ಅಂಡರ್‌ ಪಾಸ್‌ಗಳಲ್ಲಿ ನೀರು ತುಂಬಿಕೊಳ್ಳುತ್ತಿದಂತೆ ವಾಹನ ಚಾಲಕರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಎಲ್ಲಾ ಅಂಡರ್‌ ಪಾಸ್‌ಗಳಲ್ಲಿ ಸೈರನ್‌ ಮೊಳಗುವ ತಂತ್ರಜ್ಞಾನ ಅಳವಡಿಕೆಗೆ ಬಿಬಿಎಂಪಿ ಚಿಂತನೆ ನಡೆಸಿದೆ. 

ವಿಶ್ವನಾಥ ಮಲೇಬೆನ್ನೂರು

Add Asianetnews Kannada as a Preferred SourcegooglePreferred

ಬೆಂಗಳೂರು (ಮೇ.24): ಅಂಡರ್‌ ಪಾಸ್‌ಗಳಲ್ಲಿ ನೀರು ತುಂಬಿಕೊಳ್ಳುತ್ತಿದಂತೆ ವಾಹನ ಚಾಲಕರಿಗೆ ಎಚ್ಚರಿಕೆ ನೀಡುವ ಉದ್ದೇಶದಿಂದ ಎಲ್ಲಾ ಅಂಡರ್‌ ಪಾಸ್‌ಗಳಲ್ಲಿ ಸೈರನ್‌ ಮೊಳಗುವ ತಂತ್ರಜ್ಞಾನ ಅಳವಡಿಕೆಗೆ ಬಿಬಿಎಂಪಿ ಚಿಂತನೆ ನಡೆಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಣ್ಣ ಮಳೆ ಬಂದರೂ ಸಾಕು ಅಂಡರ್‌ ಪಾಸ್‌ಗಳು ನೀರು ತುಂಬಿಕೊಳ್ಳುತ್ತವೆ. ಈ ರೀತಿ ನೀರು ತುಂಬಿಕೊಂಡ ಕೆ.ಆರ್‌.ಸರ್ಕಲ್‌ನಲ್ಲಿ ಕಾರೊಂದು ಹೋಗಿ ಸಿಲುಕಿಕೊಂಡು ಯುವತಿಯೊಬ್ಬಳು ಮೃತಪಟ್ಟದಾರುಣ ಘಟನೆ ಭಾನುವಾರ ನಡೆದಿದೆ.

ಇದೀಗ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಅಧಿಕಾರಿಗಳು ದೆಹಲಿ ಮಾದರಿಯಲ್ಲಿ ಅಂಡರ್‌ ಪಾಸ್‌ಗಳಿಗೆ ಮೇಲ್ಚಾವಣಿ ಹಾಕುವುದು, ಅಂಡರ್‌ ಪಾಸ್‌ನ ಎರಡು ತುದಿಯಲ್ಲಿ ಮಳೆ ನೀರು ಅಂಡರ್‌ ಪಾಸ್‌ಗೆ ಹೋಗದಂತೆ ಚರಂಡಿ ವ್ಯವಸ್ಥೆ ಮಾಡುವುದು ಸೇರಿದಂತೆ ಅಂಡರ್‌ ಪಾಸ್‌ಗಳಲ್ಲಿ ನೀರು ತುಂಬಿಕೊಳ್ಳದಂತೆ ಹಲವು ಕ್ರಮಗಳನ್ನು ಕೈಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ಮಳೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ. ಇದು ಸೂಚನೆ ಅಲ್ಲ, ಎಚ್ಚರಿಕೆ: ಸಿದ್ದರಾಮಯ್ಯ

ನೀರು ತುಂಬಿದ ತಕ್ಷಣ ಸೈರನ್‌: ಪ್ರತಿಯೊಂದು ಅಂಡರ್‌ ಪಾಸ್‌ನ ಗೋಡೆಗೆ 1.5 ಅಡಿ ಎತ್ತರದಲ್ಲಿ ಸೆನ್ಸಾರ್‌ ಅಳವಡಿಕೆ ಮಾಡಲಾಗುತ್ತದೆ. ಅಂಡರ್‌ ಪಾಸ್‌ನಲ್ಲಿ 1.5 ಅಡಿ ಅಷ್ಟುನೀರು ತುಂಬಿಕೊಳ್ಳುತ್ತಿದಂತೆ ಈ ಸೆನ್ಸಾರ್‌ ಮೂಲಕ ಸೈರನ್‌ ಮೊಳಗುವಂತೆ ಮಾಡುವುದಕ್ಕೆ ಚಿಂತನೆ ನಡೆಸಲಾಗಿದೆ. ಜತೆಗೆ, ಅಂಡರ್‌ ಪಾಸ್‌ನಲ್ಲಿ ನೀರು ತುಂಬಿಕೊಂಡಿರುವ ಮಾಹಿತಿ ಬಿಬಿಎಂಪಿ ಕಚೇರಿಗೆ ನೀಡುವ ವ್ಯವಸ್ಥೆ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ.

ವಾಹನ ಚಾಲಕರಿಗೆ ಎಚ್ಚರಿಕೆ:ಅಂಡರ್‌ ಪಾಸ್‌ನಲ್ಲಿ ಸೈರನ್‌ ಮೊಳಗುತ್ತಿದ್ದರೆ, ಅಂಡರ್‌ ಪಾಸ್‌ನಲ್ಲಿ ನೀರು ತುಂಬಿಕೊಂಡಿದೆ. ಅಂಡರ್‌ ಪಾಸ್‌ ಬಳಕೆ ಮಾಡಬಾರದು ಎಂಬ ಸಂದೇಶವನ್ನು ವಾಹನ ಚಾಲಕರಿಗೆ ನೀಡಬಹುದು. ಇದರಿಂದ ಕೆ.ಆರ್‌.ಸರ್ಕಲ್‌ ಅಂಡರ್‌ ಪಾಸ್‌ನ ಸಂಭವಿಸಿದ ದುರ್ಘಟನೆ ಮರುಕಳಿಸದಂತೆ ತಡೆಯಬಹುದು ಎಂಬುದು ಬಿಬಿಎಂಪಿ ಎಂಜಿನಿಯರ್‌ ವಿಭಾಗದ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ: ಸಚಿವ ಎಂ.ಬಿ.ಪಾಟೀಲ್‌

ಅತ್ಯಂತ ಕಡಿಮೆ ವೆಚ್ಚ: ಬಿಬಿಎಂಪಿ ಹಾಗೂ ಕೆಎಸ್‌ಎನ್‌ಡಿಎಂಸಿ ಈಗಾಗಲೇ ರಾಜಕಾಲುವೆಯಲ್ಲಿ ನೀರಿನ ಮಟ್ಟತಿಳಿಯುವ ರಾಜಕಾಲುವೆಯಲ್ಲಿ ಸೆನ್ಸಾರ್‌ ಗಳನ್ನು ಅಳವಡಿಕೆ ಮಾಡಲಾಗಿದೆ. ಆದೇ ಮಾದರಿಯಲ್ಲಿ ಅಂಡರ್‌ ಪಾಸ್‌ಗಳಲ್ಲಿ ಅಳವಡಿಕೆ ಮಾಡಬಹುದು. ನಗರದ ಎಲ್ಲಾ 53 ಅಂಡರ್‌ ಪಾಸ್‌ಗಳಲ್ಲಿ ಸೆನ್ಸಾರ್‌ ಮತ್ತು ಸೈರನ್‌ ಅಳವಡಿಕೆ ಮಾಡುವುದಕ್ಕೆ ನಾಲ್ಕರಿಂದ ಐದು ಕೋಟಿ ರು, ವೆಚ್ಚವಾಗಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.