ಶಿಮುಲ್‌ನಿಂದ ಮುಖ್ಯಮಂತ್ರಿಗಳ ಕೊರೋನಾ ಪರಿಹಾರ ನಿ​ಧಿಗೆ ನೀಡಲಾದ 1 ಕೋಟಿ ರು. ಚೆಕ್‌|  ಸ್ವತಂತ್ರ ಸಂಸ್ಥೆಯೊಂದು ಈ ಪ್ರಮಾಣದ ಮೊತ್ತ ನೀಡಿ ಸರ್ಕಾರದ ನೆರವಿಗೆ ಧಾವಿಸಿರುವುದು, ಸರ್ಕಾರ ಕೈಗೊಳ್ಳುವ ಜನಪರ ಕಾರ್ಯಗಳ ಜೊತೆಯಾಗಿರುವುದು ಸಂತಸ ತಂದಿದೆ: ಈಶ್ವರಪ್ಪ|

ಶಿವಮೊಗ್ಗ(ಏ.23): ಕೊರೋನಾ ಲಾಕ್‌ಡೌನ್‌ ಕಾರಣ ಸಾರ್ವಜನಿಕರ ಜನಜೀವನ ಅಸ್ತವ್ಯಸ್ತವಾಗಿದೆ. ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಮಹತ್ವದ ತುರ್ತು ಕ್ರಮಗಳನ್ನು ಕೈಗೊಂಡಿರುವುದು ಸಮಾಧಾನಕರ ಸಂಗತಿ ಎಂದು ಪಂಚಾಯತ್‌ ರಾಜ್‌, ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ. 

Add Asianetnews Kannada as a Preferred SourcegooglePreferred

ಬುಧವಾರ ಜಿಲ್ಲಾ​ಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶಿಮುಲ್‌ನಿಂದ ಮುಖ್ಯಮಂತ್ರಿಗಳ ಕೊರೋನಾ ಪರಿಹಾರ ನಿ​ಧಿಗೆ ನೀಡಲಾದ 1 ಕೋಟಿ ರು. ಚೆಕ್‌ ಜಿಲ್ಲಾಧಿ​ಕಾರಿಗಳ ಮೂಲಕ ಸರ್ಕಾರಕ್ಕೆ ಸಮರ್ಪಿಸಿ ಮಾತನಾಡಿದ ಅವರು, ಸ್ವತಂತ್ರ ಸಂಸ್ಥೆಯೊಂದು ಈ ಪ್ರಮಾಣದ ಮೊತ್ತ ನೀಡಿ ಸರ್ಕಾರದ ನೆರವಿಗೆ ಧಾವಿಸಿರುವುದು, ಸರ್ಕಾರ ಕೈಗೊಳ್ಳುವ ಜನಪರ ಕಾರ್ಯಗಳ ಜೊತೆಯಾಗಿರುವುದು ಸಂತಸ ತಂದಿದೆ ಎಂದರು.

ತಿಂಗಳ ಸಂಪಾದನೆ ಬಡವರ ಊಟಕ್ಕೆ ನೀಡಿದ ವಾಚ್‌ಮನ್

ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸ್ಥಳೀಯ ದಾನಿಗಳು, ಉದ್ಯೋಗದಾತರು, ಕೈಗಾರಿಕೋದ್ಯಮಿಗಳು ಹಣಕಾಸನ್ನು ಸಚಿವರು, ಸಂಸದರು ಹಾಗೂ ಜಿಲ್ಲಾ​ಕಾರಿಗಳ ಮೂಲಕ ಸರ್ಕಾರಕ್ಕೆ ನೀಡುತ್ತಿದ್ದಾರೆ. ಈ ಕಾರ್ಯ ಇನ್ನಷ್ಟು ಚುರುಕಾಗಬೇಕು ಎಂದು ತಿಳಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸರ್ಕಾರ ಕೈಗೊಳ್ಳುವ ಉತ್ತಮ ಕೆಲಸವನ್ನು ಗಮನಿಸಿ, ಶಿಮುಲ್‌ ಸಂಸ್ಥೆಯ ಪದಾ​ಧಿಕಾರಿಗಳು ಒಮ್ಮತ ನಿರ್ಣಯ ಕೈಗೊಂಡು ಕೊರೋನಾ ನಿಧಿಗೆ ದೊಡ್ಡ ಮೊತ್ತದ ಹಣ ನೀಡುತ್ತಿರುವುದು ಅತ್ಯಂತ ಪವಿತ್ರ ಕಾರ್ಯವಾಗಿದೆ ಎಂದರು.

ಶಿಮುಲ್‌ ಸಂಸ್ಥೆಯು ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿದ್ದು, ಪ್ರತಿ ಜಿಲ್ಲೆಯಲ್ಲಿ ಸ್ವತಂತ್ರ ಘಟಕಗಳನ್ನು ಆರಂಭಿಸಲು ಅಗತ್ಯ ತಯಾರಿ ಕೈಗೊಂಡಿರುವುದು ಸಂಸ್ಥೆಯ ಬೆಳವಣಿಗೆಯ ದೃಷ್ಠಿಯಿಂದ ಉತ್ತಮ ಕಾರ್ಯವಾಗಿದೆ. ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಶಿಮುಲ್‌ ಅಧ್ಯಕ್ಷ ಡಿ.ಆನಂದ ಮಾತನಾಡಿ, ಕೊರೋನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್‌ ಘೋಷಣೆಗೊಂಡ ದಿನದಿಂದ ಹಾಲಿನ ಮಾರಾಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಸಂಸ್ಥೆಯ ಉತ್ಪನ್ನಗಳ ಮಾರಾಟ ತೀವ್ರಗತಿಯಲ್ಲಿ ಕುಸಿತಗೊಂಡ ಕಾರಣ ಹೈನೋದ್ಯಮಿಗಳಿಂದ ಹಾಲಿನ ಖರೀದಿಯನ್ನು ತಾತ್ಕಾಲಿಕ ಅವ​ಧಿಗೆ ಸ್ಥಗಿತಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮತ್ತು ರಾಜ್ಯ ಹಾಲು ಮಹಾಮಂಡಳದ ಅಧ್ಯಕ್ಷ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದರಿಂದಾಗಿ ಏಪ್ರಿಲ್‌ 30ರವರೆಗೆ ಹಾಲನ್ನು ರೈತರಿಂದ ಖರೀದಿಸಲು ಅನುಮತಿ ನೀಡಿದರು. ಖರೀದಿಸಿದ ಹಾಲನ್ನು ಜನಸಾಮಾನ್ಯರಿಗೆ ಉಚಿತವಾಗಿ ವಿತರಿಸಲು ಮುಖ್ಯಮಂತ್ರಿ ಆದೇಶ ಹೊರಡಿಸಿದರು. ಇದರಿಂದಾಗಿ ಹೈನೋದ್ಯಮಿಗಳು ಹಾಗೂ ಶಿಮುಲ್‌ ನಷ್ಟದಿಂದ ಉಳಿಯಲು ಸಾಧ್ಯವಾಯಿತು. ಈ ಕ್ರಮಕ್ಕೆ ಮುಂದಾದ ಮುಖ್ಯಮಂತ್ರಿಗಳು ಅಭಿನಂದನಾರ್ಹರು ಎಂದರು.

ಜಿಲ್ಲಾ​ಧಿಕಾರಿ ಕೆ.ಬಿ. ಶಿವಕುಮಾರ್‌, ಶಿಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಬಸವರಾಜ್‌, ಎಚ್‌.ಕೆ.ಬಸಪ್ಪ, ಎಂ.ಸಿದ್ಧಲಿಂಗಪ್ಪ ನಿಂಬೇಗೊಂದಿ, ಸಿ.ವೀರಭದ್ರಬಾಬು ಸೇರಿದಂತೆ ಶಿಮುಲ್‌ನ ಪದಾ​ಧಿಕಾರಿಗಳು ಉಪಸ್ಥಿತರಿದ್ದರು.