ಮಹಾರಾಷ್ಟ್ರ ಬಿಜೆಪಿ ನಿಲುವೇನು ಎಂದು ಪ್ರಶ್ನಿಸಿದ ಶಿವಸೇನೆ ಮುಖವಾಣಿ| ಕರ್ನಾಟಕದ ಗಡಿಭಾಗದಲ್ಲಿನ ಮರಾಠಿ ಭಾಷಿಕರ ಮೇಲೆ ನಿರಂತರವಾಗಿ ದೌರ್ಜನ್ಯ| ಬೆಳಗಾವಿ ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಸಾಮ್ನಾ ಪತ್ರಿಕೆ ಸಂಪಾದಕೀಯದಲ್ಲಿ ಒತ್ತಾಯ| 

ಬೆಳಗಾವಿ(ಜ.30): ನಾವು ಮುಂಬಯಿ ಕರ್ನಾಟಕದವರು, ಮುಂಬಯಿ ನಮ್ಮದು’ ಎಂಬ ಹೇಳಿಕೆ ನೀಡಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ಧ ಶಿವಸೇನೆ ಮುಖವಾಣಿ ಸಾಮ್ನಾ ಪತ್ರಿಕೆ ಸಂಪಾದಕೀಯದಲ್ಲಿ ಕಿಡಿಕಾರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗಾವಿ ಗಡಿ ವಿಚಾರದಲ್ಲಿ ಲಕ್ಷ್ಮಣ ರೇಖೆ ದಾಟಿದ ಸವದಿ’ ಎಂದು ಸಂಪಾದಕೀಯ ಪ್ರಕಟಿಸಿದ್ದು, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಿಜೆಪಿಯ ಪುಡಾರಿ. ಸವದಿ ಹೇಳಿಕೆಯಿಂದ 105 ಹುತಾತ್ಮರಿಗೆ ಅವಮಾನವಾಗಿದೆ. ಈ ಪುಡಾರಿಯ ಬಗ್ಗೆ ಮಹಾರಾಷ್ಟ್ರ ಬಿಜೆಪಿ ನಾಯಕರು ನಿಲುವೇನು ಎಂದು ಪ್ರಶ್ನಿಸಲಾಗಿದೆ.

ಮಹಾರಾಷ್ಟ್ರದ ಸಾವಿರ ಸಿಎಂಗಳು ಬಂದು ಹೇಳಿದ್ರೂ ಬೆಳಗಾವಿ ಕರ್ನಾಟಕದ್ದೇ: ಸವದಿ

ಕೇಂದ್ರಾಡಳಿತ ಘೋಷಿಸಿ: 

ಕರ್ನಾಟಕದ ಗಡಿಭಾಗದಲ್ಲಿನ ಮರಾಠಿ ಭಾಷಿಕರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಬೆಳಗಾವಿ ಮರಾಠಿ ಶಾಲೆಗಳಿಗೆ ಯಾವುದೇ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಬೆಳಗಾವಿ ಮಹಾನಗರ ಪಾಲಿಕೆ ಎದುರು ಭಗವಾ ಧ್ವಜ ತೆರವುಗೊಳಿಸಿ ಅನ್ಯಾಯ ಮಾಡಲಾಗಿದೆ. ಯಳ್ಳೂರು ಗ್ರಾಮದಲ್ಲಿನ ಮಹಾರಾಷ್ಟ್ರ ರಾಜ್ಯ ನಾಮಫಲಕ ತೆರವುಗೊಳಿಸಲಾಗಿದೆ. ಶಿವಾಜಿ ಪುತ್ಥಳಿಯನ್ನು ತೆರವುಗೊಳಿಸಲಾಗಿದೆ. ಹೀಗಾಗಿ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸುವಂತೆ ಸಾಮ್ನಾ ಪತ್ರಿಕೆ ಸಂಪಾದಕೀಯದಲ್ಲಿ ಒತ್ತಾಯಿಸಲಾಗಿದೆ.

ಸುಪ್ರೀಂ ವಿರುದ್ಧವೂ ಗಂಭೀರ ಆರೋಪ: 

ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿದ್ದರೂ ನ್ಯಾಯ ಸಿಗುತ್ತಿಲ್ಲ. ಪತ್ರಕರ್ತ ಅರ್ನಬ್‌ ಗೋಸ್ವಾಮಿ, ನಟಿ ಕಂಗನಾ ರಣಾವತ್‌ ಅಂತಹವರಿಗೆ ಸುಪ್ರೀಂಕೋರ್ಟ್‌ನಲ್ಲಿ ಶೀಘ್ರಗತಿಯಲ್ಲಿ ನ್ಯಾಯ ಸಿಗುತ್ತದೆ. ಆದರೆ, ಲಕ್ಷಾಂತರ ಮರಾಠಿಗರಿಗೆ ಸುಪ್ರೀಂಕೋರ್ಟ್‌ನಲ್ಲಿ ನ್ಯಾಯ ಸಿಗುತ್ತಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಅಪಮಾನವಾಗುವ ರೀತಿಯಲ್ಲಿ ಆರೋಪಿಸಿ ಸಾಮ್ನಾದಲ್ಲಿ ಲೇಖನ ಪ್ರಕಟಿಸಿದೆ.