ಸನಾತನ ಧರ್ಮದ ಹಾದಿಯಲ್ಲಿ ಎಲ್ಲರೂ ಸಾಗಬೇಕು. ಸನಾತನ ಧರ್ಮದಲ್ಲಿ ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಡಾ.ಮೋಹನ ಭಾಗವತ್‌ ಹೇಳಿದರು.

ಬೆಳಗಾವಿ (ಆ.02): ಪ್ರತಿಯೊಬ್ಬರೂ ತಮ್ಮ ಅಂತರಂಗದಲ್ಲಿನ ಸತ್ಯ ಗುರುತಿಸಬೇಕು. ಆಗ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಬದುಕಿನಲ್ಲಿ ಯಶಸ್ಸು ಸಾಧಿಸಲು ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಬೇಕು. ಸನಾತನ ಧರ್ಮದ ಹಾದಿಯಲ್ಲಿ ಎಲ್ಲರೂ ಸಾಗಬೇಕು. ಸನಾತನ ಧರ್ಮದಲ್ಲಿ ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರ ಸಂಘಚಾಲಕ ಡಾ.ಮೋಹನ ಭಾಗವತ್‌ ಹೇಳಿದರು.

Add Asianetnews Kannada as a Preferred SourcegooglePreferred

ಹಿಂದವಾಡಿಯ ಅಕಾಡೆಮಿ ಆಫ್‌ ಕಂಪೇರೇಟಿವ್‌ ಫಿಲಾಸಫಿ ಆ್ಯಂಡ್‌ ರಿಲಿಜನ್‌ (ಎಸಿಪಿಆರ್‌)ನ ಗುರುದೇವ ರಾನಡೆ ಮಂದಿರದ ಶತಮಾನೋತ್ಸವ ವರ್ಷಾಚರಣೆಗೆ ಚಾಲನೆ ಹಾಗೂ ಗುರುದೇವ ರಾನಡೆ ರಚಿಸಿದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಪ್ರದಾಯ ಸರಿಯಾದ ಮಾರ್ಗದಲ್ಲಿ ನಮ್ಮನ್ನು ಕೊಂಡೊಯ್ಯುತ್ತದೆ. ಇದು ಸಾಧನೆಯ ಪಥವೂ ಹೌದು ಎಂದು ಹೇಳಿದರು.ಮಹಾತ್ಮರ ಪ್ರವಚನಗಳು ನಮ್ಮ ಗುರಿ ತಲುಪಲು ಸಹಕಾರಿ‌ ಆಗುತ್ತವೆ. ನಾವು ಸಾಧಿಸಬೇಕಾದ ಗುರಿ ಮರೆತರೆ, ನಮ್ಮನ್ನೇ ನಾವು ಕಳೆದುಕೊಳ್ಳಬೇಕಾಗುತ್ತದೆ. 

ಆದ್ದರಿಂದ ಪ್ರತಿಯೊಬ್ಬರೂ ಸಂಪ್ರದಾಯ ಪಾಲಿಸಿ ನಿತ್ಯಸಾಧನೆ ಮಾಡಬೇಕು. ಕರ್ಮ, ಅಕರ್ಮ ಮತ್ತು ವಿಕರ್ಮಗಳ ನಡುವಿನ ವ್ಯತ್ಯಾಸ ಸರಿಯಾಗಿ ತಿಳಿದುಕೊಳ್ಳಬೇಕು ಎಂದರು.ಬದುಕಿನಲ್ಲಿ ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಭಕ್ತಿ ಬೇಕೇ ಬೇಕು. ರಾಮ ಮತ್ತು ರಾವಣ ಇಬ್ಬರಲ್ಲೂ ಜ್ಞಾನವಿತ್ತು. ಆದರೆ, ರಾಮನಲ್ಲಿ ಮಾತ್ರ ಭಕ್ತಿ ಇತ್ತು. ಹಾಗಾಗಿ, ಅವನನ್ನು ಪೂಜಿಸುತ್ತೇವೆ. ಭಕ್ತಿ ಇಲ್ಲದ ಜ್ಞಾನ ಅಹಂಕಾರ ಹುಟ್ಟಿಸುತ್ತದೆ ಎಂದು ವಿವರಿಸಿದರು.

ಮುಂದಿನ ಶುಕ್ರವಾರ ದುನಿಯಾ ವಿಜಯ್‌ 'ಭೀಮ'ನ ಹಬ್ಬ: ಚಿತ್ರ ವೀಕ್ಷಣೆಗೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ

ಫೂಟ್‌ಪ್ರಿಂಟ್ಸ್‌ ಆನ್ ದಿ ಸ್ಯಾಂಡ್ಸ್ ಆಫ್ ಟೈಮ್ ಎಂಬ ಕೃತಿ ಬಿಡುಗಡೆಗೊಳಿಸಿದ ಹೈದರಾಬಾದ್‌ನ ರಾಮಚಂದ್ರ ಮಿಷನ್‌ನ ಕಮಲೇಶ್ ಪಟೇಲ್ ಮಾತನಾಡಿ, ಭಾರತೀಯರಾದ ನಾವು ಮಾನವೀಯತೆ, ವಿನಯತೆಯನ್ನು ಎಂದಿಗೂ ಮರೆಯಬಾರದು. ದೇಶದ ಹಿತಕ್ಕಾಗಿ ಎಂತಹ ತ್ಯಾಗವನ್ನಾದರೂ ಮಾಡಲು ಸಿದ್ಧವಿರಬೇಕು. ಆದರೆ, ದೇಶಕ್ಕೆ ಅಪಮಾನ ಮಾಡುವ ಶಕ್ತಿಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಹೇಳಿದರು. ಎಸಿಪಿಆರ್ ಆವರಣದಲ್ಲಿ ಮೋಹನ್ ಭಾಗವತ್ ಮತ್ತು ಕಮಲೇಶ ಪಟೇಲ್ ಸಸಿ ನೆಟ್ಟರು. ಎಸಿಪಿಆರ್‌ ಅಧ್ಯಕ್ಷ ಅಶೋಕ ಪೋತದಾರ, ಕಾರ್ಯದರ್ಶಿ ಎಂ.ಬಿ.ಜಿರಲಿ ಮತ್ತಿತರರು ಇದ್ದರು.