ರಾಜ್ಯ ಸಂಪೂರ್ಣ ಸ್ತಬ್ಧ : ಬಂದ್ಗೆ ಆರ್ಕೆಎಸ್ ಬೆಂಬಲ
ರಾಜ್ಯ ಸರ್ಕಾರ ಭೂ ಸುಧಾರಣ ತಿದ್ದುಪಡಿ ಮಸೂದೆಗೆ ಅಂಕಿತ ನೀಡಿದ್ದು ಈ ನಿಟ್ಟಿನಲ್ಲಿ ರೈತ ಸಂಘಟನೆಗಳು ಬಂದ್ಗೆ ಕರೆ ನೀಡಿವೆ. ಹಲವು ಸಂಘಟನೆಗಳು ಬಂದ್ಗೆ ಬೆಂಬಲ ನೀಡಿವೆ.
ತಿಪಟೂರು (ಸೆ.27): ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ಸೆ.28 ರಂದು ಕರೆ ನೀಡಿರುವ ಕರ್ನಾಟಕ ಬಂದ್ಗೆ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿಯು ಬೆಂಬಲ ವ್ಯಕ್ತಪಡಿಸಿದೆ. ಅಂದು ಬೆಳಗ್ಗೆ 11.30ಕ್ಕೆ ನಗರದ ಕೋಡಿ ಸರ್ಕಲ್ನಿಂದ ಉಪವಿಭಾಗಾಧಿಕಾರಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಆರ್ಕೆಎಸ್ನ ರಾಜ್ಯ ಸಮಿತಿ ಸದಸ್ಯ ಎಸ್.ಎನ್. ಸ್ವಾಮಿ ತಿಳಿಸಿದರು.
ನಗರದ ಎಪಿಎಂಸಿ ರೈತ ಭವನದಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ಹಾಗೂ ಕೃಷಿ ಕೂಲಿಕಾರರು, ಕಸುಬುದಾರ ಆಧಾರಿತ ಕೃಷಿ ವಿರೋಧಿಯಾದ ಮತ್ತು ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ಸಂಬಂಧಿತ ಬಿಲ್ಗಳನ್ನು ಕೂಡಲೆ ವಾಪಸ್ ಪಡೆಯಬೇಕು. ಎಪಿಎಂಸಿ ರದ್ದು, ಭೂಸುಧಾರಣೆ ತಿದ್ದುಪಡಿ ಕಾಯ್ದೆ, ಕಾರ್ಮಿಕ ವಿರೋಧಿ ಕಾಯ್ದೆ ಮುಂತಾದ ಸುಗ್ರೀವಾಜ್ಞೆಗಳನ್ನು ಹಿಂಪಡೆಯುವ ಸೇರಿದಂತೆ ಸರ್ಕಾರಗಳ ಅನೇಕ ವಿರೋಧಿ ನೀತಿಗಳ ವಿರುದ್ಧ ಹೋರಾಡುವ ಸಲುವಾಗಿ ಕರ್ನಾಟಕ ಬಂದ್ಗೆ ಕರೆ ನೀಡಲಾಗಿದೆ ಎಂದರು.
ಸೆ.28 ಕರ್ನಾಟಕ ಬಂದ್ : ಹಲವು ಸೇವೆ ವ್ಯತ್ಯಯ. ಎಚ್ಚರ ...
ಸುದ್ದಿಗೋಷ್ಠಿಯಲ್ಲಿ ಹಸಿರು ಸೇನೆ ಅಧ್ಯಕ್ಷ ಟಿ.ಎಸ್. ದೇವರಾಜು, ಆರ್ಕೆಎಸ್ ತಾ.ಅಧ್ಯಕ್ಷ ಬಸ್ತೀಹಳ್ಳಿ ರಾಜಣ್ಣ, ತಾ. ಸಂಚಾಲಕ ಲೋಕೇಶ್ ಬೈರನಾಯ್ಕನಹಳ್ಳಿ, ಪಟೇಲ್ ಶಿವಮೂರ್ತಿ, ನಂಜಾಮರಿ, ದಯಾನಂದ್, ಕಲ್ಲಪ್ಪ, ಚಂದನ್, ಯೋಗಾನಂದಸ್ವಾಮಿ ಮತ್ತಿತರರಿದ್ದರು.