ಕಳೆದ 15 ದಿನಗಳಿಂದ ನಡೆಯುತ್ತಿರುವ ಸಾರಿಗೆ ಮುಷ್ಕರ|  ಮಂಗಳವಾರದಿಂದ ಪ್ರಾಯೋಗಿಕವಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಸ್ಲೀಪರ್‌ ಕೋಚ್‌ ಬಸ್‌ ಸಂಚಾರಕ್ಕೆ ಚಾಲನೆ| ಈ ಬಸ್‌ಗೆ ಟಿಕೆಟ್‌ ಬುಕ್‌ ಮಾಡಿದ ಮೂರೇ ಪ್ರಯಾಣಿಕರು|  

ಹುಬ್ಬಳ್ಳಿ(ಏ. 21): ಸಾರಿಗೆ ಮುಷ್ಕರದ ನಡುವೆಯೇ ಸಾರ್ವಜನಿಕರ ವಿಶ್ವಾಸ ಉಳಿಸಿಕೊಳ್ಳಲು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯೂ ಕೇವಲ ಮೂವರು ಪ್ರಯಾಣಿಕರಿಗಾಗಿ ಬೆಂಗಳೂರಿಗೆ ಸ್ಲೀಪರ್‌ ಕೋಚ್‌ ಬಸ್‌ ಸಂಚಾರಕ್ಕೆ ಚಾಲನೆ ನೀಡಿದೆ.

ಕಳೆದ 15 ದಿನಗಳಿಂದ ಸಾರಿಗೆ ಮುಷ್ಕರ ನಡೆಯುತ್ತಿದೆ. ಕೆಲ ನೌಕರರು ಕೆಲಸಕ್ಕೆ ಹಾಜರಾಗುತ್ತಿದ್ದರೂ ಅವರನ್ನು ಬಳಸಿ ಬರೀ ಈ ಭಾಗದಲ್ಲಷ್ಟೇ ಬಸ್‌ ಓಡಿಸಲಾಗುತ್ತಿದೆ. ಬೆಂಗಳೂರಿನ ಸ್ಲೀಪರ್‌ ಕೋಚ್‌, ರಾತ್ರಿ ಬಸ್‌ ಸರ್ವೀಸ್‌ನ್ನು ಸಂಪೂರ್ಣ ಸ್ಥಗಿತಗೊಂಡಿತ್ತು. ಮಂಗಳವಾರದಿಂದ ಪ್ರಾಯೋಗಿಕವಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಸ್ಲೀಪರ್‌ ಕೋಚ್‌ ಬಸ್‌ ಸಂಚಾರಕ್ಕೆ ಚಾಲನೆ ನೀಡಲು ನಿರ್ಧರಿಸಿ ಮಧ್ಯಾಹ್ನವೇ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಕೂಡ ಸಂಸ್ಥೆ ಪ್ರಾರಂಭಿಸಿತ್ತು. ಈ ಬಸ್‌ಗೆ ಬರೀ ಮೂವರೇ ಪ್ರಯಾಣಿಕರು ಟಿಕೆಟ್‌ ಬುಕ್‌ ಮಾಡಿಕೊಂಡಿದ್ದಾರೆ. ಅದರಲ್ಲಿ ಒಬ್ಬರು ಪಾಸ್‌ ಹೊಂದಿದ ಪ್ರಯಾಣಿಕರಾದರೆ, ಇಬ್ಬರು ಟಿಕೆಟ್‌ ಪಡೆದು ಪ್ರಯಾಣಿಸುತ್ತಿದ್ದಾರೆ. 

ಬಸ್‌ ಸ್ಟ್ರೈಕ್‌: 'ಸರ್ಕಾರಕ್ಕೆ ತಾಕತ್ತಿದ್ದರೆ ಎಲ್ಲ ನೌಕರರನ್ನೂ ವಜಾ ಮಾಡಲಿ'

ಮೂವರೇ ಪ್ರಯಾಣಿಕರಿಗೆ ಸ್ಲೀಪರ್‌ ಕೋಚ್‌ ಓಡಿಸುತ್ತಿರುವುದು ಇದೇ ಮೊದಲು. ಹಿಂದೆ ಪ್ರಯಾಣಿಕರು ಸಿಗದಿದ್ದಲ್ಲೇ ಆ ಬಸ್‌ನ್ನು ರದ್ದುಪಡಿಸಿದ ಉದಾಹರಣೆಗಳು ಸಾಕಷ್ಟಿವೆ. ಆದರೆ ಇದೀಗ ಸಾರ್ವಜನಿಕರ ವಿಶ್ವಾಸ ಉಳಿಸಿಕೊಳ್ಳುವ ಪ್ರಯತ್ನವಾಗಿ ಮೂವರೇ ಪ್ರಯಾಣಿಕರಿದ್ದರೂ ಬೆಂಗಳೂರಿಗೆ ಬಸ್‌ ಸಂಚರಿಸಿದೆ ಎಂದು ಸಂಸ್ಥೆ ಮೂಲಗಳು ತಿಳಿಸಿವೆ.