ಈಗ ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಸಿಗುತ್ತಿಲ್ಲ ಬಸ್‌ ಬಸ್‌ನಲ್ಲಿ ವಿದ್ಯಾರ್ಥಿಗಳಿಗೆ ಹತ್ತಲು ಸ್ಥಳಾವಕಾಶವಿಲ್ಲ ತರಗತಿಗೆ ಹಾಜರಾಗದ ಮಕ್ಕಳು

ಶಿವಮೂರ್ತಿ ಇಟಗಿ

Add Asianetnews Kannada as a Preferred SourcegooglePreferred

ಯಲಬುರ್ಗಾ (ಜೂ.15) ರಾಜ್ಯ ಸರ್ಕಾರ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣದ ಯೋಜನೆ ಆರಂಭಿಸಿದ ಬಳಿಕ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಿಬರಲು ಪರದಾಡುವಂತಾಗಿದೆ.

ಯಲಬುರ್ಗಾ ತಾಲೂಕಿನ ನಿಗದಿತ ಮಾರ್ಗದ ಬಸ್‌ಗಳು ಜನರಿಂದ ತುಂಬಿತುಳುಕುತ್ತಿದ್ದು, ವಿದ್ಯಾರ್ಥಿಗಳಿಗೆ ಸ್ಥಳಾವಕಾಶವೇ ಸಿಗುತ್ತಿಲ್ಲ. ಯಲಬುರ್ಗಾ ತಾಲೂಕಿನ ಬೇವೂರು ಕ್ರಾಸ್‌ನಲ್ಲಿ ಸೋಮವಾರ ವಿದ್ಯಾರ್ಥಿಗಳು ಬಸ್‌ಗಾಗಿ ಬೆಳಗ್ಗೆಯಿಂದ 7ರಿಂದ 11 ಗಂಟೆ ವರೆಗೂ ಕಾಯುತ್ತಾ ಕುಳಿತಿದ್ದ ದೃಶ್ಯ ಕಂಡುಬಂದಿದೆ. ತಾಲೂಕಿನ ವಣಗೇರಿ, ಹುಣಸಿಹಾಳ, ಕೋಳಿಹಾಳ, ಲಕಮನಗುಳೆ ಇನ್ನಿತರ ಗ್ರಾಮಗಳಿಂದ ಬೇವೂರು ಕ್ರಾಸ್‌ಗೆ ಆಗಮಿಸಿ ಕುಷ್ಟಗಿ ಹಾಗೂ ಕೊಪ್ಪಳ ನಗರ ಪ್ರದೇಶಗಳಲ್ಲಿನ ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ನಿತ್ಯವು ತೆರಳುತ್ತಾರೆ. ಆದರೆ ರಾಜ್ಯದಲ್ಲಿ ಭಾನುವಾರದಿಂದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಪ್ರಾರಂಭಿಸಲಾಯಿತು. ಇದರಿಂದ ಕೊಪ್ಪಳ ಮತ್ತು ಕುಷ್ಟಗಿಯಿಂದ ಆಗಮಿಸುವ ಎಲ್ಲ ಬಸ್‌ಗಳಲ್ಲಿ ಕಿಕ್ಕಿರಿದು ಜನ ತುಂಬಿಕೊಂಡಿದ್ದಾರೆ. ಬೇವೂರು ಕ್ರಾಸ್‌ನಲ್ಲಿ ಇಳಿಯುವವರಿಗಾಗಿ ಮಾತ್ರ ಬಸ್‌ ನಿಲುಗಡೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಬಸ್‌ನಲ್ಲಿ ಹತ್ತಲು ಸ್ಥಳಾವಕಾಶವಿಲ್ಲದೆ ಖಾಸಗಿ ವಾಹನಗಳಾದ ಆಟೋ, ಟಂಟಂ ಇನ್ನಿತರ ವಾಹನಗಳಲ್ಲಿ ಶಾಲಾ-ಕಾಲೇಜುಗಳಿಗೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದವು.

Congress guarantee: ಖಾಸಗಿ ವಲಯದ 'ಶಕ್ತಿ' ಕುಂದಿಸಿದ ಉಚಿತ ಗ್ಯಾರಂಟಿ!

ಶಕ್ತಿ ಯೋಜನೆ ಪ್ರಾರಂಭಕ್ಕೂ ಮುನ್ನ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಬಸ್‌ಪಾಸ್‌ ಮಾಡಿಸಿಕೊಂಡಿದ್ದಾರೆ. ಸರ್ಕಾರಿ ಬಸ್‌ಗಳಲ್ಲಿ ತೆರಳಲು ವಿದ್ಯಾರ್ಥಿಗಳಿಗೆ ಅವಕಾಶವಿದ್ದರೂ ಬಸ್‌ ಏರಲು ಸಾಧ್ಯವಾಗದಷ್ಟುಜನ ತುಂಬಿರುತ್ತಾರೆ. ವಾಹನ ಚಾಲಕ ಮತ್ತು ನಿರ್ವಾಹಕರಿಗೂ ಇದು ತಲೆನೋವಾಗಿ ಪರಿಣಮಿಸಿದೆ. ಅಲ್ಲದೇ ನಿಗದಿತ ಅವಧಿಯೊಳಗೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಹರಸಾಹಸಪಡುತ್ತಿದ್ದಾರೆ.

ಶಾಲಾ-ಕಾಲೇಜಿಗೆ ತೆರಳಲು ಬೆಳಗ್ಗೆಯಿಂದ ಬಂದು ಬಸ್‌ಗಾಗಿ ಕಾಯುತ್ತಾ ಇದ್ದೇವೆ. ಕುಷ್ಟಗಿಯಿಂದ ಬರುವ ಎಲ್ಲ ಬಸ್‌ಗಳಲ್ಲಿ ಜನ ತುಂಬಿಕೊಂಡು ಬರುತ್ತಿವೆ.ನಮಗೆ ಬಸ್‌ನಲ್ಲಿ ಹೋಗಲು ಜಾಗವಿಲ್ಲದೇ ಬೆಳಗ್ಗೆಯಿಂದ ಬೇವೂರು ಕ್ರಾಸ್‌ನಲ್ಲಿ ಕಾಯುತ್ತಾ ಇದ್ದೇವೆ.

ಸಾವಿತ್ರಿ, ಮಲ್ಲಮ್ಮ, ಗಿರಿಜಾ, ಅಶ್ವಿನಿ, ಹುಣಸಿಹಾಳ ಗ್ರಾಮದ ವಿದ್ಯಾರ್ಥಿನಿಯರು

ಧಾರವಾಡ: ಕಾಂಗ್ರೆಸ್ ಗ್ಯಾರಂಟಿ ಸ್ಕೀಂ, ಆಧಾರ ಕೇಂದ್ರಕ್ಕೆ ಮುಗಿಬಿದ್ದ ಜನ!

ನಿತ್ಯ ಇದೇ ಬಸ್‌ನಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ಹಲವು ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಬರುತ್ತಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಸ್‌ನಲ್ಲಿ ಪ್ರಯಾಣಿಸುತ್ತಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್‌ನಲ್ಲಿ ಹತ್ತಲು ಅವಕಾಶವಿಲ್ಲದಂತಾಗಿದೆ.

ಹೆಸರು ಹೇಳಲು ಇಚ್ಛಿಸದ ಚಾಲಕ ಹಾಗೂ ನಿರ್ವಾಹಕ