ಸಾರಿಗೆ ಸಂಸ್ಥೆಯ ಮುಷ್ಕರದ ಹಿಂದೆ ಯಾರ ಕೈವಾಡವೂ ಇಲ್ಲ| ರೈತ ಸಂಘದವರ ಹೊರತಾಗಿ ಯಾವ ಪಕ್ಷ ಅಥವಾ ಸಂಘಟನೆಗಳ ಕೈವಾಡವೂ ಇಲ್ಲ| ಸಾರಿಗೆ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಕೆಲ ದಿನಗಳ ಹಿಂದೆಯೂ ಮುಷ್ಕರ ನಡೆಸಿದ್ದರು| ಬೇಡಿಕೆ ಈಡೇರಿಸದ ಕಾರಣ ಈಗ ಮತ್ತೆ ಮುಷ್ಕರ ಆರಂಭಿಸಿದ್ದಾರೆ: ಸಿದ್ದರಾಮಯ್ಯ| 

ಬೀದರ್‌(ಏ.08): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ ಕಟೀಲ್‌ ಅಸಮರ್ಥ ಅಧ್ಯಕ್ಷರಾಗಿದ್ದು, ಸರ್ಕಾರ, ಸಿಎಂ ವಿರುದ್ಧವೇ ಹೇಳಿಕೆ ಕೊಡುತ್ತಿರುವ ಸ್ವಪಕ್ಷೀಯರ ವಿರುದ್ಧ ಕ್ರಮ ಕೈಗೊಳ್ಳಲಾಗದೆ ಕೈಕಟ್ಟಿ ಕುಳಿತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

Add Asianetnews Kannada as a Preferred SourcegooglePreferred

ಬುಧವಾರ ಮುಡಬಿ ಗ್ರಾಮದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರದಲ್ಲಿ ಮಾತನಾಡಿದ ಅವರು, ಸಚಿವ ಈಶ್ವರಪ್ಪ ಹಾಗೂ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ ಬಹಿರಂಗವಾಗಿಯೇ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಅವರ ವಿರುದ್ಧ ಅಧ್ಯಕ್ಷ ಕಟೀಲ್‌ಗೆ ಮಾತೆತ್ತಲೂ ಆಗುತ್ತಿಲ್ಲ. ಮೇ ನಲ್ಲಿ ಮುಖ್ಯಮಂತ್ರಿ ಮನೆಗೆ ಹೋಗ್ತಾರೆ ಅಂತ ಯತ್ನಾಳ ಬರಂಗವಾಗಿಯೇ ಹೇಳುತ್ತಿದ್ದಾರೆ. ಇಂಥವರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಾಗದೆ ಕೈಕಟ್ಟಿಕುಳಿತಿರುವ ಕಟೀಲ್‌ ಅಸಮರ್ಥ ಅಧ್ಯಕ್ಷ ಎಂದು ಟೀಕಿಸಿದ್ದಾರೆ.

'ಕೋಟಿ ಕೋಟಿ ಹಣ ಪಡೆದು ಕುಮಾರಸ್ವಾಮಿ ಬಿಜೆಪಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ'

ಯಾವತ್ತೂ ಅಹಿಂದ ಪರ:

ನಾನು ಮತ್ತು ಡಿಕೆ ಶಿವಕುಮಾರ ಇಬ್ಬರೂ ಕೂಡಿಕೊಂಡೇ ಉಪ ಚುನಾವಣೆ ಪ್ರಚಾರ ನಡೆಸುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವು ಯಾವತ್ತೂ ಅಹಿಂದ ಪರವಾಗಿಯೇ ಇದ್ದೇವೆ. ಅಹಿಂದ ಪರವಾಗಿ ಕೆಲಸ ಮಾಡುತ್ತೇವೆ. ಅಹಿಂದ ಜನರ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾಲದು ಎಂದು ಬಿಜೆಪಿ ಅಧ್ಯಕ್ಷ ಕಟೀಲ್‌ಗೆ ಟಾಂಗ್‌ ನೀಡಿದ್ದಾರೆ.

ಯಾರ ಕೈವಾಡವೂ ಇಲ್ಲ:

ಸಾರಿಗೆ ಸಂಸ್ಥೆಯ ಮುಷ್ಕರದ ಹಿಂದೆ ಯಾರ ಕೈವಾಡವೂ ಇಲ್ಲ. ರೈತ ಸಂಘದವರ ಹೊರತಾಗಿ ಯಾವ ಪಕ್ಷ ಅಥವಾ ಸಂಘಟನೆಗಳ ಕೈವಾಡವೂ ಇಲ್ಲ. ಅವರು ತಮ್ಮ ಬೇಡಿಕೆ ಈಡೇರಿಕೆಗಾಗಿ ಕೆಲ ದಿನಗಳ ಹಿಂದೆಯೂ ಮುಷ್ಕರ ನಡೆಸಿದ್ದರು. ಬೇಡಿಕೆ ಈಡೇರಿಸದ ಕಾರಣ ಈಗ ಮತ್ತೆ ಮುಷ್ಕರ ಆರಂಭಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ರಾಜಶೇಖರ ಪಾಟೀಲ್‌, ರಹೀಮ್‌ಖಾನ್‌, ವಿಜಯಸಿಂಗ್‌, ಪ್ರಿಯಾಂಕ ಖರ್ಗೆ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕಾಂಗ್ರೆಸ್‌ ಅಭ್ಯರ್ಥಿ ಮಾಲಾ ಇದ್ದರು.