ಬಾರಕೂರು ಹನೆಹಳ್ಳಿ ಗ್ರಾಮಪಂಚಾಯತಿಯಲ್ಲಿ  ಎಸ್ ಎಲ್ ಆರ್ ಎಂ  ಘಟಕವು ವಿಶಿಷ್ಟ ರೀತಿಯಲ್ಲಿ ನಿರ್ವಹಿಸಲ್ಪಡುತ್ತಿದೆ.  ಮಹಿಳೆಯೊಬ್ಬರ ವಾಹನ ಚಾಲನಾ  ಸಾರಥ್ಯದಲ್ಲಿ  ನಡೆಯುತ್ತಿರುವುದು ಈ ಕೇಂದ್ರದ ವಿಶೇಷ.

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ (ಆ.10); ಸತತ ಮೂರು ಬಾರಿ ಗಾಂಧಿಗ್ರಾಮ ಪುರಸ್ಕಾರ ಪಡೆದ ಬಾರಕೂರು ಹನೆಹಳ್ಳಿ ಗ್ರಾಮಪಂಚಾಯತಿಯಲ್ಲಿ ಎಸ್ ಎಲ್ ಆರ್ ಎಂ ಘಟಕವು ವಿಶಿಷ್ಟ ರೀತಿಯಲ್ಲಿ ನಿರ್ವಹಿಸಲ್ಪಡುತ್ತಿದೆ. ಮಹಿಳೆಯೊಬ್ಬರ ವಾಹನ ಚಾಲನಾ ಸಾರಥ್ಯದಲ್ಲಿ ನಡೆಯುತ್ತಿರುವುದು ಈ ಕೇಂದ್ರದ ವಿಶೇಷ.
29 ವರ್ಷದ ಹಿಂದೆ ರಚನೆಗೊಂಡ ಹನೆಹಳ್ಳಿ ಗ್ರಾಮ ಪಂಚಾಯತಿಯಲ್ಲಿ 850 ಮನೆ, 172 ವಾಣಿಜ್ಯ ಕೇಂದ್ರ , 1 ಪದವಿ ಕಾಲೇಜು 1 ಪಿಯು ಕಾಲೇಜು, 3 ಪ್ರಾಥಮಿಕ ಶಾಲೆ 5 ಅಂಗನವಾಡಿ ಇದೆ. 4206 ಜನಸಂಖ್ಯೆ ಹೊಂದಿರುವ ಗ್ರಾಮ‌ ಇದಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 2 ವರ್ಷಗಳ ಹಿಂದೆ ಒಣ ಮತ್ತು ದ್ರವ ತ್ಯಾಜ್ಯ ಘಟಕವು ಆರಂಭಗೊಂಡಿದೆ. ಗ್ರಾಮೀಣ ಭಾಗದ ಜನರಿಗೆ ತ್ಯಾಜ್ಯ ಸಂಗ್ರಹದ ಕುರಿತು ಸರಿಯಾದ ಮಾಹಿತಿ ಇಲ್ಲದೆ ನಿರ್ವಹಣೆ ಮಾತ್ರ ನಿಧಾನಗತಿಯಲ್ಲಿತ್ತು. ಈ ಗ್ರಾಮದ ರಂಗನಕರೆಯ ನಿವಾಸಿ ವಿನೋದ್ ಕೊಠಾರಿಯವರಿಗೆ ಮದುವೆ ಆಗಿ ಬಂದ ವೀಣಾ ಒಂದು ವರ್ಷದಿಂದ ಘಟಕದ ಉಸ್ತುವಾರಿ ಹೊಂದಿದ ಬಳಿಕ ಗ್ರಾಮದ ಜನರಲ್ಲಿ ಸ್ವಚ್ಛ ಮತ್ತು ಪರಿಸರದ ಕುರಿತು ಅರಿವು ಮತ್ತು ಜಾಗೃತಿ ಹೆಚ್ಚಿದೆ .

2 ಮಕ್ಕಳ ತಾಯಿಯಾದ ವೀಣಾ ರಿಗೆ ಸೈಕಲ್ ಕೂಡಾ ತುಳಿಯಲು ಬರುತ್ತಿರಲಿಲ್ಲ. ಸಂಜೀವಿನಿ ಸ್ವ ಸಹಾಯ ಸಂಘದ ಅನುಭವದಿಂದ ಮತ್ತು ಮನೆಯವರ ಸಹಕಾರದಿಂದ ಗ್ರಾಮ ಪಂಚಾಯತಿಯವರ ಶಿಪಾರಸಿನ ಮೇರೆಗೆ ಉಡುಪಿ ಜಿಲ್ಲಾ ಪಂಚಾಯತಿ ವತಿಯಿಂದ ಇವರಿಗೆ ವಾಹನ ಚಾಲನೆ ತರಬೇತಿ ನೀಡಲಾಯಿತು .

ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ ಒಂದು ತಿಂಗಳು ಚಕ್ರದ ವಾಹನ ಚಾಲನಾ ತರಬೇತಿ ಪಡೆದುಕೊಂಡು ಇದೀಗ ಅವರೇ ವಾಹನ ಚಲಾಯಿಸಿಕೊಂಡು ಓಡಾಡುತ್ತಾರೆ. ಗ್ರಾಮದ ಮನೆ ಮನೆಯ ಕಸ ಸಂಗ್ರಹ ಮಾಡಿ ಗ್ರಾಮದ ಜನರ ಮತ್ತು ಮಹಿಳೆಯರ ಮನ ಗೆದ್ದಿದ್ದಾರೆ.

ಗ್ರಾಮ ಪಂಚಾಯತಿಯ ಒಂದು ಕಟ್ಟಡದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಇಬ್ಬರು ಸಹಾಯಕರೊಂದಿಗೆ ಬೇರ್ಪಡಿಸಿ ಮಾರಾಟ ಮಾಡುತ್ತಾರೆ. ಇದರಿಂದ ಬಂದ ಹಣ ಇವರಿಗೆ ಆದಾಯವಾಗಿದೆ.

ಗ್ರಾಮ ಪಂಚಾಯತಿ , ಜಿಲ್ಲಾ ಪಂಚಾಯತಿಯ ನೆರವಿನಿಂದ ವಾಹನ ಮತ್ತು ಪ್ಯಾಡ್ ಬರ್ನ್ ಯಂತ್ರ ನೀಡಿದ್ದಾರೆ.ರಸ್ತೆ , ಮನೆ, ಅಂಗಡಿ ಎಲ್ಲೆಂದರಲ್ಲಿ ಪ್ಲಾಸಿಕ್ ಸೇರಿದಂತೆ ತ್ಯಾಜ್ಯ ಕಸವನ್ನು ಎಸೆಯಲಾಗುತ್ತೆ. ಈ ಕಸವನ್ನೇ ಸಂಪನ್ಮೂಲವಾಗಿಸುವ ಪರಿಕಲ್ಪನೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಪ್ರತೀ ಮನೆ ಮತ್ತು ಗ್ರಾಮ ಸ್ವಚ್ಛವಾದರೆ ಮಾತ್ರ ದೇಶ ಸ್ವಚ್ಛವಾಗಲು ಸಾಧ್ಯ ಎನ್ನುವುದನ್ನು ಹನೆಹಳ್ಳಿ ಗ್ರಾಮ ಪಂಚಾಯತಿ ಮಾಡುತ್ತಿದ್ದು ಇದೊಂದು ಮಾದರಿ ಗ್ರಾಮವಾಗಿದೆ.

ಹರ್‌ ಘರ್‌ ತಿರಂಗ ಅಭಿಯಾನಕ್ಕೆ ಕೃಷ್ಣ ಮಠದಲ್ಲಿ ಶ್ರೀಗಳಿಂದ ಚಾಲನೆ: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರಿಗೆ ತ್ರಿವರ್ಣಧ್ವಜ ನೀಡಿ ಚಾಲನೆ ನೀಡಲಾಯಿತು.

ಅದೇ ರೀತಿ ಭಜನಾ ಸಪ್ತಾಹ ನಡೆಯುತ್ತಿರುವ ಉಡುಪಿಯ ಶ್ರೀ ಲಕ್ಷ್ಮೇವೆಂಕಟೇಶ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸಿಎ ಪಿ.ವಿ. ಶೆಣೈ ಮತ್ತು ಆಡಳಿತ ಮಂಡಳಿಯ ಸದಸ್ಯ ಪುಂಡಲೀಕ ಕಾಮತ್‌ ಅವರಿಗೂ ಶಾಸಕ ಕೆ. ರಘುಪತಿ ಭಟ್‌ ರಾಷ್ಟ್ರಧ್ವಜವನ್ನು ನೀಡಿದರು.

ಈ ಸಂದರ್ಭದಲ್ಲಿ ನಗರ ಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ್‌ ಎಸ್‌. ಕಲ್ಮಾಡಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀಶ ನಾಯಕ್‌, ರವಿ ಅಮೀನ್‌, ನಗರಸಭಾ ಸದಸ್ಯ ಗಿರೀಶ್‌ ಎಂ. ಅಂಚನ್‌, ಸಾಮಾಜಿಕ ಚಿಂತಕ ಪ್ರದೀಪ್‌ ರಾವ್‌, ಜಿಲ್ಲಾ ಬಿಜೆಪಿ ವಕ್ತಾರ ಕೆ. ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.