಿರುವ ಪರಿಹಾರ ಮತ್ತು ಕೆರೆ ಸಂರಕ್ಷಣೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಸಂತ್ರಸ್ತರಿಗೆ ಅಗತ್ಯ ನೆರವು ನೀಡಲಾಗಿದೆ. ಘಟನೆಯಲ್ಲಿ 374 ಕುಟುಂಬಗಳು ತೊಂದರೆಗೀಡಾಗಿವೆ. ಈ ಪೈಕಿ 351 ಕುಟುಂಬಗಳಿಗೆ ತಲಾ .50 ಸಾವಿರ ಪರಿಹಾರ ವಿತರಣೆ ಮಾಡಲಾಗಿದೆ. ಬಾಕಿ ಉಳಿದ 23 ಕುಟುಂಬಗಳಿಗೆ ಶೀಘ್ರದಲ್ಲಿಯೇ ಪರಿಹಾರ ವಿತರಣೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಲೋಕಾಯುಕ್ತರಿಗೆ ವಿವರಣೆ ನೀಡಿದರು.

ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಶಾಲಾ ಮಕ್ಕಳ ಪುಸ್ತಕ ಮತ್ತು ಸಮವಸ್ತ್ರಗಳನ್ನು ಒಂದು ವಾರದೊಳಗೆ ವಿತರಣೆ ಮಾಡಬೇಕು. ಘಟನೆಯಲ್ಲಿ ಅಂಕಪಟ್ಟಿ, ಚಾಲನಾ ಪರವಾನಗಿ, ಆಧಾರ್‌ಕಾರ್ಡ್‌ನಂತಹ ದಾಖಲೆಗಳು ಕಳೆದುಕೊಂಡವರಿಗೆ ಆದಷ್ಟುಬೇಗ ಒದಗಿಸಿಕೊಡಬೇಕು ಮತ್ತು 2020ರ ಜನವರಿ 10ರೊಳಗೆ ಬಾಕಿ ಇರುವ 23 ಕುಟುಂಬಗಳಿಗೆ ಪರಿಹಾರ ವಿತರಣೆ ಮಾಡಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹುಳಿಮಾವು ಕೆರೆಯ ಸಮರ್ಪಕವಾದ ಸರ್ವೆಯನ್ನು ಬಿಬಿಎಂಪಿ, ಜಲಮಂಡಳಿ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ ಸಮೀಕ್ಷೆ ನಡೆಸಿ ಎರಡು ವಾರದಲ್ಲಿ ವರದಿ ನೀಡಬೇಕು ಮತ್ತು ಒತ್ತುವರಿ ಮಾಡಿಕೊಂಡಿರುವ ಕುರಿತು ಸರಿಯಾದ ಮಾಹಿತಿ ಕಲೆ ಹಾಕಬೇಕು. ಈ ಸಂಬಂಧ ತಹಸೀಲ್ದಾರ್‌ ಅವರು ಸಹ ಎರಡು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಬಿಡಿಎ ಅಧಿಕಾರಿಗಳಿಂದಲೇ 17.33 ಎಕರೆ ಕೆರೆ ಭೂಮಿ ಒತ್ತುವರಿಯಾಗಿದ್ದು, ಈ ಪ್ರದೇಶದಲ್ಲಿ ಲೇಔಟ್‌ ಮತ್ತು ರಸ್ತೆ ನಿರ್ಮಿಸಲಾಗಿದೆ. ರಸ್ತೆ, ಶಾಲೆ ಮತ್ತು ಇತರೆ ಉದ್ದೇಶಗಳಿಗಾಗಿ ಭೂಮಿ ಸರ್ಕಾರದಿಂದ ಒತ್ತುವರಿಯಾಗಿದೆ. 30 ಗುಂಟೆ ಖಾಸಗಿಯವರಿಂದ ಒತ್ತುವರಿಯಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಹೀಗಾಗಿ ಸಮೀಕ್ಷೆ ನಡೆಸಿ ವರದಿ ನೀಡಬೇಕು ಎಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಅವರು ಈ ವೇಳೆ ಕೆರೆಗಳ ಸಂರಕ್ಷಣೆ ಸಂಬಂಧಿಸಿದಂತೆ ಅಧಿಕಾರಿಗಳು ಎರಡು ವರ್ಷ ಕಳೆದರೂ ಯಾವುದೇ ಕ್ರಮಕೈಗೊಳ್ಳದಿರುವುದು ಸಮಂಜಸವಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಿಡಿಎ ಸರ್ಕಾರದ ಸ್ವಾಧೀನದಲ್ಲಿದ್ದರೂ ಆ ಸಂಸ್ಥೆಯಿಂದಲೇ ಒತ್ತುವರಿಯಾಗಿದೆ. ಸಾರ್ವಜನಿಕ ಸ್ವತ್ತನ್ನು ಕಾಪಾಡುವುದು ಸರ್ಕಾರ ಮತ್ತು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕರ್ತವ್ಯ ಲೋಪ ಎಸಗುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ನಗರದಲ್ಲಿ ಕೆರೆಗಳ ಒತ್ತುವರಿಯಾಗಿರುವ ಕುರಿತು ಯುನೈಟೆಡ್‌ ಬೆಂಗಳೂರು ತಂಡವು ಲೋಕಾಯುಕ್ತರಿಗೆ ದೂರು ನೀಡಲಾಗಿದ್ದು, ಈ ದೂರಿನಲ್ಲಿ ಹುಳಿಮಾವು ಕೆರೆಯ ಒತ್ತುವರಿ ಕುರಿತ ಅಂಶವು ಸಹ ಸೇರಿದೆ. ಹುಳಿಮಾವು ಕೆರೆ ಒತ್ತುವರಿ ಕುರಿತು ಈಗಾಗಲೇ ಲೋಕಾಯುಕ್ತರು ವಿಚಾರಣೆ ನಡೆಸುತ್ತಿದ್ದು, ಕೆರೆಯ ಕೋಡಿ ಒಡೆದ ಹಿನ್ನೆಲೆಯಲ್ಲಿ ಆ ಘಟನೆಗೆ ಆದ್ಯತೆ ನೀಡಿ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ.

Follow Us:
Download App:
  • android
  • ios