ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಸ್ಥಳಾಂತರ: ಸೆ.8ಕ್ಕೆ ರಾಮನಗರ ಬಂದ್
ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿಸಿ ಸೆ.8ರಂದು ರಾಮನಗರ ಬಂದ್ ಗೆ ಕರೆ ನೀಡುವುದು. ಆನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಮುತ್ತಿಗೆ ಹಾಕುವುದು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದು.
ರಾಮನಗರ (ಆ.30): ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿಸಿ ಸೆ.8ರಂದು ರಾಮನಗರ ಬಂದ್ ಗೆ ಕರೆ ನೀಡುವುದು. ಆನಂತರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಮುತ್ತಿಗೆ ಹಾಕುವುದು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುವುದು. ನಗರದ ಕೃಷ್ಣಸ್ಮೃತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕೆಂಗಲ್ ಹನುಮಂತಯ್ಯ ಮೆಡಿಕಲ್ ಕಾಲೇಜು ಹೋರಾಟ ಸಮಿತಿ ಮೆಡಿಕಲ್ ಕಾಲೇಜು ಸ್ಥಳಾಂತರ ವಿರೋಧಿಸಿ ಆಯೋಜಿಸಿದ್ದ ಸಾರ್ವಜನಿಕರ ಸಭೆಯಲ್ಲಿ ಮೆಡಿಕಲ್ ಕಾಲೇಜನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟದ ರೂಪುರೇಷೆಗಳನ್ನು ರೂಪಿಸಲಾಯಿತು.
ಕಾಂಗ್ರೆಸ್ ಹೊರತು ಪಡಿಸಿ ಜೆಡಿಎಸ್, ಬಿಜೆಪಿ ಪಕ್ಷಗಳ ಮುಖಂಡರು, ರೈತ ಸಂಘ, ದಲಿತ ಸಂಘಟನೆ ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳನ್ನು ಒಳಗೊಂಡಂತೆ ಪಕ್ಷಾತೀತವಾಗಿ ನಡೆದ ಸಾರ್ವಜನಿಕರ ಸಭೆಯಲ್ಲಿ ನಮ್ಮ ಮೆಡಿಕಲ್ ಕಾಲೇಜು ನಮ್ಮ ಹಕ್ಕು ಘೋಷಣೆಯಡಿ ಮೆಡಿಕಲ್ ಕಾಲೇಜನ್ನು ರಾಮನಗರದಲ್ಲಿಯೇ ಉಳಿಸಿಕೊಳ್ಳಲು ತೀವ್ರತರವಾದ ಚಳವಳಿ ನಡೆಸುವುದು. ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರನ್ನು ಚಳವಳಿಯಲ್ಲಿ ತೊಡಗಿಸಿಕೊಂಡು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ರಾಜೀವ್ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ರಾಮನಗರಕ್ಕೆ ಅವಮಾನ: ಎಚ್ಡಿಕೆ ಆಕ್ರೋಶ
ಸೆ.8ರ ರಾಮನಗರ ಬಂದ್ ಸಂಬಂಧ ಆಗಸ್ಟ್ 30ರಂದು ನಗರದ ಪ್ರವಾಸಿ ಮಂದಿರದಲ್ಲಿ ಮತ್ತೊಂದು ಸುತ್ತಿನ ಸಭೆ ಆಯೋಜಿಸಿ, ಬಂದ್ ಗೆ ಕರೆ ನೀಡುವ ಸಂಬಂಧ ರೂಪುರೇಷಗಳ ಕುರಿತು ಚರ್ಚಿಸಲು ಪದಾಧಿಕಾರಿಗಳು ನಿರ್ಣಯ ಕೈಗೊಂಡರು. ಬಿಜೆಪಿ ಮುಖಂಡ ಪ್ರಸಾದ್ ಗೌಡ ಮಾತನಾಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ದೇಶದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು. ನಿಮ್ಮ ಸ್ವಂತ ಹಣದಲ್ಲಿಯೇ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಬಹುದು. ಇಲ್ಲವೆ ದಾನಿಗಳಿಂದ ನಿರ್ಮಾಣ ಮಾಡಿಸಬಹುದು. ವಿನಾ ಕಾರಣ ಜನರು ತಿರುಗಿ ಬೀಳಲು ಅವಕಾಶ ನೀಡಬೇಡಿ. ಹೋರಾಟಕ್ಕೆ ಹೆಜ್ಜೆ ಇಟ್ಟಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಅಶ್ವತ್ಥ ನಾರಾಯಣ ಸೇರಿ ಅನೇಕ ನಾಯಕರನ್ನು ಕರೆತಂದು ಹೋರಾಟ ನಡೆಸಿ ಮೆಡಿಕಲ್ ಕಾಲೇಜನ್ನು ಉಳಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಡಿಕೆ ಸಹೋದರರಿಗೆ ತಮಿಳುನಾಡಿನ ಮೇಲೆ ಹೆಚ್ಚಿನ ಪ್ರೀತಿ ತೋರಿಸುತ್ತಿದ್ದು, ಎಲ್ಲ ಯೋಜನೆಗಳನ್ನು ಗಡಿ ಭಾಗಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಏನೆಂದು ಗೊತ್ತಾಗುತ್ತಿಲ್ಲ. ಕನಕಪುರಕ್ಕೆ ಪ್ರತ್ಯೇಕ ಮೆಡಿಕಲ್ ಕಾಲೇಜು ತಂದು ನಿಮ್ಮ ಗಟ್ಟಿತನ ತೋರಿಸಿ, ಜಿಲ್ಲಾ ಬೆಳವಣಿಗೆ , ಮಕ್ಕಳ ವ್ಯಾಸಂಗ, ಉದ್ಯೋಗಾವಕಾಶಗಳ ದೃಷ್ಟಿಯಿಂದ ರಾಮನಗರ ಕಾಲೇಜು ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ಸಾಹಿತಿ ಶಿವಲಿಂಗಯ್ಯ ಮಾತನಾಡಿ, ಮೆಡಿಕಲ್ ಕಾಲೇಜು ಉಳಿವಿಗಾಗಿ ನಡೆಯುತ್ತಿರುವ ಹೋರಾಟ ರಾಜಕೀಯಕರಣ ಆಗಬಾರದು. ಅದು ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ನಡೆದಾಗ ಮಾತ್ರ ಜಯ ಸಿಗಲಿದೆ. ಆರೋಗ್ಯದ ದೃಷ್ಟಿಯಿಂದ ಜಿಲ್ಲಾ ಕೇಂದ್ರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಗೊಳ್ಳುವುದು ಸೂಕ್ತ ಎಂದು ತಿಳಿಸಿದರು.
ಪ್ರತಿ ವಿಚಾರದಲ್ಲು ರಾಮನಗರಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ಸಾಹಿತ್ಯ, ಸಾಂಸ್ಕೃತಿಕ ಹಾಗೂ ಹೋರಾಟದ ವಿಚಾರದಲ್ಲಿಯೂ ರಾಮನಗರ ಹಿಂದುಳಿದಿದೆ. ಇದಕ್ಕೆ ದಿವ್ಯ ನಿರ್ಲಕ್ಷ್ಯ ಮತ್ತು ಹೋರಾಟದ ಮನೋಭಾವನೆ ಇಲ್ಲದಿರುವುದೆ ಕಾರಣ. ಮೆಗಾ ಡೇರಿ, ರೇಷ್ಮೆ ಮಾರುಕಟ್ಟೆಕಾರಣಾಂತರಗಳಿಂದ ಸ್ಥಳಾಂತರಗೊಂಡವು. ಅದೇ ಹಾದಿಯಲ್ಲಿ ಮೆಡಿಕಲ್ ಕಾಲೇಜು ಕೂಡ ಸಾಗಿದೆ. ರೇಷ್ಮೆನಗರಿಯ ಅಸ್ಮಿತೆ ಅಳಿಸುವ ಪ್ರಯತ್ನ ನಡೆಯುತ್ತಿವೆ ಎಂದು ಕಿಡಿಕಾರಿದರು. ನಿವೃತ್ತ ಪೊಲೀಸ್ ಅಧಿಕಾರಿ ಪುರುಷೋತ್ತಮ್, ಗ್ರಾಪಂ ಮಾಜಿ ಅಧ್ಯಕ್ಷ ಎನ್.ರಮೇಶ್, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ, ಜೆಡಿಎಸ್ ಮುಖಂಡ ರೈಡ್ ನಾಗರಾಜ್, ಬಿಜೆಪಿ ಮುಖಂಡ ಎಸ್.ಆರ್ .ನಾಗರಾಜ್, ರೈತಸಂಘ ಮುಖಂಡ ಮಲ್ಲಯ್ಯ, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ, ರಾಜ್ಯ ಉಸ್ತುವಾರಿ ಅಧ್ಯಕ್ಷ ಶಿವುಗೌಡ, ಆರ್ಯವೈಶ್ಯ ಸಮುದಾಯದ ಮುಖಂಡ ಉಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಕುಮಾರಸ್ವಾಮಿ ಮಂಜೂರು ಮಾಡಿದ್ದ ಕಾಲೇಜು: ಶಾಸಕ ಎ.ಮಂಜುನಾಥ್ ಮಾತನಾಡಿ, ಡಿಕೆ ಸಹೋದರರಿಗೆ ಜಿಲ್ಲೆಯ ಬಗೆಗೆ ಎಳ್ಳಷ್ಟುಮಮಕಾರ ಇಲ್ಲ. ಕುಮಾರಸ್ವಾಮಿಯವರು ಸಿಎಂ ಆಗಿದ್ದಾಗ ಮಂಜೂರು ಮಾಡಿದ ರಾಜೀವ್ ಗಾಂಧಿ ಆರೋಗ್ಯ ವಿವಿ ಕ್ಯಾಂಪಸ್ನಲ್ಲಿ ನಿರ್ಮಾಣ ಆಗಬೇಕಿರುವ ಮೆಡಿಕಲ್ ಕಾಲೇಜನ್ನು ಕಳ್ಳತನ ಮಾಡಿಕೊಂಡು ಕನಕಪುರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ನೀವು ಸತ್ಯ ನುಡಿಯುವುದಾದರೆ ಒಮ್ಮೆ ದಾಖಲೆಗಳನ್ನು ತೆಗೆದು ನೋಡಿ. ಕನಕಪುರದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಯಾರೂ ಕಸಿದುಕೊಂಡು ಹೋಗಲಿಲ್ಲ.
ಕಾಂಗ್ರೆಸ್ನ 5 ಗ್ಯಾರಂಟಿಗಳು ಐದೂ ವರ್ಷ ಇರುತ್ತೆ: ಸಂಸದ ಡಿ.ಕೆ.ಸುರೇಶ್
ಬದಲಿಗೆ ಚಿಕ್ಕಬಳ್ಳಾಪುರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಡಿಕೆ ಸಹೋದರರು ಕಸಿದುಕೊಂಡು ಕನಕಪುರಕ್ಕೆ ತಂದಿದ್ದರು. ಆನಂತರ ಯಡಿಯೂರಪ್ಪರವರ ಸರ್ಕಾರದಲ್ಲಿ ಕನಕಪುರಕ್ಕೆ ತರಲಾಗಿದ್ದ ಮೆಡಿಕಲ್ ಕಾಲೇಜು ಚಿಕ್ಕಬಳ್ಳಾಪುರಕ್ಕೆ ವಾಪಸ್ ಹೋಯಿತು. ಈ ಸತ್ಯ ಸಂಗತಿಯನ್ನು ಮರೆ ಮಾಚುತ್ತಿರುವ ಡಿಕೆ ಸಹೋದರರು ಇದೀಗ ರಾಮನಗರದ ಮೆಡಿಕಲ್ ಕಾಲೇಜನ್ನು ಕಳ್ಳತನ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಯಾವ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ರಾಮನಗರ ಶಾಸಕರು ಬಕೆಟ್ ಹಿಡಿಯುವ ಸಂಸ್ಕೃತಿ ಉಳ್ಳವರು. ಅವರಿಗೆ ನಿಮ್ಮ ಎದುರು ಮಾತನಾಡುವ ಧೈರ್ಯವಿಲ್ಲ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ನೀವು ನಿಂತುಕೊಳ್ಳಿ ಅಂದರೆ ನಿಲ್ಲುತ್ತಾರೆ, ಕುಳಿತುಕೊಳ್ಳಿ ಅಂದರೆ ಕುಳಿತುಕೊಳ್ಳುತ್ತಾರೆ. ಇಂತಹ ನಾಯಕರಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಮಂಜುನಾಥ್ ವ್ಯಂಗ್ಯವಾಡಿದರು.