ಅ. 9 ರಂದು ನಾವು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ಆದ್ದರಿಂದ ಹೆಚ್ಚಿನ ಸಂಖ್ಯೆ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ರೈತರಿಗೆ ಕರೆ ನೀಡಿದ ರಾಜು ಶೆಟ್ಟಿ. 

ಕಾಗವಾಡ(ಅ.09): ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಕ್ಕರೆ ಲಾಭಿಗೆ ಮನಿದು, ರೈತರ ಹಿತಾಸಕ್ತಿಯನ್ನು ಬಲಿ ಕೊಡುತ್ತಿವೆ ಎಂದು ಮಾಜಿ ಸಂಸದ ಹಾಗೂ ಸ್ವಾಭಿಮಾನಿ ರೈತ ಸಂಘಟನೆಯ ಸಂಸ್ಥಾಪಕರಾದ ರಾಜು ಶೆಟ್ಟಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಗುಡುಗಿದರು.

Add Asianetnews Kannada as a Preferred SourcegooglePreferred

ಅವರು ಕಾಗವಾಡ ತಾಲೂಕಿನ ಶಿರಗುಪ್ಪಿಯಲ್ಲಿ ನಿನ್ನೆ ಅ.07 ರಂದು ಸಂಜೆ ನಡೆದ ರೈತರ ಬೃಹತ್ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಜವಾಬ್ದಾರಿಯಿಂದಾಗಿ ಬೆರಳೆನಿಕೆಯಷ್ಟು ಸಕ್ಕರೆ ಕಾರ್ಖಾನೆಗಳು ಸಾವಿರಾರು ಕಬ್ಬು ಬೆಳಗಾರ ರೈತರನ್ನು ನಿಯಂತ್ರಿಸುತ್ತಿವೆ. ಆದ್ದರಿಂದ ರೈತರು ಒಕ್ಕಟ್ಟಾಗಿ ಸಕ್ಕರೆ ಕಾರ್ಖಾನೆಗಳನ್ನು ನಿಯಂತ್ರಿಸುವಂತಾಗಬೇಕು. ರೈತರು ಬೆಳೆದ ಕಬ್ಬಿಗೆ ವೈಜ್ಞಾನಿಕ ಬೆಲೆ ದೊರೆಯುವಂತಾಗಬೇಕು. ಅದಕ್ಕಾಗಿ ಅ. 9 ರಂದು ನಾವು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ಆದ್ದರಿಂದ ಹೆಚ್ಚಿನ ಸಂಖ್ಯೆ ರೈತರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ರೈತರಿಗೆ ಕರೆ ನೀಡಿದರು.

ಬಿಡುಗಡೆಯಾಗದ ಅನುದಾನ: ಸಂಕಷ್ಟದಲ್ಲಿ ಗುತ್ತಿಗೆದಾರರು

ರೈತ ನಾಯಕ ಶಶಿಕಾಂತ ಪಡಸಲಗಿ ಗುರುಜಿ ಮಾತನಾಡಿ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ತೂಕದಲ್ಲಿ ನಿರಂತರವಾಗಿ ಮೋಸವಾಗುತ್ತಾ ಬರುತ್ತಿದೆ. ಇದನ್ನು ತಡೆಗಟ್ಟಬೇಕೆಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ನಾನು ಸುರೇಶ ಚೌಗುಲಾ ಸೇರಿದಂತೆ ಹಲವರು ಕೂಡಿಕೊಂಡು ಮುರು ಬಾರಿ ಮನವಿ ಕೊಟ್ಟರು ಪ್ರಯೋಜನವಾಗಲಿಲ್ಲ. ಬಸವರಾಜ ಬೊಮ್ಮಾಯಿಯವರು ದಮ್ಮು ತಾಕತ್ತಿನ ಬಗ್ಗೆ ಮಾತನಾಡುತ್ತಿದ್ರು, ರೈತರಿಗೆ ಆಗುವ ಮೋಸದ ಬಗ್ಗೆ ಮಾತನಾಡಲಿಲ್ಲ. ಅವರು ಈಗ ಯಾವ ಸ್ಥಾನಕ್ಕೆ ಹೋಗಿದ್ದಾರೆ ನೋಡಿ ಎಂದರು. ಕರ್ನಾಟಕದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಮಾಡುತ್ತಿರುವ ಮೋಸದ ಬಗ್ಗೆ ಎಚ್ಚೆತ್ತುಕೊಳ್ಳಬೇಕೆಂದರು. ಮಹಾರಾಷ್ಟ್ರದ ಮಾದರಿಯಲ್ಲಿ ನಮ್ಮಲ್ಲೂ ಹೋರಾಟಗಳು ಆಗಬೇಕು. ಆದರೆ ಸೌಆರ್ಥ ರಾಜಕಾರಣಿಗಳಿಂದ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಾರೆ. ರೈತರು ಜಾಗೃತರಾಗಿ ನಮಗೆ ಆಗುತ್ತಿರುವ ಅನ್ಯಾಯದ ವಿರುದ್ದ ದ್ವಣಿ ಎತ್ತುವಂತವರಾಗಬೇಕು. ಅದಕ್ಕಾಗಿ ಎಲ್ಲರು ಸಂಘಟಿತರಾಗಿ ರೈತರ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಶಶಿಕಾಂತ ಪಡಸಲಗಿ ಗುರುಜೀ ಹೇಳಿದರು.

ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಸುಭಾಶ ಶಿರಗೂರೆ, ಶಶಿಕಾಂತ ಪಡಸಲಗಿ ಗುರುಜಿ, ರಾಜೇಂದ್ರ ಗಡೆನ್ನವರ, ಈರಗೌಡಾ ಪಾಟೀಲ, ಸುರೇಶ ಚೌಗುಲೆ, ವೀರಭದ್ರ ಕಟಗೇರಿ ಮುಂತಾದವರು ಮಾತನಾಡಿದರು. ಕಾರ್ಯಕ್ರಮವನ್ನು ರೈತ ಗೀತೆಯೊಂದಿಗೆ, ಸಸಿಗೆ ನೀರು ಹಾಕಿ ಚಾಲನೆ ನೀಡಲಾಯಿತು. ವಿಜಯ ಅಕಿವಾಟೆ ಸ್ವಾಗತಿಸಿದರು. ಪ್ರಕಾಶ ಹೇಮಗೀರೆ ನಿರೂಪಿಸಿದರು.ಈ ಸಮಯದಲ್ಲಿ ಶಿರಗುಪ್ಪಿ ಗ್ರಾ.ಪಂ. ಉಪಾಧ್ಯಕ್ಷ ರಾಮಗೌಡಾ ಪಾಟೀಲ, ಎನ್.ಐ. ಖೋತ ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಅನೇಕ ರೈತ ಮುಖಂಡರು, ರೈತರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.