ರಾಮನಗರ-ಚನ್ನಪಟ್ಟಣ ರೈತರಿಗೆ ಭರ್ಜರಿ ಕೊಡುಗೆ
ರಾಮನಗರ ಹಾಗೂ ಚನ್ನಪಟ್ಟಣ ರೈತರಿಗೆ ಸಚಿವ ನಾರಾಯಣ ಗೌಡ ಭರ್ಜರಿ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.
ಮಂಡ್ಯ (ನ.02): ರೇಷ್ಮೆ ಉದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ರಾಮನಗರ- ಚನ್ನಪಟ್ಟಣ ಮಧ್ಯೆ ಅಂತಾರಾಷ್ಟ್ರೀಯ ಮಾರುಕಟ್ಟೆನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಪತ್ರಕರ್ತರ ಸಮ್ಮೇಳನ. ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ, ಅಭಿನಂದನೆ, ಉಸ್ತುವಾರಿ ಸಚಿವರೊಂದಿಗೆ ಸಂವಾದ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ಡೌನ್ನಿಂದ ರೈತರು ಸೇರಿದಂತೆ ಎಲ್ಲ ವರ್ಗದ ಜನತೆ ಸಂಕಷ್ಟಅನುಭವಿಸಿದರು. ತರಕಾರಿ ಬೆಳೆಗಾರರು ಸಹ ತಾವು ಬೆಳೆದ ಉತ್ಪನ್ನ ಮಾರಾಟ ಮಾಡಲಾಗದೆ ತೊಂದರೆ ಅನುಭವಿಸಿದರು. ಇದನ್ನು ಮನಗಂಡು ತರಕಾರಿಗಳನ್ನು ರಫ್ತು ಮಾಡಲು ಯೋಜನೆ ರೂಪಿಸಲಾಯಿತು. ಅಂದು ಶೇ.5.5ರಷ್ಟುತರಕಾರಿಗಳನ್ನು ಹೊರಗೆ ಕಳುಹಿಸಲಾಗುತ್ತಿತ್ತು. ಇದು ಮಾಧ್ಯಮಗಳಿಂದ ಸಾಧ್ಯವಾಯಿತು ಎಂದರು.
ಅಡಕೆ ಬೆಳೆಗಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್
ಇದೇ ಮಾದರಿಯಲ್ಲಿ ರೇಷ್ಮೆ ಬೆಳೆಗಾರರು ತೊಂದರೆ ಅನುಭವಿಸುತ್ತಿರುವುದನ್ನು ಕಂಡು ರೇಷ್ಮೆಗೂ ಹೆಚ್ಚಿನ ಉತ್ತೇಜನ ನೀಡುವ ಸಲುವಾಗಿ ಯೋಜನೆ ರೂಪಿಸಲಾಗಿದೆ. ಮೈಸೂರು ರೇಷ್ಮೆ ಸೀರೆಗೆ ಎಲ್ಲೆಡೆ ಹೆಚ್ಚಿನ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದರು.
ಪತ್ರಕರ್ತರಿಗೆ ವಿಮೆ:
ಕೋವಿಡ್-19 ಸಂಕಷ್ಟಸೇರಿದಂತೆ ಹಲವಾರು ಸಮಸ್ಯೆಗಳು ಬಂದರೂ ದಿಟ್ಟತನದಿಂದ ಪತ್ರಕರ್ತರು ಕೆಲಸ ಮಾಡುತ್ತಾರೆ. ಇತ್ತೀಚೆಗೆ ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ವೇಳೆಯೂ ಸಹ ಕೆಳಗೆ ನಿಂತು ಫೋಟೋ, ವೀಡಿಯೋ ಚಿತ್ರೀಕರಣ ಮಾಡುವಂತಹ ಸಾಹಸಕ್ಕೆ ಕೈಹಾಕುತ್ತಾರೆ. ಒಂದು ವೇಳೆ ಅನಾಹುತಗಳಾದಲ್ಲಿ ಅಂತಹ ಪತ್ರಕರ್ತರ ಕುಟುಂಬಗಳು ಬೀದಿ ಪಾಲಾಗುತ್ತವೆ. ಇದನ್ನು ಮನಗಂಡು ಪತ್ರಕರ್ತರಿಗೆ ರಾಷ್ಟ್ರೀಯ ವಿಮಾ ಯೋಜನೆ ರೂಪಿಸಲು ಸರ್ಕಾರದ ಜೊತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ಈ ಯೋಜನೆಯಿಂದಾಗಿ ಪತ್ರಕರ್ತರ ಕುಟುಂಬಕ್ಕೂ ಶಕ್ತಿ ದೊರೆಯುತ್ತದೆ. ಜೊತೆಗೆ ಅಂತಹ ಕುಟುಂಬಗಳಿಗೆ ಸರ್ಕಾರಿ ಕೆಲಸ ಇಲ್ಲವೇ ಬೇರೆ ವ್ಯವಸ್ಥೆ ಮಾಡುವ ಬಗ್ಗೆಯೂ ಚರ್ಚಿಸಲಾಗುವುದು ಎಂದರು.
ಶೀಘ್ರವೇ ಮಹಾರಾಷ್ಟ್ರದಲ್ಲೂ ದೊಡ್ಡ ಸ್ಥಾನ:
ಬದುಕಿಗಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದೆ. ಮಹಾರಾಷ್ಟ್ರದಲ್ಲಿ ಕನ್ನಡಿಗರನ್ನು ಒಟ್ಟುಗೂಡಿಸಿ ಅಲ್ಲೂ ರಾಜ್ಯೋತ್ಸವ ಸೇರಿದಂತೆ ತಿಂಗಳಿಗೊಮ್ಮೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ನಂತರ ಕೆ.ಆರ್.ಪೇಟೆ ತಾಲೂಕಿಗೆ ಆಗಮಿಸಿ ಜನರ ಸೇವೆ ಮಾಡಿದ್ದೆ. ಮೂರು ಬಾರಿ ಶಾಸಕನಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿದ್ದೇನೆ. ನನ್ನ ಸಮಾಜ ಸೇವೆ ಗಮನಿಸಿ ಮಹಾರಾಷ್ಟ್ರದಲ್ಲೂ ನನಗೆ ದೊಡ್ಡ ಸ್ಥಾನ ದೊರೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಧ್ವನಿ ಇಲ್ಲದವರಿಗೆ ಧ್ವನಿಯಾಗಿ:
ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾತನಾಡಿ, ಪತ್ರಕರ್ತರು ಸಮಾಜದ ಧ್ವನಿಯಾಗಿ ಕೆಲಸ ಮಾಡಬೇಕು. ದನಿ ಇಲ್ಲದವರಿಗೆ ಧ್ವನಿ ನೀಡಬೇಕು. ಸಂವೇದನಾಶೀಲತೆ, ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು.
ನಾಲ್ಕನೇ ಅಂಗವಾಗಿರುವ ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿದೆ. ಚುನಾವಣೆಗಳು ಶಾಂತಿಯುತವಾಗಿ ನಡೆಯುವಂತಾಗಲು ಮಾಧ್ಯಮದವರ ಕಾರ್ಯವೈಖರಿಯೇ ಕಾರಣ ಎಂದರು.
ಮಾಧ್ಯಮದವರಿಗೂ ಕಷ್ಟ, ದುಃಖ, ದುಮ್ಮಾನಗಳನ್ನು ಎದುರಿಸುತ್ತಿದ್ದಾರೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟಸಂದೇಶಗಳನ್ನು ರವಾನಿಸಿ ಸಮಾಜವನ್ನು ತಪ್ಪು ದಾರಿಗೆ ತಳ್ಳುತ್ತಿರುವುದು ಸಹ ಕಂಡುಬಂದಿದೆ. ಇಂತಹ ಸಂದರ್ಭದಲ್ಲಿ ಮಾಧ್ಯಮದವರ ಪಾತ್ರ ಹೆಚ್ಚಿದೆ. ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಪರಶುರಾಮ ಮಾತನಾಡಿ, ಅಭದ್ರತೆಗಳ ನಡುವೆ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಅವರಿಗೂ ಭದ್ರತೆ ಒದಗಿಸುವುದು ಸಮಾಜದ ಕರ್ತವ್ಯ. ಈ ಬಗ್ಗೆ ಹಲವಾರು ದಿನಗಳಿಂದಲೂ ಚರ್ಚೆ ನಡೆಯುತ್ತಿದ್ದು ಅದಕ್ಕೆ ಕಾನೂನಿನ ರೂಪ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಕೆ.ಸಿ. ಮಂಜುನಾಥ್ ಅವರು ನೂತನ ಅಧ್ಯಕ್ಷ ನವೀನ್ ಚಿಕ್ಕಮಂಡ್ಯ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಮಾಜಿ ಅಧ್ಯಕ್ಷರನ್ನು ಅಭಿನಂದಿಸಲಾಯಿತು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮತ್ತೀಕೆರೆ ಜಯರಾಂ ಅಧ್ಯಕ್ಷತೆ ವಹಿಸಿದ್ದರು. ಮುಡಾ ಅಧ್ಯಕ್ಷ ಕೆ. ಶ್ರೀನಿವಾಸ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್, ಪತ್ರಕರ್ತರಾದ ಅಣ್ಣೂರು ಲಕ್ಷ್ಮಣ್, ಪಿ.ಜೆ. ಚೈತನ್ಯಕುಮಾರ್, ಕೆ.ಎನ್. ರವಿ, ಕೃಷ್ಣ ಸ್ವರ್ಣಸಂದ್ರ, ಸೋಮಶೇಖರ್ ಕೆರಗೋಡು, ಲಿಂಗರಾಜು ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.