ಕೆಲವು  ದಿನಗಳ ಹಿಂದಷ್ಟೇ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದ ಶಾಸಕ ಹಾಲಪ್ಪ ಇದೀಗ ಮತ್ತೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. 

ಸಾಗರ (ಸೆ.08): ಇತ್ತೀಚೆಗಷ್ಟೇ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದ ಶಾಸಕ ಹರತಾಳು ಹಾಲಪ್ಪ ಅವರ ಆರೋಗ್ಯದಲ್ಲಿ ಸೋಮವಾರ ಏರುಪೇರು ಕಾಣಿಸಿದ್ದು, ತಕ್ಷಣವೇ ಬೆಂಗಳೂರು ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಾಲಪ್ಪ ಬುಧವಾರವಷ್ಟೇ ಆಸ್ಪತ್ರೆಯಿಂದ ಬಿಡುಗಡೆಗೊಂಡು ಸಾಗರಕ್ಕೆ ಮರಳಿದ್ದರು. ಮೂರ್ಕಾಲು ದಿನ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ರಾಜ್ಯದಲ್ಲಿ 4 ಲಕ್ಷ ದಾಟಿದ ಕೊರೋನಾ ಸಂಖ್ಯೆ: ಸೋಮವಾರ ಸೋಂಕಿತರಿಗಿಂತ ಗುಣಮುಖರಾದವರೇ ಹೆಚ್ಚು..!

ಸೋಮವಾರ ಬಾರಂಗಿ ಹೋಬಳಿಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ, ಬೆಳಗ್ಗೆಯೇ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿದ್ದರಿಂದ ಕಾರ್ಯಕ್ರಮ ರದ್ದುಗೊಳಿಸಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದರು. 

ಮಧ್ಯಾಹ್ನದ ಬಳಿಕ ಆರೋಗ್ಯ ಇನ್ನಷ್ಟುಬಿಗಡಾಯಿಸಿದ್ದರಿಂದ ತಕ್ಷಣವೇ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದರು ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.