ಸಿಎಂ ತಪ್ಪು ಎಸಗುವುದಕ್ಕೂ, ಅಪರಾಧ ಮಾಡುವುದಕ್ಕೂ ವ್ಯತ್ಯಾಸವಿದೆ. ಸಿಎಂ ಮಾಡಿರುವುದು ತಪ್ಪಲ್ಲ, ಅಪರಾಧ. ಇದರಲ್ಲಿ ಸಂಸದ ಕುಮಾರನಾಯ್ಕ್‌ ಅವರ ಪಾತ್ರ ಕೂಡ ಇದೆ ಎಂದು ಆರೋಪಿಸಿದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ 

ಮೈಸೂರು(ನ.19):  ಸಿಎಂ ಸಿದ್ದರಾಮಯ್ಯ ಅವರನ್ನು ಕಂಡರೆ ಎಂ. ಲಕ್ಷ್ಮಣಗೆ ಕೋಪ. ತಮ್ಮ ಚುನಾವಣೆಯ ಸೋಲನ್ನು ಈ ರೀತಿ ತೀರಿಸಿಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತರುತ್ತಿರುವುದೇ ಎಂ. ಲಕ್ಷ್ಮಣ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಆರೋಪಿಸಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಲಕ್ಷ್ಮಣ ಕಳೆದ ಲೋಕಸಭೆ ಚುನಾವಣೆಯ ಸೋಲಿನ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಹರಕೆಯ ಕುರಿ ಮಾಡಿದರು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕುಪಿತಗೊಂಡಿರಬಹುದು. ಸಿಎಂ ಸಿದ್ದರಾಮಯ್ಯ ವಿಚಾರದಲ್ಲಿ ಎಂ. ಲಕ್ಷ್ಮಣ ಜಿಪಿಎ ತೆಗೆದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು. 

ಪೊಲೀಸರ ವಿಚಾರಣೆಗೆ ಹಾಜರು: 

ಮೈಸೂರಿನ ದೇವರಾಜ ಪೋಲಿಸ್ ಠಾಣೆಯಲ್ಲಿ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ನೀಡಿರುವ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆಗೆ ಸೋಮವಾರ ಹಾಜರಾದ ಬಳಿಕ ಸ್ನೇಹಮಯಿ ಕೃಷ್ಣ ಮಾತನಾಡಿ, ಪೊಲೀಸರ ವಿಚಾರಣೆ ವೇಳೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಈ ಪ್ರಕರಣದಲ್ಲಿ ಲಕ್ಷ್ಮಣ ವಿರುದ್ಧವೇ ಕೇಸ್ ಬೀಳಲಿದೆ. ತಮ್ಮ ಹೋರಾಟವನ್ನು ಮೊದಲಿನಿಂದಲೂ ಹತ್ತಿಕ್ಕುವ ಕೆಲಸ ಆಗ್ತಿದೆ ಎಂದು ದೂರಿದರು. 

ಸಾಮಾಜಿಕ ಜಾಲತಾಣದಲ್ಲಿ ನನ್ನ ಪರ ಅಭಿಯಾನ ಆರಂಭವಾಗಿದೆ. ಕೆಲವರು ಕರೆ ಮಾಡಿ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದರು. ಒಂದೇ ಒಂದು ಕರೆ ನೀಡಿದರೆ ರಾಜ್ಯಾದ್ಯಂತ ಹೋರಾಟ ಆರಂಭವಾಗುತ್ತದೆ. ನಾನೇ ಯಾವುದು ಬೇಡ ಎಂದು ಸುಮ್ಮನಿದ್ದೀನಿ ಎಂದರು. 

ಸಿಎಂ ತಪ್ಪು ಎಸಗುವುದಕ್ಕೂ, ಅಪರಾಧ ಮಾಡುವುದಕ್ಕೂ ವ್ಯತ್ಯಾಸವಿದೆ. ಸಿಎಂ ಮಾಡಿರುವುದು ತಪ್ಪಲ್ಲ, ಅಪರಾಧ. ಇದರಲ್ಲಿ ಸಂಸದ ಕುಮಾರನಾಯ್ಕ್‌ ಅವರ ಪಾತ್ರ ಕೂಡ ಇದೆ ಎಂದು ಆರೋಪಿಸಿದರು.