Asianet Suvarna News Asianet Suvarna News

ಸಾಫ್ಟ್‌ವೇರ್‌ ದಂಪತಿಯ ದುರಂತ ಅಂತ್ಯ: ಮದುವೆಗೆ ಹೊರಟಿದ್ದವರು ಮಸಣ ಸೇರಿದರು

ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮದುವೆಗೆ ಹೊರಟಿದ್ದವರು ಮಸಣ ಸೇರಿದ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗೇಟ್ ಬಳಿ ಇಂದು ನಡೆದಿದೆ. 

Software couple life tragedy end going to marriage but went to the cemetery sat
Author
First Published Feb 11, 2023, 4:12 PM IST

ತುಮಕೂರು (ಫೆ.11): ಲಾರಿ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಮದುವೆಗೆ ಹೊರಟಿದ್ದವರು ಮಸಣ ಸೇರಿದ ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಗೇಟ್ ಬಳಿ ಇಂದು ನಡೆದಿದೆ. 

ಮದುವೆಗೆ ಹೊರಟ್ಟಿದ್ದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರು ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದೆ. ಆದರೆ, ದಂಪತಿ ರಘು (35), ಅನುಷಾ (28) ಮೃತ ದುರ್ದೈವಿಗಳು. ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಮೃತ ದುರ್ದೈವಿಗಳು ಹಾಸನ ಜಿಲ್ಲೆ ಅರಸೀಕೆರೆ ಮೂಲದವರು ಆಗಿದ್ದಾರೆ. ಕಳೆದ ಒಂದೂವರೆ ವರ್ಷಗಳ ಹಿಂದಷ್ಟೇ ಚಿಕ್ಕನಾಯಕನಹಳ್ಳಿ ತಾಲೂಕಿನ ತಿಗಡನಹಳ್ಳಿ ಗ್ರಾಮದ ಅನುಷಾ ಜೊತೆ ಇವರ ಮದುವೆಯಾಗಿತ್ತು. ದಂಪತಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ದರು. ಇಂದು ಸಂಬಂಧಿಕರೊಬ್ಬರ ಮದುವೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.

Hit and Run: ಬೈಕ್‌ ಸವಾರನ ತಲೆಮೇಲೆ ಹರಿದ ಶಾಸಕ ಹರತಾಳು ಹಾಲಪ್ಪ ಕಾರು: ಬೈಕ್‌ ಸವಾರ ಸ್ಥಳದಲ್ಲಿಯೇ ಸಾವು

ಸಂಬಂಧಿಕರ ಮದುವೆಗೆ ತೆರಳುತ್ತಿದ್ದ ವೇಳೆ ಘಟನೆ: ಇಂದು ಚಿಕ್ಕನಾಯಕನಹಳ್ಳಿಯಿಂದ ಬಳ್ಳಾರಿಗೆ ಸಂಬಂಧಿಕರ ಮದುವೆಗೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಲಾರಿ ಬಂದು ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾದರೂ ಕಾರಿನ ಚಾಲಕ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಯಾಳು ಕಾರು ಚಾಲಕನನ್ನು ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸರು ಭೇಟಿ ಪರಿಶೀಲನೆ‌ ನಡೆಸಿದ್ದಾರೆ. ಈ ದುರ್ಘಟನೆ ಕುರಿತಂತೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. 

ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ತುಮಕೂರು ಜಿಲ್ಲೆಯ ಮತ್ತೊಂದು ಅಪಘಾತ ಪ್ರಕರಣದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಘಿರುವ ಘಟನೆ ಜಿಲ್ಲೆಯ ಕೆರೆ ಕ್ಯಾತನಹಳ್ಳಿ ಬಳಿಯ ತಿರುವಿನಲ್ಲಿ ಸಂಭವಿಸಿದೆ. ಪಾವಗಡ ತಾಲೂಕಿನ ನಿಡಗಲ್ ಹೋಬಳಿಯ ಕೆರೆ ಕ್ಯಾತನಹಳ್ಳಿಯ ಬಳಿ ಘಟನೆ ನಡೆದಿದೆ. ಮದ್ದೆ ಗ್ರಾಮದಿಂದ ಪಾವಗಡಕ್ಕೆ ಸಂಚರಿಸುವಂತಹ ವೇಳೆ ಅವಘಡ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಪಲ್ಟಿಯಾಗಿ ಬಿದ್ದಿದೆ. ಇನ್ನು ಕಾರು ಚಲಾಯಿಸುತ್ತಿದ್ದ ಮದ್ದೆ ಗ್ರಾಮದ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸರ್ಕಾರಿ ಆಸ್ಪತ್ರೆಗೆ ದಾಖಲು: ಇನ್ನು ಪ್ರಾಣಾಪಾಯದಿಂದ ಪಾರಾಗಿದ್ದರೂ, ಕಾರು ಚಲಾಯಿಸುತ್ತಿದ್ದ ಮಂಜುನಾಥ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಕಾರು ಪಲಟ್ಟಿಯಾದ ತಕ್ಷಣವೇ ಸ್ಥಳೀಯರು ಗಮನಿಸಿ ಅವರನ್ನು ಕಾರಿನಿಂದ ಹೊರಗೆಳೆದು ರಕ್ಷಣೆ ಮಾಡಿದ್ದಾರೆ. ನಂತರ ಅವರನ್ನು ಹತ್ತಿರದ ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಘಟನೆಯು ಪಾವಗಡ ತಾಲೂಕಿನ ಅರಸೀಕೆರೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಠಾಣೆಯ ಪೊಲೀಸರು ಅಪಘಾತ ನಡೆದ ಸ್ಥಳವನ್ನು ಪರಿಶೀಲನೆ ಮಾಡಿದ್ದಾರೆ. 

ಅತ್ಯುತ್ತಮ ಸಂದೇಶದೊಂದಿಗೆ ನಡೆದಾಡುವ ಫೋಟೋ ಹಂಚಿಕೊಂಡ ರಿಷಭ್ ಪಂತ್

ಮದುವೆ ಕಾರ್ಡ್‌ ಕೊಡಲು ಹೊರಟಿದ್ದ ಮದುಮಗ ಸಾವು: ಚಿತ್ರದುರ್ಗ: ಇನ್ನೇನು  ಎರಡು ದಿನದಲ್ಲಿ ಹಸೆಮಣೆ ಏರಬೇಕಿದ್ದ ವರ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮದುವೆ ಖುಷಿಯಿಂದ ಕಂಗೊಳಿಸಬೇಕಾದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ.  ಮನೆ ಮುಂದೆ ಚಪ್ಪರದ ಪೂಜೆ ಮಾಡಿ ಸಂಬಂಧಿಕರಿಗೆ ಮದುವೆ ಕಾರ್ಡ್ ನೀಡಲು ಹೋದವ ಸೇರಿದ್ದು ಮಸಣಕ್ಕೆ. ವರನ ಸಾವಿನ ಸುದ್ದಿ ತಿಳಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಭತ್ತನಹಟ್ಟಿ ಕ್ರಾಸ್ ಬಳಿ ಈ ಅನಾಹುತ ಸಂಭವಿಸಿದೆ. 

ಚಳ್ಳಕೆರೆ ನಗರದ ಕಾಟಪ್ಪನಹಟ್ಟಿ ಬಡಾವಣೆಯ ನಿವಾಸಿ 31 ವರ್ಷ ಪ್ರಾಯದ ಮಂಜುನಾಥ್ (Manjunath) ಮೃತ ಯುವಕ. ಈತ ನಾಳೆ ಒಂದು ಕಳೆದರೆ ಭಾನುವಾರ ಹಸೆಮಣೆ ಏರಬೇಕಿದ್ದ. ಆದರೆ ವಿಧಿ ಬೇರೆಯದೇ ಬರೆದಿದ್ದು, ಆತ ಮಸಣ ಸೇರಿದ್ದಾನೆ. ಬೆಳಗ್ಗೆ ತಾನೇ ತನ್ನ ಮನೆಯ ಮುಂದೆ ಚಪ್ಪರದ ಕೂಟಕ್ಕೆ ಪೂಜೆ ಸಲ್ಲಿಸಿ ಮದುವೆಗೆ ಚಪ್ಪರ ಕೂಡ ಸ್ವತಃ ತಾನೇ ಹಾಕಿದ್ದ. ಬಳಿಕ ಮನೆಯಲ್ಲಿ ಯಾರಿಗೂ ಹೇಳದೇ ಮದುವೆಯ ಕಾರ್ಡ್‌ಗಳನ್ನು ತೆಗೆದುಕೊಂಡು ಉಳಿದ ಸಂಬಂಧಿಕರಿಗೆ ನೀಡಿ ಆಹ್ವಾನಿಸಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬರುವಾಗ ಈ ಅವಘಡ ಸಂಭವಿಸಿದ್ದು ಯುವಕ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಂಜುನಾಥ್‌ಗೆ ರಾಯದುರ್ಗದ (Rayadurga) ಯುವತಿಯೊಂದಿಗೆ ಮದುವೆ ನಿಶ್ವಯ ಆಗಿತ್ತು. ಇಂದು ರಾತ್ರಿ ಮನೆಯಲ್ಲಿ ಅರಿಶಿಣ ಶಾಸ್ತ್ರ ನಡೆಯಬೇಕಿತ್ತು. ಆದ್ರೆ ಈ ಸಾವಿನಿಂದ ಮದುವೆ ಮನೆ ಸೂತಕದ ಮನೆಯಾಗಿ ಬದಲಾಗಿದೆ. 

Follow Us:
Download App:
  • android
  • ios