Asianet Suvarna News Asianet Suvarna News

ಪರಿಶಿಷ್ಟ ಜಾತಿಗೆ ಮಡಿವಾಳ ಸೇರಿಸಲು ಪ್ರಾಮಾಣಿಕ ಪ್ರಯತ್ನ: ಸಂಸದ ಬಿ.ವೈ.ರಾಘವೇಂದ್ರ

ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

Sincere effort to add Madiwala to Scheduled Castes Says BY Raghavendra gvd
Author
First Published Sep 6, 2022, 1:35 AM IST

ಶಿವಮೊಗ್ಗ (ಸೆ.06): ಮಡಿವಾಳ ಸಮಾಜವನ್ನು ಪರಿಶಿಷ್ಟಜಾತಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು. ಇಲ್ಲಿನ ಕುವೆಂಪು ರಂಗಮಂದಿರಲ್ಲಿ ಭಾನುವಾರ ಜಿಲ್ಲಾ ಮಡಿವಾಳ ಸಮಾಜ ವೃತ್ತಿನಿರತರ ಸಂಘದಿಂದ ಹಮ್ಮಿಕೊಂಡಿದ್ದ ಮಡಿವಾಳ ಸಮಾಜ ಬಾಂಧವರ ಜನಜಾಗೃತಿ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಮಡಿವಾಳ ಸಮಾಜ ಮುಂದಿಟ್ಟಿರುವ ಬೇಡಿಕೆಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡುವುದು ಕಷ್ಟ. ಏಕೆಂದರೆ, ಇದು ತುಂಬಾ ಸೂಕ್ಷ್ಮವಾದ ವಿಚಾರ. 

ಜೇನುಗೂಡಿಗೆ ಕಲ್ಲು ಹೊಡೆದಂತೆ. ಇದೆಲ್ಲವೂ ನ್ಯಾಯಾಲಯದ ಮೂಲಕವೇ ಆಗಬೇಕು. ಆದರೂ, ಮಡಿವಾಳ ಸಮಾಜಕ್ಕೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಹೇಳಿದರು. ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಯಲ್ಲಿ ಮಡಿವಾಳ ಮಾಚಿದೇವ ಸಮುದಾಯಕ್ಕೆ ಶಕ್ತಿ ತುಂಬಲು ಸಮುದಾಯ ಭವನ ನಿರ್ಮಾಣಕ್ಕೆ .4 ಕೋಟಿ ಅನುದಾನ ನೀಡಿದ್ದಾರೆ. ಮುಂದಿನ ದಿನದಲ್ಲಿ ಸಮಾಜಕ್ಕೆ ಆಗಬೇಕಿರುವ ಕೆಲಸವನ್ನು ಮಾಡಲು ನಾವು ಸಿದ್ಧ. ಅಷ್ಟೇ ಅಲ್ಲ, ಆನವಟ್ಟಿ, ಸೊರಬ, ಹೊಸನಗರ, ಹೊಳೆಹೊನ್ನೂರು ಸೇರಿದಂತೆ ಅನೇಕ ಕಡೆಗಳಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ ಸಾಕಷ್ಟು  ಹಣವನ್ನು ಬಿಡುಗಡೆ ಮಾಡಲಾಗಿದೆ. 

ಸರ್ಕಾರಿ ಸವಲತ್ತು ಅರ್ಹರಿಗೆ ತಲುಪಿಸಿ: ಕೋಟ ಶ್ರೀನಿವಾಸ ಪೂಜಾರಿ

ಇದರಿಂದ ಮಡಿವಾಳ ಸಮಾಜ ನಮಗೆ ಕೊಟ್ಟಕೊಡುಗೆಯ ಋುಣ ತೀರಿಸಿದ್ದೇವೆ. ಮುಂದೆಯೂ ಮಡಿವಾಳ ಸಮಾಜಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು. 12ನೇ ಶತಮಾನದಲ್ಲಿ ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದ ಸಮಾಜ ಮಡಿವಾಳ ಸಮಾಜ. ಭಕ್ತಿಯ ಮೂಲಕ ಮಹಾದೇವನನ್ನು ಒಲಿಸಿಕೊಂಡು ಸರ್ವರಿಗೂ ಸಮಪಾಲು ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಶರಣರ ಅಗ್ರಗಣ್ಯ ಬಳಗದಲ್ಲಿ ’ಮಡಿವಾಳ ಮಾಚಿದೇವ’ ಪ್ರಕಾಶಮಾನವಾಗಿ ಕಾಣುತ್ತಾರೆ ಎಂದು ಸ್ಮರಿಸಿದರು.

ಸಮಾರಂಭದಲ್ಲಿ ಮಡಿವಾಳ ಸಮಾಜದ ಅಧಿಕಾರಿಗಳಿಗೆ ಸನ್ಮಾನ ಹಾಗೂ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಚಿತ್ರದುರ್ಗ ಮಡಿವಾಳ ಮಾಚಿದೇವ ಮಹಾ ಸಂಸ್ಥಾನದ ಬಸವ ಮಾಚಿದೇವ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್‌, ಮಡಿವಾಳ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಎಂಜಿರಪ್ಪ, ಜಿಲ್ಲಾ ಮಡಿವಾಳ ಸಮಾಜ ವೃತ್ತಿನಿರತರ ಸಂಘದ ಅಧ್ಯಕ್ಷ ಚೌಡಪ್ಪ, ಮೈಸೂರು ಪೇಂಟ್ಸ್‌, ವಾರ್ನಿಷ್‌ ನಿಯಮಿತ ನಿಗಮ ಅಧ್ಯಕ್ಷ ರಘು ಕೌಟಿಲ್ಯ, ಸಮಾಜದ ಮುಖಂಡ ಜಿ.ಡಿ.ಗೋಪಾಲ, ಗೋಪಿಕೃಷ್ಣ ಮತ್ತಿತರರು ಇದ್ದರು.

ಮಡಿವಾಳ ಸಮಾಜ ತುಂಬಾ ಸಣ್ಣ ಸಮಾಜ. ಈ ಸಮಾಜ ಎಲ್ಲಾ ರೀತಿಯಲ್ಲಿ ಅಭಿವೃದ್ಧಿ ಕಾಣಬೇಕಾದರೆ ಮೀಸಲಾತಿ ಸೌಲಭ್ಯ ಬೇಕು. ಅದರ ಜತೆಗೆ ನಮಗೆ ರಾಜಕೀಯ ಶಕ್ತಿ ಬೇಕು. ಸಮಾಜದ ಯಾರಾದರೂ ಒಬ್ಬರು ವಿಧಾನ ಸಭೆಗೆ ಹೋಗುವಂತಹ ವ್ಯವಸ್ಥ ಆಗಬೇಕು. ಅದಕ್ಕಾಗಿ ಮಡಿವಾಳ ಸಮಾಜ ಒಗ್ಗಟ್ಟಾಗಬೇಕಿದೆ. ಸಂಘಟಿತರಾಗುವ ಮೂಲಕ ಮುಂದಿನ ದಿನಗಳಲ್ಲಿ ಒಂದು ಪಕ್ಷದ ಜತೆಗೆ ನಿಲ್ಲಬೇಕಿದೆ
- ರಾಜು ತಲ್ಲೂರು, ಮುಖಂಡ, ಮಡಿವಾಳ ಸಮಾಜ

Shivamogga: ಶಾಸಕ, ಸಂಸದರ ನಿರ್ಲಕ್ಷ್ಯ; 12ರಂದು ರೈತ ಸಂಘಟನೆಗಳಿಂದ ಪ್ರತಿಭಟನೆ

ಸಮಾಜದಲ್ಲಿ ಯಾರು ದುರ್ಬಲರಾಗಿರುತ್ತಾರೋ ಅವರನ್ನು ಬಲಿ ಕೊಡುವ ಕೆಲಸ ಆಗುತ್ತಿದೆ. ಯಾರು ಸಂಘಟಿತರಾಗಿ ಬಲಿಷ್ಟರಾಗಿರುತ್ತೋ ಅವರನ್ನು ಸನ್ಮಾನಿಸುವುದರ ಜತೆಗೆ ಅವರು ಸಾಮಾಜಿಕ, ರಾಜಕೀಯ ಸ್ಥಾನಮಾನಗಳು ಹುಡುಕಿಕೊಂಡು ಬರುತ್ತವೆ. ಆದ್ದರಿಂದ ಮಡಿವಾಳ ಸಮಾಜ ಸಂಘಟಿತರಾಗುವ ಮೂಲಕವೇ ತನಗೆ ಸಿಗಬೇಕಾದ ಸಾಮಾಜಿಕ, ರಾಜಕೀಯ ಸ್ಥಾನ ಮಾನ ದಕ್ಕಿಸಿಕೊಳ್ಳಬೇಕಿದೆ.
- ಆಯನೂರು ಮಂಜುನಾಥ್‌, ಸದಸ್ಯ, ವಿಧಾನ ಪರಿಷತ್ತು

Follow Us:
Download App:
  • android
  • ios