ಕಳಪೆ ಗುಣಮಟ್ಟದ (ಹಾಲ್ಫ್ ಹೆಲ್ಮೆಟ್) ಧರಿಸಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ಗೆ ಆರ್‌.ಟಿ.ನಗರ ಸಂಚಾರ ಠಾಣೆ ಪೊಲೀಸರು ಮಂಗಳವಾರ ದಂಡ ವಿಧಿಸಿದ್ದು, ಈ ಪ್ರಕರಣವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ಬೆಂಗಳೂರು (ಅ.20): ಕಳಪೆ ಗುಣಮಟ್ಟದ (ಹಾಫ್‌ ಹೆಲ್ಮೆಟ್‌) ಧರಿಸಿದ್ದ ಪೊಲೀಸ್‌ ಕಾನ್‌ಸ್ಟೇಬಲ್‌ಗೆ ಆರ್‌.ಟಿ.ನಗರ ಸಂಚಾರ ಠಾಣೆ ಪೊಲೀಸರು ಮಂಗಳವಾರ ದಂಡ ವಿಧಿಸಿದ್ದು, ಈ ಪ್ರಕರಣವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ನಗರ ಪೊಲೀಸ್‌ ಆಯುಕ್ತ ಕಚೇರಿಯ ಕಾನ್‌ಸ್ಟೇಬಲ್‌ಗೆ ದಂಡದ ವಿಧಿಸಲಾಗಿದೆ. ಹಾಫ್‌ ಹೆಲ್ಮಟ್‌ ಧರಿಸಿಕೊಂಡು ಜಯಮಹಲ್‌ ರಸ್ತೆಯಲ್ಲಿ ತೆರಳುವಾಗ ಅವರಿಗೆ ಆರ್‌.ಟಿ.ನಗರ ಸಂಚಾರ ಠಾಣೆ ಎಎಸ್‌ಐ ಸತ್ಯನಾರಾಯಣ ದಂಡ ಹಾಕಿದ್ದಾರೆ. ಈ ಬಗ್ಗೆ ಫೋಟೋ ಸಹಿತ ಆರ್‌.ಟಿ.ನಗರ ಸಂಚಾರ ಪೊಲೀಸರು ಟ್ವಿಟ್‌ ಮಾಡಿದ್ದರು. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು ಪೊಲೀಸರ ಕ್ರಮವನ್ನು ಲೇವಡಿ ಮಾಡಿದ್ದಾರೆ.

‘ಅವರ ವಾಹನದ ಮೇಲೆ 7 ಕೇಸ್‌ಗಳಿವೆ. ಹೇಗೆ ಬಿಟ್ಟು ಕಳುಹಿಸಿದ್ದೀರಾ ಸರ್‌? ಸಾಮಾನ್ಯ ಜನರಿಗೆ ಒಂದು ನ್ಯಾಯ ಸರ್ಕಾರಿ ಹುದ್ದೆಯಲ್ಲಿರುವವರೆಗೆ ಒಂದು ನ್ಯಾಯನಾ’ ಎಂದು ಪ್ರಭು ಎಂಬಾತ ಆಕ್ಷೇಪಿಸಿದ್ದಾರೆ. ‘ಅವರೇನು ತಮ್ಮ ಸಂಬಳದಲ್ಲಿ ದಂಡ ಕಟ್ಟಿಲ್ಲ ಬಿಡಿ. ಯಾರ ಹತ್ತಿರವಾದರು ರೋಲ್‌ ಕಾಲ್‌ ಮಾಡಿ ಆ ಹಣದಲ್ಲಿ ದಂಡ ಕಟ್ಟುತ್ತಾರೆ ಅಷ್ಟೇ’ ಎಂದು ಹರೀಶ್‌ ಕುಹುಕವಾಡಿದ್ದಾರೆ. ‘ಐಎನ್‌ಡಿ ಇಲ್ವಲ್ಲ ಸರ್‌. ನಮಗಾದ್ರೆ ಐಎನ್‌ಡಿ ಇಲ್ಲ ಅಂತ ಫೈನ್‌ ಹಾಕುತ್ತೀರ. ಡಿಫೆಕ್ಟಿವ್‌ ನಂಬರ್‌ ಪ್ಲೇಟ್‌ ಅಂತ ಚಾಲನ್‌ ಕೊಡದೆ ಫೈನ್‌ ತಕೊಂಡು ಇದು ಯಾವ ನ್ಯಾಯ’ ಎಂದು ಇಂಡಿಯನ್‌ ಮೂವ್‌ಮೆಂಟ್‌ ಪಾರ್ಟಿ ಪ್ರಶ್ನಿಸಿದೆ.

ಎಚ್ಚರ ಎಚ್ಚರ... ಸೀಟ್‌ ಬೆಲ್ಟ್‌ ಧರಿಸದಿದ್ದರೆ ಇನ್ನು 1000 ರು. ದಂಡ!

ರೈಲ್ವೆ ಮೇಲ್ಸೇತುವೆ ಗುತ್ತಿಗೆದಾರನಿಗೆ 20 ಲಕ್ಷ ದಂಡ: ಉದ್ಘಾಟನೆಗೊಂಡ ಎರಡೇ ದಿನದಲ್ಲಿ ಕಳಪೆ ಕಾಮಗಾರಿಯಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿ, ಭಾರೀ ಚರ್ಚೆಗೀಡಾದ ಟಿಳಕವಾಡಿಯ ಮೂರನೇ ರೈಲ್ವೆ ಮೇಲ್ಸೇತುವೆ ಕಾಮಗಾರಿ ಗುತ್ತಿಗೆದಾರನಿಗೆ ರೈಲ್ವೆ ಇಲಾಖೆ ಬರೋಬ್ಬರಿ . 20 ಲಕ್ಷ ದಂಡ ವಿಧಿಸಿದೆ. ಟಿಳಕವಾಡಿಯ 3ನೇ ರೈಲ್ವೆ ಗೇಟ್‌ ಬಳಿಯಲ್ಲಿ ಲೆವೆಟಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 381ಕ್ಕೆ ಬದಲಾಗಿ ನಿರ್ಮಿಸಲಾದ ರಸ್ತೆ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಾಗಿತ್ತು.

ಸಂಚಾರಕ್ಕೆ ಮುಕ್ತಗೊಂಡ ರೈಲ್ವೆ ಮೇಲ್ಸೇತುವೆ ರಸ್ತೆಯ ಮೇಲೆ ತಗ್ಗು ಗುಂಡಿ ಬಿದ್ದಿದ್ದರಿಂದ ದುರಸ್ತಿ ಕಾರ್ಯ ಕೈಗೊಳ್ಳಲಾಯಿತು. ಈ ಸೇತುವೆ ಮೇಲೆ ಸಂಚಾರವನ್ನೂ ನಿರ್ಬಂಧಿಸಲಾಯಿತು. ಈ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ನಡೆದಿರುವುದು ಕಂಡುಬಂದಿತ್ತು. ಈ ಕುರಿತು ಕನ್ನಡಪ್ರಭದ ಬುಧವಾರದ ಸಂಚಿಕೆಯಲ್ಲಿ ‘ರೈಲ್ವೆ ಮೇಲ್ಸೇತುವೆ ಬಣ್ಣ ಎರಡೇ ದಿನದಲ್ಲಿ ಬಯಲು’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ, ಗಮನ ಸೆಳೆದಿತ್ತು. ವರದಿಗೆ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಪಂದಿಸಿ, ಕಾಮಗಾರಿ ತನಿಖೆಗೆ ಆದೇಶಿಸಿದ್ದರು.

ರೈಲ್ವೆ ಇಲಾಖೆಯ ಮುಖ್ಯ ಆಡಳಿತಾತ್ಮಕ ಅಧಿಕಾರಿ ನಿರ್ದೇಶನದ ಮೇರೆಗೆ ಮುಖ್ಯ ಎಂಜಿನಿಯರ್‌ ಈ ರೈಲ್ವೆ ರಸ್ತೆ ಮೇಲ್ಸೇತುವೆ ಕಾಮಗಾರಿ ಕುರಿತು ತನಿಖೆ ಕೈಗೊಂಡಿದ್ದರು. ರೈಲ್ವೆ ಮೇಲ್ಸೇತುವೆ ಮೇಲೆ ವಾಹನ ಸಂಚಾರಕ್ಕೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಅಪ್ರೋಚ್‌ ರಸ್ತೆ ಮತ್ತು ಗಿರ್ಡರ್‌ ಧಾರಾಕಾರ ಮಳೆಯಿಂದಾಗಿ ಹಾನಿಗೀಡಾಗಿದೆ. ಕೂಡಲೇ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ. ಡಾಂಬರೀಕರಣದಲ್ಲಿ ನಿರ್ಲಕ್ಷ ತೋರಿದ ಹಿನ್ನೆಲೆಯಲ್ಲಿ ಗುತ್ತಿಗೆದಾರನಿಗೆ . 20 ಲಕ್ಷ ದಂಡ ವಿಧಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ತ್ಯಾಜ್ಯ ನಿರ್ವಹಣೆ ಲೋಪ: ಕರ್ನಾಟಕಕ್ಕೆ 2900 ಕೋಟಿ ದಂಡ

ಈ ನಡುವೆ ಕಾಂಗ್ರೆಸ್‌ ಕಾರ್ಯಕರ್ತರು ಈ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ಅವೈಜ್ಞಾನಿಕ ನಡೆದಿದ್ದು, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ, ಈ ಮೇಲ್ಸೇತುವೆ ರಸ್ತೆ ಮೇಲೆಯೇ ನಕಲಿ ನೋಟಿನ ರಾಶಿಯನ್ನು ಸುರಿದು ಕಾಂಗ್ರೆಸ್‌ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.