Asianet Suvarna News Asianet Suvarna News

ಧಾರವಾಡ: 107 ವರ್ಷದ ಜಾತ್ರೆಗೆ ಮಹಾಮಾರಿ ಕೊರೋನಾ ಬ್ರೇಕ್‌

ಕೊರೋನಾ ಕಾರಣದಿಂದ ಈ ಬಾರಿ ಅತ್ಯಂತ ಸರಳ ರೀತಿಯಲ್ಲಿ ದಸರಾ ಮಹೋತ್ಸವ ಆಚರಣೆ| ಕೇವಲ ಸಾಂಪ್ರದಾಯಿಕ ಪೂಜೆಗೆ ಉತ್ಸವ ಸೀಮಿತವಾದ ದಸರಾ| ಭಕ್ತಾದಿಗಳಿಗೆ ಹೊರಗಿನಿಂದ ಮಾತ್ರವೇ ದರ್ಶನಕ್ಕೆ ಅವಕಾಶ| 

Simple Lakshminarayana Fair Will be Held at Dharwad Due to Coronavirus grg
Author
Bengaluru, First Published Oct 18, 2020, 11:15 AM IST

ಧಾರವಾಡ(ಅ.18): ನಗರದ ಶ್ರೀ ಲಕ್ಷ್ಮಿನಾರಾಯಣ ಜಾತ್ರಾ ಮಹೋತ್ಸವ ಈ ಬಾರಿ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ. ಈ ಮೂಲಕ 107 ವರ್ಷದಿಂದ ಅದ್ಧೂರಿಯಿಂದ ನಡೆದುಕೊಂಡು ಬರುತ್ತಿದ್ದ ಐತಿಹಾಸಿಕ ಜಾತ್ರೆ ಈ ಸಲ ಬರೀ ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಲಿದೆ.

107 ವರ್ಷಗಳಿಂದ ಇಲ್ಲಿನ ರವಿವಾರ ಪೇಟೆಯ ಶ್ರೀಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದ ದಸರಾ ಮಹೋತ್ಸವವನ್ನು ಕೊರೋನಾ ಕಾರಣದಿಂದ ಈ ಬಾರಿ ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ. ಕೇವಲ ಸಾಂಪ್ರದಾಯಿಕ ಪೂಜೆಗೆ ಉತ್ಸವ ಸೀಮಿತವಾಗಲಿದೆ. ಒಂಬತ್ತು ದಿನಗಳ ಕಾಲ ವಿಷ್ಣುವಿನ 9 ಅವತಾರಗಳಿಗೆ ಜೀವ ತುಂಬುವ ಕಾರ್ಯ ನಡೆಯಲಿದೆ. ಭಕ್ತಾದಿಗಳಿಗೆ ಹೊರಗಿನಿಂದ ಮಾತ್ರವೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಧಾರವಾಡದ ಮಟ್ಟಿಗೆ ಅತಿ ದೊಡ್ಡ ಜಾತ್ರೆ ಎನಿಸಿದ್ದ ಶ್ರೀ ಲಕ್ಷ್ಮಿ ನಾರಾಯಣ ಜಾತ್ರೆ ಕೇವಲ 9 ದಿನಕ್ಕೆ ಸೀಮತವಲ್ಲ, ಬದಲಿಗೆ ಒಂದು ತಿಂಗಳ ಜಾತ್ರೆ. ದೇವಾಲಯಕ್ಕೆ ಸಾಂಪ್ರದಾಯಿಕ ಶೈಲಿಯ ಅಲಂಕಾರ 9 ದಿನಕ್ಕೆ ಸೀಮಿತವಾಗಿ ಹತ್ತನೇ ದಿನದ ದಶಮಿಗೆ ಮುಗಿದರೂ ಜಾತ್ರೆಗೆ ಬಂದ ಮಾರಾಟಗಾರರು ಬರೋಬ್ಬರಿ ಒಂದು ತಿಂಗಳ ಠಿಕಾಣಿ ಹೂಡುವುದು ವಾಡಿಕೆ ಎಂಬಂತಾಗಿತ್ತು. ಪ್ರತಿ ದಿನ ಸಂಜೆ ಜಾತ್ರೆಗೆ ಲಗ್ಗೆ ಇಡುತ್ತಿದ್ದ ಧಾರವಾಡದ ಹೆಂಗಳೆಯರು ಮನೆಗೆ ಬೇಕಾಗುವ ಅಡುಗೆ, ಅಲಂಕಾರಿಕ ವಸ್ತುಗಳು, ನಾನಾ ಬಗೆಯ ಬಟ್ಟೆ, ಸೇರಿದಂತೆ ವಿವಿಧ ಬಗೆಯ ಸಾಮಗ್ರಿಗಳನ್ನು ಇಲ್ಲಿಂದ ಖರೀದಿಸುವ ಮೂಲಕ ಜಾತ್ರೆಯಲ್ಲಿ ಸಡಗರದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಅದಾವುದು ಇಲ್ಲವಾಗಿದೆ.

ಕೊರೋನಾ ಕಾಟ: ಈ ಬಾರಿ ಪೂಜೆಗಷ್ಟೇ ಧಾರವಾಡ ದಸರಾ ಸೀಮಿತ..!

ಪ್ರತಿ ವರ್ಷ ಶ್ರೀ ಲಕ್ಷ್ಮಿ ನಾರಾಯಣ ಜಾತ್ರೆಯಲ್ಲಿ ಪಾಲ್ಗೊಳ್ಳುವುದೆ ನಮಗೊಂದು ಸಡಗರವಾಗಿತ್ತು. ಆದರೆ ಈ ಬಾರಿ ಕೊರೋನಾದಿಂದ ಅದಕ್ಕೆ ಅವಕಾಶವಿಲ್ಲ. ಮುಂದಿನ ವರ್ಷ ಕರೋನಾ ತೊಲಗಿ ಮತ್ತೆ ಜಾತ್ರೆ ಕಳೆಗಟ್ಟುವಂತಾಗಲಿ ಎಂದು ಅಕ್ಕಮಹಾದೇವಿ ಯರಗಂಬಳಿಮಠ ಅವರು ತಿಳಿಸಿದ್ದಾರೆ.

ನಾವು ಪ್ರತಿವರ್ಷ ಒಂದು ತಿಂಗಳ ಕಾಲ ಜಾತ್ರೆಯಲ್ಲಿ ಅಂಗಡಿ ಹಾಕಿ ವ್ಯಾಪಾರ ಮಾಡುತ್ತಿದ್ದೇವು. ಆದರೆ ಈ ಬಾರಿ ಅದಕ್ಕೆ ಅವಕಾಶವಿಲ್ಲ. ಲಾಕ್ಡೌನ್‌ನಿಂದಾಗಿ ವ್ಯಾಪಾರ ಹಾಳಾಗಿದ್ದು ದಿಕ್ಕೆ ತೋಚುತ್ತಿಲ್ಲ ಎಂದು ಮಂಜುನಾಥ ವ್ಯಾಪಾರಸ್ಥ ಅವರು ಹೇಳಿದ್ದಾರೆ. 

ಈ ವರ್ಷ ಜಾತ್ರೆಯಲ್ಲಿ ಅಂಗಡಿ ಹಾಕಲು ಅವಕಾಶ ಇಲ್ಲ. ಕೇವಲ ಸಾಂಪ್ರದಾಯಿಕ ಪೂಜಾ ಕಾರ್ಯಕ್ರಮ ನಡೆಯಲಿದೆ. ಕೊರೋನಾ ನಿಯಂತ್ರಣ ಅನಿವಾರ್ಯತೆ ಇರುವುದರಿಂದ ಸರ್ಕಾರದ ಆದೇಶ ಪಾಲಿಸಲಾಗುತ್ತಿದೆ ಎಂದು ದೇವಸ್ಥಾನ ಕಮಿಟಿಯ ಮುಖ್ಯಸ್ಥ ಅಮರ ಟಿಕಾರೆ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios