ಮೈಸೂರಿನ ಮೃಗಾಲಯಕ್ಕೆ ತಂದ 24 ಗಂಟೆಯಲ್ಲಿ ಹುಲಿ, ಕಾಳಿಂಗ ಸರ್ಪ ಸಾವು
ಮೈಸೂರು ಮೃಗಾಲಯಕ್ಕೆ ತಂದ 24 ಗಂಟೆಯಲ್ಲಿಯೇ ಹುಲಿ ಹಾಗೂ ಕಾಳಿಂಗ ಸರ್ಪ ಮೃತಪಟ್ಟಿವೆ.
ಮೈಸೂರು [ಮಾ.03]: ಮಂಗಳೂರಿನ ಪಿಲಿಕುಳ ಮೃಗಾಲಯದಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ತರಲಾಗಿದ್ದ ಹುಲಿ ಮತ್ತು ಕಾಳಿಂಗ ಸರ್ಪ ಅನಾರೋಗ್ಯದಿಂದ ಮೃತಪಟ್ಟಿವೆ.
ಸುಮಾರು 4 ವರ್ಷದ ಗಂಡು ಹುಲಿ ಹೃದಯಾಘಾತದಿಂದ ಮೃತಪಟ್ಟರೆ, ಕಾಳಿಂಗ ಸರ್ಪವು ಕಿಡ್ನಿ ವೈಫಲ್ಯದಿಂದ ಮೃತಪಟ್ಟಿರುವುದಾಗಿ ಮೃಗಾಲಯ ಮೂಲಗಳು ದೃಢಪಡಿಸಿದೆ. ಫೆ.28ರಂದು ಮಂಗಳೂರಿನ ಪಿಲಿಕುಳ ಮೃಗಾಲಯದಿಂದ ತರಲಾಗಿದ್ದ 4 ವರ್ಷದ ಹುಲಿ ಭಾನುವಾರ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಪ್ರಾಣಿ ವಿನಿಮಯ ಯೋಜನೆಯಡಿ ಈ ಹುಲಿಯನ್ನು ತರಲಾಗಿತ್ತು. ಮೇಲುನೋಟಕ್ಕೆ ಚೆನ್ನಾಗಿದ್ದರೂ ಏಕಾಏಕಿ ಹೃದಯಾಘಾತವಾಗಿ ಮೃತಪಟ್ಟಿದೆ ಎಂದು ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದರು.
ಕಾಳಿಂಗ ಸರ್ಪ ಶನಿವಾರ ಮೃತಪಟ್ಟಿದೆ. ಕಿಡ್ನಿ ವೈಫಲ್ಯಕ್ಕೆ ತುತ್ತಾಗಿ ಹಾವು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಎರಡೂ ಪ್ರಾಣಿಗಳ ಅಂತ್ಯಕ್ರಿಯೆ ನೆರವೇರಿದೆ.