ಸ್ಮಾರ್ಟ್ ಸಿಟಿ ಯೋಜನೆಯಿಂದ ಶಿವಪ್ಪ ನಾಯಕನ ಕೋಟೆಗೆ ಹಾನಿ ಉಂಟಾಗಿದೆ.  ಪುರಾತನ ಕೋಟೆ ಅವಶೇಷಗಳು ಸ್ಮಾರ್ಟ್‌ ಸಿಟಿ ಕಾಮಗಾರಿಯಲ್ಲಿ ತೀವ್ರ ಧಕ್ಕೆಗೆ ಒಳಗಾಗಿವೆ.

ಶಿವಮೊಗ್ಗ [ಜ.09]: ನಗರ ಮಧ್ಯದ ತುಂಗಾ ನದಿ ತಟದಲ್ಲಿ ಶಿವಪ್ಪನಾಯಕ ಅರಮನೆಗೆ ಹೊಂದಿಕೊಂಡಿರುವ ಪುರಾತನ ಕೋಟೆ ಅವಶೇಷಗಳು ಸ್ಮಾರ್ಟ್‌ ಸಿಟಿ ಕಾಮಗಾರಿಯಲ್ಲಿ ತೀವ್ರ ಧಕ್ಕೆಗೆ ಒಳಗಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಮಲಾ ನೆಹರು ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿನಿಯರು ಇತ್ತೀಚೆಗೆ ಪಾರಂಪರಿಕೆ ನಡೆಗೆ ಜಾಥಾವನ್ನು ನಡೆಸಿದ್ದರು. ಈ ಜಾಥಾದ ಸಂದರ್ಭದಲ್ಲಿ ನಗರದಲ್ಲಿರುವ ಒಂದೊಂದೇ ಪಾರಂಪರಿಕ ಮೌಲ್ಯದ ಕಟ್ಟಡಗಳಿಗೆ ಭೇಟಿ ಕೊಡುತ್ತಾ ಕೋಟೆ ಸಮೀಪ ಹೋದ ಸಂದರ್ಭದಲ್ಲಿ ಪುರಾತನ ಕೋಟೆ ಸಂಪೂರ್ಣ ಕುಸಿದಿದ್ದನ್ನು ಕಂಡರು. 

ಕೇವಲ ಎರಡು ವರ್ಷಗಳ ಹಿಂದೆ ಇದೇ ಕೋಟೆಗೆ ಹೊಂದಿಕೊಂಡೇ ಪಾಲಿಕೆ, ಸಣ್ಣ ನೀರಾವರಿ ಇಲಾಖೆಗಳು ನೂರಾರು ಕೋಟಿ ರು. ವೆಚ್ಚದಲ್ಲಿ ತುಂಗಾನದಿ ತಟದಲ್ಲಿ ‘ವಾಕ್‌ ಪಾಥ್‌’ ನಿರ್ಮಿಸುವಾಗ ಕೆಳದಿ ಅರಸರ ಕಾಲದ ಈ ಕೋಟೆಗೆ ಧಕ್ಕೆ ಬರುವ ರೀತಿಯಲ್ಲೇ ಕಾಮಗಾರಿ ಮಾಡುತ್ತಿರುವ ಸಂದರ್ಭದಲ್ಲಿ ಡಾ. ಬಾಲಕೃಷ್ಣ ಹೆಗಡೆ, ಖಂಡೋಬ ರಾವ್‌ ಮತ್ತಿತರರು ಸ್ಥಳಕ್ಕೆ ಧಾವಿಸಿ ಕೋಟೆ ಮಹತ್ವವನ್ನು ಸಂಬಂಧಿಸಿದವರಿಗೆ ತಿಳಿಸಿ ಅಳಿದುಳಿದ ಕೋಟೆಯ ಅವಶೇಷಗಳು ಸಂರಕ್ಷಿಸಲ್ಪಡುವಂತೆ ಮಾಡಿದ್ದರು. ಆದರೆ ಈಗ ಮತ್ತೆ ನೂರಾರು ಕೋಟಿ ರು. ಸುರಿದು ನಿರ್ಮಿಸಿದ ವಾಕ್‌ ಪಾಥನ್ನೇ ಅಗೆದು ಅಲ್ಲಿ ಸ್ಮಾರ್ಟ್‌ ಸಿಟಿ ಹೆಸರಿನಲ್ಲಿ ಕೋಟೆ ಎದುರಿನ ಮೋಟ್‌ಗೆ ಮಣ್ಣು ತಂಬಿಸಲಾಗಿದೆ. ಇದರಿಂದ ಕೋಟೆ ಅವಶೇಷಗಳಿಗೆ ಧಕ್ಕೆಯಾಗಿದೆ ಎಂದು ಬಾಲಕೃಷ್ಣ ಹೆಗಡೆ ತಿಳಿಸಿದ್ದಾರೆ.

ಜೋಗದ ವೀಕ್ಷಣೆಗಿನ್ನು ರೋಪ್‌ವೇ ಆಕರ್ಷಣೆ!...

ಇತಿಹಾಸ ಸಂಶೋಧಕರೂ ಆದ ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ ಈ ಬಗ್ಗೆ ಪ್ರತಿಕ್ರಿಯಿಸಿ, ಯಾವುದೇ ಪುರಾತನ ಸ್ಮಾರಕಗಳಿದ್ದರೆ ಅವುಗಳಿಂದ 300 ಅಡಿ ಅಂತರದಲ್ಲಿ ಯಾವುದೇ ಹೊಸ ಕಟ್ಟಡ ಅಥವಾ ಕಾಮಗಾರಿ ಹಮ್ಮಿಕೊಳ್ಳುವಂತಿಲ್ಲ. ಪುರಾತನ ಸ್ಮಾರಕ ಅತಿಕ್ರಮಿಸಿದಲ್ಲಿ ಅಥವಾ ಧಕ್ಕೆ ತಂದಲ್ಲಿ ಈ ಕಾಯ್ದೆ ರೀತ್ಯಾ ಅವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪುರಾತತ್ವ ಇಲಾಖೆಯ ಕಣ್ಣೆದುರಲ್ಲೇ ಇಂಥಹ ಪುರಾತನ ಕೋಟೆಗೆ ಧಕ್ಕೆಯಾದರೂ ಇಲಾಖೆ ಮೌನ ವಹಿಸಿದ್ದು ಇತಿಹಾಸ ಆಸಕ್ತರಲ್ಲಿ, ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದೆ. ಹಾಲಿ ಅಸ್ತಿತ್ವದಲ್ಲಿರುವ ಕೋಟೆಗೇ ಧಕ್ಕೆ ತಂದಿದ್ದಲ್ಲದೆ ಇಲ್ಲೇ ‘ಸ್ಮಾರ್ಟ್‌ ಸಿಟಿ’ ಅಡಿಯಲ್ಲಿ 16 ಕೋಟಿ ರು. ವೆಚ್ಚದಲ್ಲಿ ಹೆರಿಟೇಜ್‌ ವಾಕ್‌ಪಾಥ್‌ ನಿರ್ಮಾಣ ಮಾಡಲು ಮುಂದಾಗಿದ್ದುದು ಸರಿಯಲ್ಲ ಎಂದರು. ವಿದ್ಯಾರ್ಥಿಗಳು ಕೂಡ ಸ್ಮಾರ್ಟ್‌ಸಿಟಿ ಹೆಸರಿನ ಕಾಮಗಾರಿ ಹೆಸರಿನಲ್ಲಿ ಪಾರಂಪರಿಕ ಕೋಟೆಗೆ ಹಾನಿ ಉಂಟು ಮಾಡಿದ್ದನ್ನು ಖಂಡಿಸಿದ್ದಾರೆ.